ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೇಂದ್ರ ಸರಕಾರದ ಪಂಚಾಯತ್ ರಾಜ್ ಮಂತ್ರಾಲಯದಿಂದ ‘ಸುಸ್ಥಿರ ಅಭಿವೃದ್ಧಿ ಗುರಿಗಳು’ ಎನ್ನುವ ವಿಷಯದ ಮೇಲೆ 9 ವಿಭಾಗಗಳಲ್ಲಿ ನ್ಯಾಷನಲ್ ಪಂಚಾಯತ್ ಆವಾರ್ಡ್ ನೀಡುತ್ತಿದ್ದು, ‘ಆರೋಗ್ಯಕರ ಗ್ರಾಮ ಪಂಚಾಯತ್’ ವಿಭಾಗದಲ್ಲಿ ರಾಜ್ಯದಿಂದ ವಂಡ್ಸೆ ಗ್ರಾಮ ಪಂಚಾಯತ್ ಕೇಂದ್ರ ಸರಕಾರಕ್ಕೆ ನಾಮ ನಿರ್ದೇಶನಗೊಂಡಿದೆ.
ಈ ದೇಶದಲ್ಲಿ ಒಟ್ಟು 2.68ಲಕ್ಷ ಗ್ರಾಮ ಪಂಚಾಯತ್ಗಳಿದ್ದು ಅಂತಿಮ 55ರ ಪಟ್ಟಿಯಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ಒಳಗೊಂಡಿದೆ. ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕದ ಮೂಲಕ ರಾಜ್ಯ, ದೇಶದ ಗಮನ ಸಳೆದಿರುವ ವಂಡ್ಸೆ ಗ್ರಾಮ ಪಂಚಾಯತ್ ರಾಜ್ಯದಲ್ಲಿ ಪ್ರಥಮ ಬಾರಿಗೆ “ಸಮುದಾಯ ಉಪಶಮನ ಆರೈಕೆ ಕೇಂದ್ರ’ ವನ್ನು ನಿರಾಮಯ ಸೊಸೈಟಿ’ಯ ಮೂಲಕ ಅನುಷ್ಟಾನ ಮಾಡುವುದರರೊಂದಿಗೆ ರಾಜ್ಯದ ಗಮನ ಸೆಳೆದಿದೆ. ಅಂತಿಮ ಪ್ರಶಸ್ತಿ ಸುತ್ತಿಗಾಗಿ ಪರಿಶೀಲನೆ ಮಾಡಲು ಕೇಂದ್ರ ಸರಕಾರದ ಪಂಚಾಯತ್ ರಾಜ್ ಮಂತ್ರಾಲಯದ ಹಿರಿಯ ಅಧಿಕಾರಿಗಳಾದ ಪಿನಾಕಿ ತಹಬಿಲ್ದಾರ್ ಮತ್ತು ಡಾ.ಮಮತಾ ಕುಮಾರಿ ಅಧಿಕಾರಿಗಳ ತಂಡ ಗ್ರಾಮ ಪಂಚಾಯತ್ಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಉದಯ ಶೆಟ್ಟಿ, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಜಿಲ್ಲಾ ಪಂಚಾಯತ್ ಎಸ್.ಡಿ.ಜಿ ಸೆಲ್ ಮೇಲ್ವಿಚಾರಕ ಅನಿಲ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ತಾಲೂಕು ಪಂಚಾಯತ್ ಪ್ರಭಾರ ಯೋಜನಾಧಿಕಾರಿ ಸತೀಶ, ಸಹಾಯಕ ನಿರ್ದೇಶಕಿ ದೀಪಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಗೋವರ್ದನ್ ಜೋಗಿ, ಗ್ರಾಮ ಪಂಚಾಯಿತಿ ಎಲ್ಲಾ ಮಾಜಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಜಿ ರಾಮ, ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾಗ್ಯವತಿ, ಗ್ರಾಮ ಆಡಳಿತ ಅಧಿಕಾರಿ ವಿಘ್ನೇಶ, ಕೃಷಿ ಅಧಿಕಾರಿ ಪರಶುರಾಮ, ಪಶುವೈದ್ಯಾಧಿಕಾರಿ ಶ್ರೀದೀಕ್ಷಾ, ವಂಡ್ಸೆ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕರ್, ನಿರಾಮಯ ಸೊಸೈಟಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿಗಳು ಮುಂತಾದವರೊಂದಿಗೆ ಚರ್ಚಿಸಿ, ದಾಖಲೆಗಳನ್ನು ಪರಿಶೀಲಿಸಿ, ಕ್ಷೇತ್ರ ಭೇಟಿ ನಡೆಸಿದರು. ಹಾಗೂ ಆರೋಗ್ಯ, ಶಿಕ್ಷಣ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕದ ಸಾಧನೆಗೆ ಪ್ರಶಂಸೆ ವ್ಯಕ್ತ ಪಡಿಸಿದರು.












