ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೃಷಿ ಪದ್ದತಿಯಲ್ಲಿ ಸಮಗ್ರ ಕೃಷಿ ನೀತಿಯನ್ನು ಅನುಸರಿಸಿ ಎಂದು ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಹೇಳಿದರು.
ಶನಿವಾರ ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 45ನೇ ಮಾಲಿಕೆ ಕೋಟತಟ್ಟು ಪಡುಕರೆ ಅನುಸೂಯ ಹಂದೆ ಇವರನ್ನು ರೈತ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ ರೈತರು ಒಂದೇ ಬಗೆಯ ಬೆಳೆ ಬೆಳೆಯದೆ ಕಾಲಕ್ಕನುಗುಣವಾಗಿ ಮಣ್ಣಿಗೆ ಯೋಗ್ಯವಾದ ಬೆಳೆಗಳನ್ನು ಬೆಳೆಯಬೇಕು ಆಗ ಲಾಭದಾಯ ಬೆಳೆಯಾಗಿಸಲು ಸಾಧ್ಯವಿದೆ ಎಂದರಲ್ಲದೆ ಪ್ರಸುತ ರೈತ ಸಮುದಾಯಕ್ಕೆ ಅನುಕೂಲಕರ ಯೋಜನೆಗಳು ಶೂನ್ಯವಾಗಿದೆ. ಸರಕಾರ ಕೃಷಿಕರಿಗೆ ಹೆಚ್ಚಿನ ಉತ್ತೇಜನ ನೀಡಿದರೆ ಕೃಷಿ ಪರಂಪರೆ ಉಳಿಯಲು ಸಾಧ್ಯವಿದೆ. ಪಂಚವರ್ಣ ಸಂಘಟನೆ ರೈತರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು ಎಂದರು.
ಈ ವೇಳೆ ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರದ ಸಾಧಕಿ ಅನುಸೂಯ ಹಂದೆ ಇವರಿಗೆ ಕೃಷಿ ಪರಿಕರ ನೀಡಿ ಗೌರವಿಸಲಾಯಿತು. ಅಲ್ಲದೆ ಪರಿಸರ ಜಾಗೃತಿ ಸಲುವಾಗಿ ಗಿಡ ನೆಟ್ಟು ,ಗೋ ಪೂಜೆ ನೆರವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್ ಪ್ರಮೋದ್ ಹಂದೆ ದೀಪ ಬೆಳೆಗಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಉಪಾಧ್ಯಕ್ಷ ನಾಗರಾಜ್ ಹಂದೆ, ಕರ್ಣಾಟಕ ಬ್ಯಾಂಕ್ ನಿವೃತ್ತ ಡಿಜಿಎಂ ರವೀಂದ್ರ ಹಂದೆ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸದಸ್ಯ ಮಹೇಶ್ ಬೆಳಗಾವಿ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.











