ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ವತಿಯಿಂದ ಅಭಿನಂದನಾ ಕಾರ್ಯಕ್ರಮ, ಮಾದಕ ದ್ರವ್ಯ ಸೇವನೆಯಿಂದ ಆಗುವ ಅನಾಹುತದ ಬಗ್ಗೆ ಮಾಹಿತಿ ಕಾರ್ಯಾಗಾರ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ತಿಳುವಳಿಕೆ ಇಲ್ಲದ ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ವಯಸ್ಸಿನಲ್ಲಿ ಮಕ್ಕಳು ದುಶ್ಚಟಗಳಿಗೆ, ಮಾದಕ ವಸ್ತು ಸೇವನೆ ಮುಂತಾದ ವ್ಯವಸಗಳಿಗೆ ತುಂಬಾ ಸುಲಭವಾಗಿ ದಾಸರಾಗುತ್ತಾರೆ. ಮಾದಕ ವಸ್ತುಗಳ ಸೇವನೆಯು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಾದಕ ವಸ್ತುಗಳ ಬಳಕೆಯು ನಮ್ಮ ಮೆದುಳಿನ ಕಾರ್ಯಚಟುವಟಿಕೆಯನ್ನು ಬದಲಾಯಿಸುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಆತ್ಮಹತ್ಯೆಗೂ ಕಾರಣವಾಗಬಹುದು ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಹೇಳಿದರು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ಎನ್.ಎನ್.ಒ ಕಮ್ಯುನಿಟಿ ಸಎಂಟರ್ ಮಿನಿ ಸಭಾ ಭವನದಲ್ಲಿ ಗುರುವಾರ ಜರಗಿದ ಅಭಿನಂದನಾ ಕಾರ್ಯಕ್ರಮ ಹಾಗೂ ಮಾದಕ ದ್ರವ್ಯ ಸೇವನೆಯಿಂದ ಆಗುವ ಅನಾಹುತದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.
ತಮ್ಮ ಸುತ್ತಲೂ ಇಂತಹ ವಸ್ತುಗಳ ಇರುವಿಕೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಮಾದಕ ವಸ್ತುಗಳ ವ್ಯವಸಕ್ಕೀಡಾದರೆ ಬಿಡಲು ಸಾಧ್ಯವಾಗದ ಅಭ್ಯಾಸ ಚಟವಾಗಿ ಮಾರ್ಪಡುತ್ತದೆ. ಹೀಗಾಗಿ ಮಕ್ಕಳ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಡಬೇಕು. ಬಾಲ್ಯದಲ್ಲಿ ಮಕ್ಕಳಿಗೆ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗಬಾರದು. ಸೌಲಭ್ಯಗಳು ಸುಲಭವಾಗಿ ಸಿಕ್ಕಿದಾಗ ಅದರ ಬೆಲೆ, ಕಷ್ಟದ ಬೆಲೆ ಗೊತ್ತಾಗುದಿಲ್ಲ. ಯಾವುದೇ ಸೌಲಭ್ಯಗಳನ್ನು ಕಷ್ಟಪಟ್ಟು ಪಡೆದುಕೊಂಡಾಗಲೇ ಅದರ ಕಷ್ಟದ, ಬೆಲೆ ತಿಳಿಯುತ್ತದೆ ಎಂದು ಹೇಳಿದ ಅವರು ನಮ್ಮ ಮನಸ್ಸನ್ನು ಉತ್ತಮವಾಗಿಟ್ಟುಕೊಂಡು ಮನಸ್ಸಿಗೆ ಇಷ್ಟಪಟ್ಟವರ ಜೊತೆ ಉತ್ತಮವಾದ ಸ್ನೇಹ ಸಂಬಂಧ ಬೆಳೆಸಿಕೊಳ್ಳಬೇಕು. ಒಬ್ಬ ಉತ್ತಮ ಗೆಳೆಯ ಜೀವನಪೂರ್ತಿ ಒಬ್ಬನನ್ನು ಬದಲಾವಣೆ ಮಾಡಬಲ್ಲನು ಎಂದರು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಪ್ರೌಢಶಾಲೆ, ಕಾಲೇಜು ಹಾಗೂ ಉನ್ನತ ವ್ಯಾಸಾಂಗ ಮಾಡುತ್ತಿರುವ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಮತ್ತು ಕಂಚಿನ ಪಡೆದ ಇಲ್ಹಾನ್ ಜಾವದ್ ಅವರನ್ನು ಗೌರವಿಸಲಾಯಿತು. ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರ ಖಜಾಂಚಿ ಎಸ್.ಅನ್ವರ್ ಕಂಡ್ಲೂರು, ಎನ್.ಎನ್.ಒ ಕುಂದಾಪುರ ಘಟಕ ಅಧ್ಯಕ್ಷ ಎಸ್.ದಸ್ತಗಿರಿ ಸಾಹೇಬ್ ಕಂಡ್ಲೂರು, ಕಾರ್ಯಕ್ರಮದ ಸಂಯೋಜಕರಾ ಜಿ.ಮೊಹಮ್ಮದ್ ಸಾಹೇಬ್ ಗುಲ್ವಾಡಿ, ಫಝಲ್ ಅಹ್ಮದ್ ಕಂಡ್ಲೂರು, ಜಮೀರ್ ಅಹಮ್ಮದ್ ರಶಾದಿ, ಮನ್ಸೂರ್ ಇಬ್ರಾಹಿಂ, ನಿಹಾರ್ ಅಹಮ್ಮದ್ ಕುಂದಾಪುರ ಇನ್ನಿತರರು ಉಪಸ್ಥಿತರಿದ್ದರು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.











