ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :2026-27 ಸಾಲಿನ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ, ಪಿಂಚಣಿ, ವೈದ್ಯಕೀಯ ವೆಚ್ಚ, ಅಪಘಾತ ಪರಿಹಾರಕ್ಕಾಗಿ ಇರುವ ನಿಧಿಯನ್ನು 60 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ ತರಬೇತಿ ಕೇಂದ್ರಗಳು,104 ಶ್ರಮಿಕ ವಸತಿ ಶಾಲೆಗಳು ಹಾಗೂ 200 ಕೋಟಿ ರೂ ವೆಚ್ಚದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪಿಸಿ ಕಾರ್ಮಿಕರ ಸೌಲಭ್ಯಗಳಿಗೆ ಹಣದ ಕೊರತೆ ಮಾಡುವುದನ್ನು ವಿರೋಧಿಸಿ ಹಾಗೂ ಕರ್ನಾಟಕದಲ್ಲಿ ಕಲ್ಯಾಣ ಮಂಡಳಿ ಪುನರ್ ಸ್ಥಾಪಿಸಿ ರದ್ದಾಗದಂತೆ ಕ್ರಮವಹಿಸಲು ಇಂದು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಸಿಐಟಿಯು ಮನವಿ ನೀಡಿದೆ.
ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವಿಧಾನ ಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಕಟ್ಟಡ ಕಾರ್ಮಿಕರ ಹಣ ಕಲ್ಯಾಣಕ್ಕಾಗಿ ಮಾತ್ರ ಬಳಸಲು ಮತ್ತು ಈಗಾಗಲೇ 62-63 ವರ್ಷ ಪ್ರಾಯದ ಕಟ್ಟಡ ಕಾರ್ಮಿಕರ ತಿರಸ್ಕರಿಸಿದ ಪಿಂಚಣಿ ಅರ್ಜಿಗಳ ಬಗ್ಗೆಯೂ ಮಾತನಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕಳೆದ 2024-25 ಹಾಗೂ 2025-2026 ನೇ ಸಾಲಿನ ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಹಣ ಜಮೆಗೆ ಬಾಕಿ ಇರುವ ಬಗ್ಗೆಯೂ ಗಮನ ಸೆಳೆಯಲಾಯಿತು.
ಈ ವೇಳೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ,ಸಂಘದ ಅಧ್ಯಕ್ಷರಾದ ಚಿಕ್ಕ ಮೊಗವೀರ ಗಂಗೊಳ್ಳಿ, ಕೋಶಾಧಿಕಾರಿ ಚಂದ್ರಶೇಖರ್ ವಿ, ವಸಂತ್ ಕುಮಾರ್ ಮೊದಲಾದವರು ಇದ್ದರು.












