ಕುಂದಾಪುರ ಮಿರರ್ ಸುದ್ದಿ…

ಕೊಪ್ಪಳ: ಸರಕಾರಿ ಶಾಲೆ ಉಳಿಯಲಿ-ಬೆಳೆಯಲಿ ಎಂಬುದು ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಜೊತೆಗೆ ಎಲ್ಲರ ಆಶಯ. ಶಿಕ್ಷಕರು ಶೈಕ್ಷಣಿಕ ಕಾರ್ಯ ಮಾತ್ರವಲ್ಲದೆ ಶೈಕ್ಷಣೀಕೇತರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಒಂದು ಸರಕಾರಿ ಶಾಲೆ ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರು, ಪೋಷಕರು, ಎಸ್ ಡಿ ಎಂ ಸಿ ನಡುವಿನ ಸಮನ್ವಯತೆಯಿಂದ ಮಾತ್ರವೇ ಸಾಧ್ಯ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾದರಿ ಶಾಲೆ ನಿರ್ಮಾಣ ಸಾಧ್ಯ. ಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆಯಾದ ಮೇಲೆ ಬಹಳಷ್ಟು ಬದಲಾವಣೆಗಳು ಕಂಡಿದೆ. ಎಲ್ಲರೂ ಶಾಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕೊಪ್ಪಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪ ಅವರು ಹೇಳಿದರು.
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ ಹಾಗೂ
ಕೃಷಿ ವಿಜ್ಞಾನ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳದ ಕೃಷಿ ವಿಜ್ಞಾನ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ನಡೆದ ‘ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕ ದ್ರವ್ಯ ಸೇವನೆಯಿಂದ ಮಕ್ಕಳ ಮೇಲಾಗುವ ದುಷ್ಪಾರಿಣಾಮಗಳು ಮತ್ತು ಸರಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಎಸ್.ಡಿ.ಎಮ್.ಸಿ ಅವರ ಪಾತ್ರ, ಮಾಹಿತಿ ಕಾರ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ನಿರ್ದೇಶಕರಾದ ವಾಮನ ಮೂರ್ತಿ ಅವರು ಮಾತನಾಡಿ, ಸರಕಾರಿ ಶಾಲೆಗಳು ಯಾವುದೇ ಜಾತಿ-ಮತ, ಭೇದವಿಲ್ಲದೆ
ಕಾರ್ಯ ನಿರ್ವಹಿಸುತ್ತದೆ. ಜಾತ್ಯಾತೀತ ವ್ಯವಸ್ಥೆಯಡಿ ಮಕ್ಕಳ ಭವಿಷ್ಯ ರೂಪಿಸುವ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸವನ್ನು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಮಾಡುತ್ತಿದೆ. ಶಾಲಾ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯಕ್ಕಾಗಿ ಮಾತ್ರವೇ ಮೊಬೈಲ್ ಮಿತವಾಗಿ ಬಳಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕರಾದ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿಯನ್ನು ಸಬಲೀಕರಣಗೊಳಿಸಿ, ಶಾಲೆಯ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಬೇಕು. ಸಮನ್ವಯ ವೇದಿಕೆ ಜಾತಿ ಹಾಗೂ ರಾಜಕೀಯ ರಹಿತವಾದ ಸಂಘಟನೆಯಾಗಿದ್ದು ಸ್ವಹಿತಾಸಕ್ತಿ ರಹಿತವಾಗಿ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ನಿರ್ಮಿಸಿ ಗೌರವಯುತವಾಗಿ ಬಾಳಲು ಅಕ್ಷರದಾನ ನೀಡಿದ ಸರಕಾರಿ ಶಾಲೆಗಳ ಬಗ್ಗೆ ಅಭಿಮಾನ ಹಾಗೂ ಗೌರವ ಹೊಂದಬೇಕು. ಸರಕಾರಿ ಶಾಲೆಯಲ್ಲಿ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಯಾವುದೇ ಅಪಪ್ರಚಾರವಾಗದಂತೆ ಹಳೆ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ. ನೋಡಿಕೊಳ್ಳಬೇಕು. ಶಾಲೆಯೊಂದಿಗೆ ನಿರಂತರವಾದ ಸಂಪರ್ಕದಲ್ಲಿರುವುದು ನಮ್ಮ ಜವಬ್ದಾರಿಯಾಗಿ ಪರಿಗಣಿಸಬೇಕು ಎಂದರು.
ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ರಿ. ಉಡುಪಿ ಜಿಲ್ಲಾ ಘಟಕದಿಂದ ಕಾರ್ಯಾಗರವನ್ನು ಆಯೋಜಿಸಲಾಗಿದ್ದು ಸಮನ್ವಯ ವೇದಿಕೆಯ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರು, ವೇದಿಕೆಯ ತರಬೇತಿದಾರರಾದ ಎಸ್.ವಿ. ನಾಗರಾಜ್ ತರಬೇತಿ ನೀಡಿದರು.
ಇದೇ ಸಂದರ್ಭ ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆಯ ಕೊಪ್ಪಳ ಜಿಲ್ಲಾ ನೂತನ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು.
ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆ ಕೊಪ್ಪಳದ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಎಚ್ ಬೆದವಟ್ಟಿ, ಉಪಾಧ್ಯಕ್ಷ ರಾಮಲಿಂಗಯ್ಯ ಶಾಸ್ತ್ರಿಮಠ, ಪ್ರಧಾನ ಕಾರ್ಯದರ್ಶಿ ಲಕ್ಷ್ಮವ್ವ ಮಾರ್ಕಂಡೆಯಾ ಗೋಡೇಕಾರ್, ಕೊಪ್ಪಳ ಎಸ್.ಡಿ.ಎಂ.ಸಿ.ಸಿ.ಎಫ್ ಇದರ ದೇವರಾಜ ಕಿನ್ನಾಳ ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಘಟಕದ ಪ್ರತಿನಿಧಿಗಳಾಗಿ ಕಾಪು ತಾಲೂಕು ಘಟಕದ ಉಸ್ತುವಾರಿಗಳಾದ ಅಶ್ಪಾಕ್, ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಸಾಧಿಕ್ ಮಾವಿನಕಟ್ಟೆ ಹಾಗೂ ಸುಲೇಮಾನ್ ಚಿತ್ತೂರು ಭಾಗವಹಿಸಿದ್ದರು.












