ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ರಸಿದ್ಧ ಗಾಯಕ, ಆಕಾಶವಾಣಿ ಕಲಾವಿದ ಡಾ.ಗಣೇಶ ಗಂಗೊಳ್ಳಿ ಎ.7 ಮಂಗಳವಾರ ನಿಧನರಾದರು. ಸ್ಕೂಟರ್ ನಲ್ಲಿ ಉಡುಪಿಗೆ ಹೊರಟಿದ್ದ ಅವರು ಸಾಲಿಗ್ರಾಮದಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿ ತೀವ್ರ ಅಸ್ವಸ್ಥಗೊಂಡರು. ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು.
ಮಂಗಳೂರು ಆಕಾಶವಾಣಿ ಕಲಾವಿದರಾಗಿ ಪರಿಚಿತರಾದ ಅವರು ಗಾಯಕರಾಗಿ ಬೇಡಿಕೆ ಗಳಿಸಿದ್ದರು. ಜಾನಪದ ಗೀತೆಗಳ ಮೂಲಕವೇ ಪ್ರಸಿದ್ಧರಾಗಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ರೈತಗೀತೆಯ ಮೂಲಕ ಖ್ಯಾತಿ ಗಳಿಸಿದ್ದರು. ತನ್ನದೆಯಾದ ಸಂಗೀತ ಬಳಗವನ್ನು ರೂಪಿಸಿಕೊಂಡು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಹಲವಾರು ಕಡೆಗಳಲ್ಲಿ ಸಂಗೀತ ಕಲಿಸುತ್ತಿದ್ದರು. ನೂರಾರು ಗಾಯಕರನ್ನು ಅವರು ಸೃಷ್ಟಿಸಿದ್ದರು.
ಉಡುಪಿ ಜಿಲ್ಲಾ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕುಂದಾಪ್ರ ಕನ್ನಡದ ಹಾಡುಗಳನ್ನು ಬಹುತೇಕ ಎಲ್ಲ ವೇದಿಕೆಗಳಲ್ಲೂ ಹಾಡುತ್ತಾ ಗಮನ ಸಳೆಯುತ್ತಿದ್ದರು. ಇವರ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಮುಖ್ಯವಾಗಿ ಕರ್ನಾಟಕ ಯುವರತ್ನ ಪ್ರಶಸ್ತಿ, ಸ್ವಾಮಿ ವಿವೇಕಾನಂದ ಪ್ರಶಸ್ತಿ, ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದವು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.












