ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಭಾರತ ಜ್ಞಾನ ವಿಜ್ಞಾನ ಸಮಿತಿ ಬೈಂದೂರು ತಾಲೂಕು ಘಟಕ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಆಶ್ರಯದಲ್ಲಿ ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ‘ನಕ್ಷತ್ರ’ ಆಕಾಶ ವೀಕ್ಷಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಭಾರತ ಜ್ಞಾನವಿಜ್ಞಾನ ಸಮಿತಿ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಸತ್ಯನಾ ಕೊಡೇರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕು. ಸೂರ್ಯ, ಚಂದ್ರ, ನಕ್ಷತ್ರಗಳ ಬಗ್ಗೆ ಇರುವ ಕುತೂಹಲ, ವಿಜ್ಞಾನದ ಅರಿವು ನೀಡುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಬೇಕು ಎಂದರು.
ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಕುತೂಹಲ ತಣಿಸುವಲ್ಲಿ ಇಂಥಹ ಪ್ರಾಯೋಗಿಕ ಜ್ಞಾನ ಅವಶ್ಯಕತೆ ಇದೆ. ಜ್ಞಾನಗಳಿಗೆ ತೆರೆದುಕೊಳ್ಳುತ್ತಾ ಸಾಗಬೇಕು ಎಂದರು.
ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷೆ ಡಾ.ಪೂರ್ಣಿಮಾ ಮಾತನಾಡಿ, ನಮ್ಮ ಶಾಲೆಯಲ್ಲಿ ಪಠ್ಯದ ಜೊತೆಯಲ್ಲಿ ಪ್ರಾಯೋಗಿಕ ಜ್ಞಾನವನ್ನು ನೀಡುವ ಕೆಲಸ ಮಾಡುತ್ತಿದ್ದೇವೆ. ಆಕಾಶಕಾಯಗಳ ಬಗ್ಗೆ ಮಕ್ಕಳ ಕುತೂಹಲ, ಜಿಜ್ಞಾಸೆಯನ್ನು ಎಳವೆಯಲ್ಲಿಯೇ ಪರಿಹರಿಸುವುದರಿಂದ ಮುಂದೆ ಅವರು ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಾರೆ. ಈಗಾಗಲೇ ಹೊರಸಂಚಾರದ ಮೂಲಕ ಚಿಟ್ಟೆಯ ದರ್ಶನ ಮಾಡಲಾಗಿದೆ. ಮುಂದೆ ಪಕ್ಷಿಗಳ ವೀಕ್ಷಣೆಯ ಬಗ್ಗೆಯೂ ಆಲೋಚನೆ ಇದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ನಾಗರಾಜ ಶೆಟ್ಟಿ, ವಂಡ್ಸೆ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕರ, ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದಾಪುರ ಶಾಖೆ ನಿರ್ದೇಶಕ ಪ್ರತಾಪ್ ಕುಮಾರ್ ಶೆಟ್ಟಿ, ಎಸ್.ಡಿ.ಎಂಸಿಯ ಸದಸ್ಯೆ ಸುಮತಿ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕ ಉದಯ ಗಾಂವಕರ ನಕ್ಷತ್ರ, ಗ್ರಹ, ಚಂದ್ರಮಂಡಲ, ಆಕಾಶಕಾಯಗಳ ಸ್ವರೂಪಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಬಳಿಕ ವಿದ್ಯಾರ್ಥಿಗಳು, ಸಾರ್ವಜನಿಕರು ಚಂದ್ರ, ಆಕಾಶ ವೀಕ್ಷಣೆ ಮಾಡಿದರು. ಆಕಾಶ ವೀಕ್ಷಣೆಯಲ್ಲಿ ರವಿ ಕಟ್ಕೆರೆ, ಸಂಧ್ಯಾ ನಾಯಕ, ರವೀಂದ್ರ ಕೋಡಿ, ಸಂದೇಶ ಕುಂದಾಪುರ ಹಾಗೂ ಶಾಲೆಯ ಶಿಕ್ಷಕ ವೃಂದದವರು ಸಹಕರಿಸಿದರು.
ಶಿಕ್ಷಕರಾದ ಸುಧಾಕರ ಮರಕಾಲ ಸ್ವಾಗತಿಸಿ, ಶಿಕ್ಷಕ ಸದಾಶಿವ ಕೆಂಚನೂರು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್ ಕಾರ್ಯಕ್ರಮ ನಿರ್ವಹಿಸಿದರು.











