ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ಲಾಸ್ಟಿಕ್ ಬಾಟಲ್ , ಪ್ಲಾಸ್ಟಿಕ್ ಕವರ್ ಹೀಗೆ ಪರಿಸರ ಮಾಲಿನ್ಯ ಮಾಡುವ ವಸ್ತುಗಳಲ್ಲಿ ಅದರಲ್ಲೂ ರೈಲು ನಿಲ್ದಾಣ ಪರಿಸರ ಹಾಳು ಮಾಡುವ ವಸ್ತುಗಳಲ್ಲಿ ಪ್ಲಾಸ್ಟಿಕ್ಕೇ ಬಹುದೊಡ್ಡ ಸಮಸ್ಯೆ.
ಆದರೆ ಬೈಂದೂರು ಬಾರ್ಕೂರು ಕುಂದಾಪುರ ರೈಲು ನಿಲ್ದಾಣಕ್ಕೆ ಪ್ಲಾಸ್ಟಿಕ್ ಬಿನ್ ಉಚಿತವಾಗಿ ಅಳವಡಿಸಲು ಲಯನ್ಸ್ ಕ್ಲಬ್ ಕುಂದಾಪುರ ಮುಂದಾಗಿದ್ದು ಕಳೆದ ಅಗಸ್ಟ್ ಮೊದಲ ವಾರದಲ್ಲಿ ಈ ಬಗ್ಗೆ ಅನುಮತಿ ಕೇಳಿ ಕೊಂಕಣ ರೈಲ್ವೆಗೆ ಪತ್ರ ಬರೆದಿದ್ದರೂ , ಇಲ್ಲಿಯವರೆಗೂ ಕನಿಷ್ಟ ಪ್ರತ್ಯುತ್ತರ ಬರೆಯುವ ಸೌಜನ್ಯವೂ ಕೊಂಕಣ ರೈಲ್ವೆಗೆ ಇಲ್ಲ. ಪರಿಸರ ಪೂರಕ ಇಂತ ವಸ್ತುಗಳನ್ನು ಸಾಮಾಜಿಕ ಸೇವಾ ಸಂಸ್ಥೆಗಳು ಕೊಡುಗೆಯಾಗಿ ನೀಡ ಬಂದಾಗ ಅದಕ್ಕೆ ಪ್ರತಿಕ್ರಿಯಿಸುವ ಆಡಳಿತ ಶಿಸ್ತಿಲ್ಲದ ಕೊಂಕಣ ನಿಗಮಕ್ಕೆ ಸ್ವತ ತಾನೇ ಅಳವಡಿಸಿಕೊಳ್ಳ ಬೇಕಾದ ಆರ್ಥಿಕ ಸಾಮರ್ಥ್ಯವೂ ಇಲ್ಲ. ಬೈಂದೂರು ,ಕುಂದಾಪುರ , ಬಾರ್ಕೂರು ಭಾಗದ ಸಾವಿರಾರು ಜನ ಬಂದಿಳಿಯುವ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಮಸ್ಯೆಯ ಪರಿಹಾರಕ್ಕೆ ಕೊಂಕಣ ರೈಲ್ವೆಯೇ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಶ್ರೀಗಣೇಶ್ ಪುತ್ರನ್ ಅಭಿಪ್ರಾಯ ತಿಳಿಸಿದ್ದಾರೆ.
ಸಾರ್ವಜನಿಕ ಸೇವಾ ಸಂಸ್ಥೆಗಳು ಬರೆಯುವ ಪತ್ರಕ್ಕೆ ಕಾಲಮಿತಿಯಲ್ಲಿ ಉತ್ತರಿಸ ಬೇಕು ಎನ್ನುವ ಆಡಳಿತ ಶಿಸ್ತು ಕೊಂಕಣ ರೈಲ್ವೆಯ ಕಾರವಾರ ವಿಭಾಗಕ್ಕೆ ಇಲ್ಲವೇ ಎಂದು ನಿಗಮದ ಆಡಳಿತ ನಿರ್ದೇಶಕರನ್ನೂ ಪತ್ರ ಬರೆದು ಪ್ರಶ್ನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.











