ಕುಂದಾಪುರದಲ್ಲಿ ಪತ್ರಿಕಾ ದಿನಾಚರಣೆ, ಡೈರಕ್ಟರಿ ಬಿಡುಗಡೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪತ್ರಕರ್ತರ ಮೇಲಿರುವ ಸಮಾಜದ ಜವಬ್ದಾರಿ, ಪ್ರಜ್ಞಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಣೆಗಾರಿಕೆ, ಪದಗಳಲ್ಲಿ, ಚಿತ್ರಗಳ ಮೂಲಕ ನೀಡುವ ವಿಚಾರ ಸಾಕಷ್ಟು ಪರಿಣಾಮಕಾರಿಯಾಗುತ್ತದೆ. ಮಾಧ್ಯಮ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಇವತ್ತು ಕುಂದಾಪುರದಲ್ಲಿರುವ ಪತ್ರಕರ್ತರು ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಏನಾದರೂ ತಪ್ಪು, ಲೋಪದೋಷ ನಡೆದರೆ ಅದನ್ನು ಧೈರ್ಯವಾಗಿ ಬರೆಯುವ, ತೋರಿಸುವ ಕೆಲಸವನ್ನು ಇಲ್ಲಿನ ಪತ್ರಕರ್ತರು ಮಾಡುತ್ತಿದ್ದಾರೆ. ಮಾಧ್ಯಮ ಮತ್ತು ಪೊಲೀಸ್ ಇಲಾಖೆ ನಡುವೆ ಅಗಾಧವಾದ ಸಂಬಂಧವಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಅಧೀಕೃತ ಸದಸ್ಯರ ಡೈರಕ್ಟರಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಡ್ಡರ್ಸೆ ರಘುರಾಮ ಶೆಟ್ಟರು ಪತ್ರಿಕೋದ್ಯಮದಲ್ಲಿ ಮಹತ್ತರವಾದ ಬದಲಾವಣೆ ತಂದವರು. ಅವರ ಪುತ್ರ ಮಧುಕರ ಶೆಟ್ಟಿಯವರು ನಮಗೆಲ್ಲ ಆದರ್ಶವಾದವರು. ಎಲ್ಲಾ ಐಪಿಎಸ್ ಅಧಿಕಾರಿಗಳಿಗೂ ಮಧುಕರ ಶೆಟ್ಟಿ ಅವರು ಮಾದರಿಯಾಗಬೇಕು. ಪತ್ರಿಕೋದ್ಯಮ ಮತ್ತು ಪೊಲೀಸ್ ಇಲಾಖೆಯ ಮಹತ್ವ ಇಲ್ಲಿ ಮನಗಾಣಲು ಸಾಧ್ಯವಿದೆ ಎಂದರು.
ಪತ್ರಕರ್ತರ ವಿವೇಚನೆ ಮೇಲೆ ವಿಷಯಗಳು ಕೇಂದ್ರೀಕ್ರತವಾಗುತ್ತದೆ. ಪತ್ರಕರ್ತರಿಗೆ ಮುಕ್ತ ಸ್ವಾತಂತ್ರ್ಯವಿದೆ. ಸತ್ಯವನ್ನು ವಾಕ್ಯಗಳ ಮೂಲಕ ಚಿತ್ರ, ದೃಶ್ಯಗಳ ಮೂಲಕ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ, ಸಾಮಾಜವನ್ನು ಜಾಗೃತವಸ್ಥೆಯಲ್ಲಿಡುವ ವಸ್ತುನಿಷ್ಠ ವರದಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಪತ್ರಿಕೋದ್ಯಮದ ಮೇಲೆ ಆ ಪ್ರತೀಕ್ಷೆ, ಆಸೆ, ನಿರೀಕ್ಷೆಗಳು ಇದೆ ಎಂದರು. ವಿದ್ಯಾರ್ಥಿಗಳನ್ನು ದೇಶಸ್ನೇಹಿಯನ್ನಾಗಿ ರೂಪಿಸುವ ದೊಡ್ಡ ಜವಬ್ದಾರಿ ಪತ್ರಕರ್ತರ ಮೇಲಿದೆ. ವಿದ್ಯಾರ್ಥಿಗಳನ್ನು ನಿರಾಸೆಗೊಳಿಸಬಾರದು. ನೈಜತೆಯನ್ನು ಎತ್ತಿ ತೋರಿಸುವ ಬದ್ದತೆಯನ್ನು ಪತ್ರಕರ್ತರು ಸದಾ ಪಾಲಿಸಿ ಮಾದರಿಯಾಗಬೇಕು ಎಂದರು.
ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧೀಕೃತ ಸದಸ್ಯರ ಡೈರಕ್ಟರಿಯನ್ನು ಕೋಟದ ಗೀತಾನಂದ ಫೌಂಡೆಷನ್ನ ಪ್ರವರ್ತಕ ಆನಂದ ಸಿ ಕುಂದರ್ ಬಿಡುಗಡೆಗೊಳಿಸಿದರು.
ಪತ್ರಿಕಾ ದಿನಾಚರಣೆ ಕುರಿತಾಗಿ ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ನಾಯಕ ಅವರು ವಿಶೇಷ ಉಪನ್ಯಾಸ ನೀಡಿ, ಲೇಖನಿಗೆ ಅಗಾಧವಾದ ಶಕ್ತಿ ಇದೆ. ಲೇಖನಿಯ ಮೂಲಕ ಸಮಾಜದ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆ ಇದೆ. ಮನುಷ್ಯ ಮನುಷ್ಯ ನಂಬುವಂತಹ, ವಿಶ್ವಾಸದಿಂದ ಕಾಣುವಲ್ಲಿ ವಿಮುಖರಾಗುತ್ತಿದ್ದೇವೆ. ಸಮಾಜದ ಮೇಲಿನ ಜವಬ್ದಾರಿ, ಹೊಣೆಗಾರಿಕೆ ಪತ್ರಕರ್ತರ ಮೇಲಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಶಿಕ್ಷಣದಲ್ಲಿ ಅಂಕಗಳೇ ಪ್ರಧಾನವಾಗುತ್ತಿವೆ.ಅಂಕಗಳನ್ನು ಹೊತ್ತು ತರುವ ಪ್ರಶ್ನೆಗಳು ಹೃದಯ ಸಂಸ್ಕಾರಕ್ಕೆ ಒಳಗಾಗುತ್ತಿಲ್ಲ. ಒಳಗಡೆ ಹೃದಯವಂತಿಕೆ, ಸಂಸ್ಕಾರ, ಎಲ್ಲರನ್ನು ಸಮಾನವಾಗಿ ಕಾಣುವ ಸಂವೇದತೆಬ ತೆರೆದುಕೊಂಡಾಗ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಯು.ಎಸ್.ಶೆಣೈ ಮತ್ತು ಡಾ.ಉದಯ ಕುಮಾರ್ ತಲ್ಲೂರು ಇವರಿಗೆ ಪತ್ರಿಕೋದ್ಯಮದ ಗೌರವಾರ್ಪಣೆ ಸಲ್ಲಿಸಲಾಯಿತು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರ ಅಚಾರ್ಯ, ಡಾ.ಜಿ.ಎಮ್.ಗೊಂಡ, ರಾಜೇಶ ಕೆ.ಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್ ಬೀಜಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ರಾಘವೇಂದ್ರ ಪೈ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.











