ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮುದ್ಯತ ಸಂಸ್ಥೆ ನೇತೃತ್ವದಲ್ಲಿ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ನಲ್ಲಿ ಜರುಗಿದ ಡಾ.ಸಿ.ಆಶ್ವಥ್ ಸ್ವರ ಸಂಯೋಜನೆಯ ಮಧುರ ಪ್ರಸ್ತುತಿ ಸತ್ಯಾವತಾರ ಕಾರ್ಯಕ್ರಮಕ್ಕೆ ಪ್ರೇರಕ್ಷರಿಂದ ಅದ್ಭುತ ಪ್ರಶಂಸನೆ ವ್ಯಕ್ತವಾಯಿತು.
ಡಾ.ಸಿ.ಅಶ್ವಥ್ ಅವರ ಸ್ವರ ಸಂಯೋಜಿಸಿದ ಗೀತೆಗಳ ಮಧುರ ಪ್ರಸ್ತುತಿಯ ಮೂಲಕ ಖ್ಯಾತ ಗಾಯಕ ಬೆರಗುಗೊರಳಿನ ಕಲಾವಿದ ರಾಮಚಂದ್ರ ಹಡಪದ ಅವರ ಸತ್ಯಾವತಾರ ಕಾರ್ಯಕ್ರಮವು ಸುಂದರವಾದ ಬೆಳಕಿನ ಚಿತ್ತಾರದ ವೇದಿಕೆಯಲ್ಲಿ ಅನಾವರಣಗೊಂಡಿತ್ತು.
ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಹಾಗೂ ಕುಂದಾಪುರದ ಮೇಘನಾ ಇವರ ಗಾಯನದ ಝಲಕ್ ನೋಡುಗ ಪ್ರೇಕ್ಷಕರ ಮನಸೆಳೆಯಿತು.
ಕೊರೆಯುವ ಚಳಿಯಲ್ಲಿಯೂ ಅಪ್ಪಿ ಹಿಡಿದ ಸತ್ಯಾವತಾರ: ರಾಮಚಂದ್ರ ಹಡಪದ, ಎಂ.ಡಿ.ಪಲ್ಲವಿ ಹಾಗೂ ಮೇಘನಾ ಇವರ ಕಂಠಸಿರಿಯಲ್ಲಿ ಮೊಳಗಿದ ಅಶ್ವಥ್ ಅವರ ಗೀತೆಗಳು ನೋಡುಗ ಪ್ರೇಕ್ಷಕರನ್ನು ಕೊರೆಯುವ ಚಳಿಯಲ್ಲಿಯೂ ಕಾರ್ಯಕ್ರಮದ ಆರಂಭದಿಂದ ಅಂತ್ಯದ ತನಕವು ಸತ್ಯಾವತಾರದ ಒಂದೊಂದು ಗಾಯನವು ಅಪ್ಪಿ ಹಿಡಿದಿಟ್ಟುಕೊಂಡು ಕೇಳುಗರನ್ನು ಸಂಗೀತ ಲೋಕದ ಸ್ವರ್ಗಕ್ಕೆ ಕಂಚಿನ ಕಂಠದ ಮಾಧುರ್ಯದಿಂದ ಹೃದಯಗಳನ್ನು ಮುಟ್ಟುವಂತಾಯಿತು.
ರಾಘವೇಂದ್ರ ಕಾಂಚನ್ ಇವರ ನಿರೂಪಣೆಯೊಂದಿಗೆ ಪಕ್ಕ ವಾದ್ಯದ ಕೀಬೋಡರ್ನಲ್ಲಿ ದೀಪಕ್ ಜಯಶೀಲನ್ ಹಾಗೂ ಕೃಷ್ಣ ಉಡುಪ, ಕೊಳಲುವಾದನದಲ್ಲಿ ಅಶ್ವಿನಿ ಕೌಶಿಕ್, ಗೀಟರ್ನಲ್ಲಿ ವಿನಯ್, ತಬಲದಲ್ಲಿ ಜಲೀಲ್ ಪಾಷ ಮತ್ತು ಶೇರು ಮುನ್ನಾ, ಡೋಲಕ್ನಲ್ಲಿ ನಂದೀಶ್, ರೀದಮ್ ಪ್ಯಾಡ್ನಲ್ಲಿ ಪದ್ಮನಾಭ ಕಾಮತ್, ಕೋರಸನಲ್ಲಿ ರಾಜೇಶ್, ಪ್ರಮೋದ್, ಸ್ವಾತಿ, ಸರಾಯು ಇವರ ಕೈಚಳಕದ ಝಲಕ್ ಸತ್ಯಾವತಾರದ ಮೆರಗನ್ನು ಹೆಚ್ಚಿಸಿತ್ತು.
ಉದ್ಘಾಟನೆ: ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಸತ್ಯಾವತಾರ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೋಟ ಗೀತಾನಂದ ಫೌಂಡೇಷನ್ನ ಪ್ರವರ್ತಕ ಆನಂದ ಸಿ ಕುಂದರ್, ನ್ಯೂಸ್ ಫಸ್ಟ್ನ ಮುಖ್ಯಸ್ಥರಾದ ರವಿಕುಮಾರ್, ಸಮುದ್ಯತಾ ಸಂಸ್ಥೆ ಪಾಲುದಾರರಾದ ಯೋಗಿಂದ್ರ ತಿಂಗಳಾಯ, ಹರೀಶ್ ಗುರುಕೃಪಾ, ಸಂದೀಪ್ ಶೆಟ್ಟಿ, ಗಿರೀಶ್ ಬಂಗೇರ, ಸುಕೇಶ್ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭ ಹಿರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್, ನಟ ನಿರ್ದೇಶಕ ಟಿ.ಎಸ್.ನಾಗಾಭರಣ ಇವರು ಡಾ.ಸಿ.ಅಶ್ವಥ್ ಇವರ ಒಡನಾಟದ ಮಾತುಗಳನ್ನಾಡಿದರು. ಹಾಗೂ ಸಮುದ್ಯತ ಸಂಸ್ಥೆಯ ವತಿಯಿಂದ ಕಲಾವಿದರನ್ನು ಮತ್ತು ಕಾರ್ಯಕ್ರಮದ ಪ್ರಯೋಜಕರನ್ನು ಗುರುತಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರ್ವಹಿಸಿ, ಉದಯಕುಮಾರ್ ಶೆಟ್ಟಿ ಪಡುಕೆರೆ ಸಹಕರಿಸಿದರು.











