ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಮಣೂರು ಗೀತಾನಂದ ಫೌಂಡೇಶನ್, ಕೈಂಡ್ ಹಾಟ್ಸ್೯ ಬಾಳ್ಕುದ್ರು, ಶ್ರೀ ವೇಣುಗೋಪಾಲ ಎಜ್ಯುಕೇಶನಲ್ ಸೊಸೈಟಿ ಮೂಡುಕೇರಿ ಹಾಗೂ ಉಸಿರು ಕೋಟ ಇದರ ವತಿಯಿಂದ ಕೊಡ ಮಾಡುವ 2025ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಹಳ್ನಾಡಿನ ಬಾಲ ಪ್ರತಿಭೆ ಸಾಕ್ಷರ್ ಆರ್ ಶೆಟ್ಟಿ ಇವರಿಗೆ ಪ್ರಧಾನ ಮಾಡಲಾಯಿತು.
ನವೆಂಬರ್ 30 ರಂದು ಡಾ. ಶಿವರಾಮ ಕಾರಂತ ಥೀಂ ಪಾಕ್೯ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಸಾಕ್ಷರ್ ಆರ್ ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಯಿತು.
ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಸ್ಕೂಲಿನ 8ನೇ ತರಗತಿ ವಿದ್ಯಾರ್ಥಿ, ಕಾಳಾವರ ಸರಕಾರಿ ಪ್ರೌಢಶಾಲೆಯ ಕನ್ನಡ ಪ್ರಧ್ಯಾಪಕ ರವಿರಾಜ್ ಶೆಟ್ಟಿ ಹಾಗೂ ಭಾರತಿ ರವಿರಾಜ್ ಶೆಟ್ಟಿ ಇವರ ಪುತ್ರ. ಬಾಲ್ಯದಲ್ಲಿಯೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದ ಪ್ರಶಸ್ತಿಗಳ ಸರದಾರ. ಬೆಳಗಾವಿ ಶಿವಮೊಗ್ಗ, ಮೂಡುಬಿದಿರೆ, ಉಡುಪಿ ಸೇರಿದಂತೆ ಬೇರೆ ಬೇರೆ ನಡೆಯುವ ಜಿಲ್ಲಾ ಮತ್ತು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕರಾಟೆ, ಯೋಗ , ಭಗವದ್ಗೀತೆ ಸ್ಫರ್ಧೆ, ಭಾಷಣ, ಚಿತ್ರಕಲೆ, ವಿಜ್ಞಾನ ವಿಚಾರ ಗೋಷ್ಠಿ, ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಈತ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಯ ಈ ಬಹುಮುಖ ಪ್ರತಿಭೆಗೆ ತಂದೆ ತಾಯಿಯ ನಿರಂತರ ಪ್ರೋತ್ಸಾಹವೇ ಕಾರಣವಾಗಿದ್ದು ತುಳಸಿ ಆಡಳಿತ ಸಂಸ್ಥೆಯು ಸಹ ವಿದ್ಯಾರ್ಥಿಯ ಈ ಪ್ರತಿಭೆಗೆ ನೀರೆರೆದು ಪೋಷಿಸಿದೆ.
ಭವಿಷ್ಯದಲ್ಲಿ, ವಿದ್ಯಾರ್ಥಿಯು ಇನ್ನಷ್ಟು ಸಾಧನೆಯ ಶಿಖರವನ್ನು ಏರಿ ಹೀಗೆ ಕೀರ್ತಿಯ ಪತಾಕೆಯನ್ನು ಹಾರಿಸುವಂತಾಗಲಿ ಎಂದು ತುಳಸಿ ವಿದ್ಯಾಮಂದಿರದ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹರಸಿ ಹಾರೈಸಿದ್ದಾರೆ.











