ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕುಂದಾಪುರದಿಂದ ತಲ್ಲೂರು ಮಾವಿನಕಟ್ಟೆ ಮಾರ್ಗವಾಗಿ ಗುಲ್ವಾಡಿಗೆ ಅಲ್ಲಿಂದ ಸೌಕೂರು, ಕಂಡ್ಲೂರು ಮಾರ್ಗವಾಗಿ ಕುಂದಾಪುರಕ್ಕೆ ಕೆಎಸ್ಆರ್ಟಿಸಿ ಬಸ್ ಆರಂಭಿಸಲು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ಕೃಷಿ ಕೂಲಿಕಾರರ ಸಂಘ, ಹಂಚು ಕಾರ್ಮಿಕರು, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಗುಲ್ವಾಡಿ ಪಂಚಾಯತ್ ಎದುರು ಪ್ರತಿಭಟನೆ ನಡೆಸಿ, ಪಂಚಾಯತ್ ಪಿಡಿಓ ಮುಖಾಂತರ ಸಾರಿಗೆ ಆಯುಕ್ತರಿಗೆ ಮನವಿ ನೀಡಿದರು.
ಖಾಸಗಿ ಬಸ್ ಗಳು ಸರಿಯಾದ ಸಮಯಕ್ಕೆ ಬಸ್ ಸಂಚಾರ ನಡೆಸದೆ ಗ್ರಾಮದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಅನಾರೋಗ್ಯ ಪೀಡಿತರಿಗೆ ತುಂಬ ತೊಂದರೆ ಆಗಿದೆ. KSRTC ಬಸ್ ಸಂಚಾರ ಆರಂಭಿಸುವುದರ ಮುಖಾಂತರ ಮಹಿಳೆಯರಿಗೆ ಶಕ್ತಿ ಯೋಜನೆ, ವಿದ್ಯಾರ್ಥಿಗಳಿಗೆ ಬಸ್ ಪಾಸ್ ದೊರೆಯುವಂತೆ ಮಾಡಬೇಕಾಗಿ ಸಾರಿಗೆ ಪ್ರಾಧಿಕಾರವನ್ನು ಒತ್ತಾಯಿಸಿದರು.
ಹೋರಾಟದ ನೇತೃತ್ವವನ್ನು ಹಂಚು ಕಾರ್ಮಿಕರ ಮುಖಂಡರಾದ ಜಿ ಡಿ ಪಂಜು, ನಾಗರಾಜ್, ಚಂದ್ರ,ಭಾಸ್ಕರ, ಹೆಚ್. ನರಸಿಂಹ, ಕೃಷಿಕೂಲಿಕಾರರ ಮುಖಂಡರಾದ ನಾಗರತ್ನ, ಶೋಭಾ, ಜೆಎಮ್ ಎಸ್(JMS)ಮುಖಂಡರಾದ ಶೀಲಾವತಿ, ಕಟ್ಟಡ ಕಾರ್ಮಿಕರ ಮುಖಂಡರಾದ ಚಂದ್ರಶೇಖರ್ ವಿ, ರೆಹ್ಮಾನ್ ಅಣ್ಣಪ್ಪ , ರಾಜೀವ ಪಡುಕೋಣೆ ವಹಿಸಿದ್ದರು.











