ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವಿಶ್ವ ಕಾರ್ಮಿಕ ದಿನವಾದ ಮೇ 1ರಂದು ಕುಂದಾಪುರದಲ್ಲಿ ಕಾರ್ಮಿಕ ವರ್ಗ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಬಹಿರಂಗ ಸಮಾವೇಶ ಕೈಗೊಂಡಿತು. ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಏಚ್. ನರಸಿಂಹ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಮಿಕ ವಿರೋಧಿ ಶ್ರಮ ಸಂಹಿತೆಗಳ ಜ್ಯಾರಿಗೇ ಕಾರ್ಮಿಕ ವರ್ಗ ಬಿಡುವುದಿಲ್ಲ ಎಂಬುದಾಗಿ ಘೋಷಿಸಿದರು. ಈ ಪ್ರಯುಕ್ತ ಮೇ ತಿಂಗಳ 20 ರಂದು ಅಖಿಲ ಭಾರತ ಮಟ್ಟದಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಡೆಯುವ ಸಾರ್ವತ್ರಿಕ ಮುಷ್ಕರಕ್ಕೆ ಕುಂದಾಪುರ ಕಾರ್ಮಿಕರ ಬೆಂಬಲ ವ್ಯಕ್ತಪಡಿಸಿದರು. ಮುಷ್ಕರ ಯಶಸ್ವಿ ಮಾಡುವಂತೆ ಕಾರ್ಮಿಕರಿಗೆ ಕರೆ ನೀಡಿದರು.
ಕೇಂದ್ರ ಸರಕಾರ ಈಗ ಇರುವ ಕಾರ್ಮಿಕರ 29 ಕಾಯ್ದೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ತಂದು, ನೂತನ ಶ್ರಮ ಸಂಹಿತೆಯ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದು ಗುಲಾಮಗಿರಿಗೆ ತಳ್ಳಲಿದೆ. ಕೇಂದ್ರ, ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು ರಾಜ್ಯ ಸರಕಾರ ಬಿಜೆಪಿ ಜ್ಯಾರಿಗೆ ತಂದ 12 ಘಂಟೆಗಳ ದುಡಿಮೆ ನೀತಿ ವಾಪಸು ಪಡೆಯಲಿಲ್ಲ ಎಂದು ಆರೋಪಿಸಿದರು.
ತಾಲೂಕು ಸಿಐಟಿಯು ಸಂಚಾಲಕ ಚಂದ್ರಶೇಖರ್ ವಿ ಮಾತನಾಡಿ, ಅಮೆರಿಕ ಪ್ರೇರಿತ ಇಸ್ರೇಲ್ ದಾಳಿಯಲ್ಲಿ ಜರ್ಜರಿತಗೊಂಡ ಪ್ಯಾಲೆಸ್ಟೈನ್ ಜನತೆಗೆ ಸೌಹಾರ್ಧ ಬೆಂಬಲ ಘೋಷಿಸಿದರು. ಸಮಾಜವಾದಿ ರಾಷ್ಟ್ರವಾದ ವಿಯೇಟ್ನಾಂನಿಂದ ಅಮೆರಿಕ ಸೇನಾಪಡೆಯನ್ನು ಓಡಿಸಿ 50 ವರ್ಷಗಳ ಆಚರಣೆಗೆ ಶುಭ ಕೋರಿದರು. ಪೆಹೆಲ್ಗಾಂ ದಾಳಿಯನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದನ್ನು ಖಂಡಿಸಿದರು. ಈ ವಿಚಾರದಲ್ಲಿ ಕೇಂದ್ರ ಸರಕಾರ ತನ್ನ ಭದ್ರತಾ ವೈಫಲ್ಯವನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದರು. ಪೆಹಲ್ಗಾಮ್ ದಾಳಿಯಲ್ಲಿ ಮೃತರಾದ 26 ಮಂದಿ ಪ್ರವಾಸಿಗರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಂಗನವಾಡಿ ನೌಕರರ ಮುಖಂಡರಾದ ಸುಶೀಲ ನಾಡ ಮಾತನಾಡಿದರು. ಹಂಚು ಕಾರ್ಮಿಕ ಸಂಘದ ಮುಖಂಡರಾದ ವಿ ನರಸಿಂಹ ವಹಿಸಿದ್ದರು. ಕಟ್ಟಡ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಚಿಕ್ಕಮೊಗವೀರ, ಆಟೋ ಚಾಲಕ ಸಂಘದ ಅಧ್ಯಕ್ಷ ರಮೇಶ್ ವಿ, ಬೀಡಿ ಕಾರ್ಮಿಕರ ಮುಖಂಡ ಮಹಾಬಲ ವಡೇರಹೋಬಳಿ, ಬಲ್ಕಿಸ್, ಹಂಚು ಸಂಘದ ಮುಖಂಡ ಜಿ. ಡಿ. ಪಂಜು ಉಪಸ್ಥಿತರಿದ್ದರು.
ಸಿಐಟಿಯು ಗೆ ಸೇರಿದ ಎಲ್ಲ ಕಾರ್ಮಿಕ ಸಂಘಟನೆಗಳ ಪುರುಷ ಸದಸ್ಯರು ಕೆಂಪು ಅಂಗಿ ಮತ್ತು ಖಾಕಿ ಪ್ಯಾಂಟ್ ಧರಿಸಿದ್ದರೆ ಮಹಿಳಾ ಸದಸ್ಯರು ಬಿಳಿ ಸೀರೆಯುಟ್ಟು ಸಮವಸ್ತ್ರದಾರಿಗಳಾಗಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಆಟೋ ಚಾಲಕ ಸಂಘದಿಂದ ಆಟೋ ರಿಕ್ಷಾ ಪುರ ಮೆರವಣಿಗೆ ನಡೆಯಿತು. ಹಂಚು ಸಂಘದ ಮುಖಂಡ ಸುರೇಂದ್ರ, ಪ್ರಕಾಶ್ ಕೋಣಿ, ಸುಧಾಕರ್ ಕುಲಾಲ್, ಸಂತೋಷ್, ಕಟ್ಟಡ ಕಾರ್ಮಿಕರ ಮುಖಂಡ ಕೃಷ್ಣ ಹಂಗಳೂರು, ಅಣ್ಣಪ್ಪ ಅಬ್ಬಿಗುಡ್ಡೆ, ರೆಹಮಾನ್, ಶಶಿಕಾಂತ್, ಸುಧೀರ್, ಸಂತೋಷ್ ಶೆಟ್ಟಿ , ಅನಂತ ಕುಲಾಲ್ ನೇತೃತ್ವವಹಿಸಿದ್ದರು. ಕಟ್ಟಡ ಕಾರ್ಮಿಕರ ಮುಖಂಡ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು. ರಾಜು ದೇವಾಡಿಗ ವಂದಿಸಿದರು.











