ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ : ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಬಹಳಷ್ಟು ಬೆಳವಣಿಗೆ ಆಗುತ್ತಿದೆ. ತಂತ್ರಜ್ಞಾನ ಬಂದಾಗ ನಮ್ಮ ಕೊರತೆ ಕಡಿಮೆಯಾಗುತ್ತಾ ಹೋಗಬೇಕು. ತಂತ್ರಜ್ಞಾನದ ಸಹಾಯ ಪಡೆದುಕೊಂಡು ನಮ್ಮ ಜೀವನ ಸುಧಾರಿಸಿಕೊಳ್ಳಬೇಕು. ತಾಂತ್ರಿಕ ಜ್ಞಾನ ಪಡೆದುಕೊಂಡು ಅದರ ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಸಮೃದ್ಧ ಬೈಂದೂರು ಸಹಕಾರದೊಂದಿಗೆ ಅಸಿಸ್ಟ್ಟೆಕ್ ಫೌಂಡೇಶನ್ ಇವರ ನೇತೃತ್ವದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ಸರಕಾರ ಸಹಯೋಗದಲ್ಲಿ ಕುಂದಾಪುರ ಮೂಡ್ಲಕಟ್ಟೆಯ ಎಂಐಟಿ ಕಾಲೇಜಿನಲ್ಲಿ ವಿಶೇಷಚೇತನರಿಗಾಗಿ ಉದ್ಯೋಗ ಹಬ್ಬ ‘ಆದಿದ್ವಾರ ಜಾಬ್ ಹಬ್ಬ’ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷಚೇತನರಿಗೆ ಕರುಣೆ ತೋರಿಸಬೇಡಿ ಅವರಿಗೆ ದಾರಿ ತೋರಿಸಿ. ಸಂಸ್ಥೆಗಳು ದಿವ್ಯಾಂಗರಿಗೆ ಉದ್ಯೋಗ ನೀಡುವಂತಾಗಬೇಕು. ದಿವ್ಯಾಂಗರಿಗೆ ಸರಿಯಾದ ಉದ್ಯೋಗ ನೀಡಿದರೆ ಅವರು ಜೀವನದಲ್ಲಿ ಎದ್ದು ನಿಲ್ಲುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಅಸಿಸ್ಟ್ಟೆಕ್ ಫೌಂಡೇಶನ್ನ ಸಿಇಒ ಮತ್ತು ಸಹ ಸಂಸ್ಥಾಪಕ ಪ್ರತೀಕ್ ಮಾಧವ್ ಮಾತನಾಡಿ, ದೇಶದಲ್ಲಿರುವ ಶೇ.70ರಷ್ಟು ವಿಶೇಷಚೇತನರಿಗೆ ಕೌಶಲ್ಯ ಇದ್ದರೂ ಉದ್ಯೋಗ ದೊರೆಯುತ್ತಿಲ್ಲ. ವಿಶೇಷಚೇತನರು ಬೇರೆಯವರ ಮೇಲೆ ಅವಲಂಬಿತರಾಗದೆ, ಅವರು ಇತರರಿಗೆ ಸಮಾನರಾಗಿ ಸಮಾಜದಲ್ಲಿ ದೇಶದಲ್ಲಿ ಬೆಳೆಯುವಂತಾಗಬೇಕು. ದಿವ್ಯಾಂಗರ ಅಭಿವೃದ್ಧಿಗೆ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವರು ತಂತ್ರಜ್ಞಾನ ಬಳಸಿಕೊಂಡು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸದೃಢರಾಗಬೇಕಿದೆ ಎಂದರು.
ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅನುರಾಧ ಹಾದಿಮನೆ, ಉಡುಪಿ ಜಿಲ್ಲಾ ವಿಶೇಷಚೇತನರ ಅಭಿವೃದ್ಧಿ ಇಲಾಖೆ ಅಧಿಕಾರಿ ರತ್ನ, ಸುಮುಖ ಎಜ್ಯುಕೇಶನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎಸ್.ಸುರೇಶ ಶೆಟ್ಟಿ, ಮೂಡ್ಲಕಟ್ಟೆ ಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗ್ಡೆ, ರೋಬೋಟೆಕ್ ಕೈಯನ್ನು ಕಂಡು ಹಿಡಿದ ರಿಶಿ ಮೊದಲಾದವರು ಉಪಸ್ಥಿತರಿದ್ದರು.
ಜ್ಞಾನಜ್ಯೋತಿ ಅಕಾಡೆಮಿ ನಿರ್ದೇಶಕ ಸತ್ಯನಾರಾಯಣ ಸ್ವಾಗತಿಸಿದರು. ಲಾವಣ್ಯ ಮತ್ತು ಆಸ್ತಿಕ ಕಾರ್ಯಕ್ರಮ ನಿರ್ವಹಿಸಿದರು. ಸೂಕ್ಷ್ಮ ಅಡಿಗ ಸಹಕರಿಸಿದರು.












