ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಹಾಗೂ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರಿಗಾಗಿ ಶನಿವಾರ ಕಾಲೇಜಿನಲ್ಲಿ ಎಐ ತಂತ್ರಜ್ಞಾನ ಕುರಿತ ಕಾರ್ಯಗಾರ ನಡೆಯಿತು.
ಉದ್ಘಾಟಿಸಿದ ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮಾತನಾಡಿ, ಪತ್ರಿಕೋದ್ಯಮ ರಂಗವು ಹಂತ-ಹಂತವಾಗಿ ಬದಲಾವಣೆಯನ್ನು ಕಂಡಿದೆ. ದೇಶ- ವಿದೇಶದ ವಿಚಾರಗಳನ್ನು ಜನರಿಗೆ ಕ್ಷಣ ಮಾತ್ರದಲ್ಲಿ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದುದು. ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರಿಗೆ ಎಐ ತಂತ್ರಜ್ಞಾನ ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಈ ಕಾರ್ಯಾಗಾರದ ಪ್ರಯೋಜನವನ್ನು ಪತ್ರಕರ್ತರು ಪಡೆಯಿರಿ ಎಂದವರು ಹೇಳಿದರು.
ಪತ್ರಕರ್ತರಿಗಾಗಿ ಕಾರ್ಯಗಾರ ಆಯೋಜಿಸಿದ, ಸದಸ್ಯರ ಡೈರೆಕ್ಟರಿ ಹೊರತರಲು ಸಹಕರಿಸಿದ ಮೂಡ್ಲಕಟ್ಟೆ ಐಎಂಜೆ ಇನ್ಸ್ಟ್ಯೂಶನ್ನ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ನಿಮ್ಮ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ. ವಿಶ್ವದ ಎಲ್ಲರಂಗವು ಈಗ ಎಐ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದು, ಆ ನಿಟ್ಟಿನಲ್ಲಿ ಈ ಕಾರ್ಯಾಗಾರ ಪ್ರಯೋಜನವಾಗಲಿ ಎಂದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಎಂಐಟಿಯ ಸಿಎಸ್ಇ ವಿಭಾಗದ ಉಪನ್ಯಾಸಕರಾದ ಡಾ| ಮಂಜುನಾಥ ರಾಮಣ್ಣ ಲಮಾಣಿ, ಮುರಳೀಧರ ಬಿ.ಕೆ., ಸಂಘದ ಕೋಶಾಧಿಕಾರಿ ಟಿ. ಲೋಕೇಶ ಆಚಾರ್ಯ ತೆಕ್ಕಟ್ಟೆ, ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಬೀಜಾಡಿ ಸ್ವಾಗತಿಸಿ, ಕಾಲೇಜಿನ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ| ರಾಮಕೃಷ್ಣ ಹೆಗಡೆ ವಂದಿಸಿದರು. ಪತ್ರಕರ್ತ ಪ್ರಶಾಂತ್ ಪಾದೆ ಸನ್ಮಾನಿತರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಷ್ಮಾ ಸಹಕರಿಸಿದರು.











