ಕುಂದಾಪುರ ಮಿರರ್ ಸುದ್ದಿ….

ಬೈಂದೂರು: ಅರೆಹೊಳೆಯಂತಹ ಗ್ರಾಮೀಣ ಪ್ರದೇಶದಲ್ಲಿ ರಂಗಚಟುವಟಿಕೆ, ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದು, ಇದೇ ಎಪ್ರಿಲ್ 16ರಿಂದ ಎಪ್ರಿಲ್ 20ರ ತನಕ ‘ಅರೆಹೊಳೆ ದಿಬ್ಬಣ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದೆ. ಇದೇ ಸಂದರ್ಭದಲ್ಲಿ ಅರೆಹೊಳೆ ರಂಗಶಾಲೆಯ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಆಡುಂಬೊಲ ನಡೆಯಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಮುಖ್ಯಸ್ಥರಾದ ಅರೆಹೊಳೆ ಸದಾಶಿವ ರಾವ್ ತಿಳಿಸಿದರು.
ಅವರು ಬುಧವಾರ ಅರೆಹೊಳೆ ರೆಪರ್ಟರಿ ಮತ್ತು ಥಿಯೇಟರ್ ಸ್ಕೂಲ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಎ.16 ಗುರುವಾರ ಬೆಳಿಗ್ಗೆ 8 ಗಂಟೆಗೆ ಎ.ಎಸ್.ಕೆ ಫೌಂಡೇಶನ್ ಪ್ರಾಯೋಜಿತ ಐದು ದಿನಗಳ ರಂಗ ಶಿಬಿರ ‘ರಂಗಿನಾಟ’ವನ್ನು ಯಕ್ಷಗಾನ ಗುರುಗಳಾದ ಸುಜಯೀಂದ್ರ ಹಂದೆ ಸಾಲಿಗ್ರಾಮ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮಹಾಗಣಪತಿ ವಾದ್ಯವೃಂದ ಆಕಳಬೈಲು ಇವರ ಪ್ರಸುತಿಯಲ್ಲಿ ಸ್ಯಾಕ್ಸೋಪೋನ್ ವಾದ್ಯಗೋಷ್ಠಿ ನಡೆಯಲಿದೆ. ಸಂಜೆ 5.30ಕ್ಕೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರ ಪ್ರಸ್ತುತಿಯಲ್ಲಿ ಧರ್ಮಸ್ಥಳದ ಮಹಿಮೆಯನ್ನು ಸಾರುವ ‘ಧರ್ಮ ಸಂಸ್ಥಾಪನಾರ್ಥಾಯ’ ಎನ್ನುವ ನೃತ್ಯರೂಪಕದ ಪ್ರಥಮ ಪ್ರದರ್ಶನ ನಡೆಯಲಿದೆ. ರಾತ್ರಿ 8 ಕ್ಕೆ ಹನುಮಗಿರಿ ಮೇಳದವರಿಂದ ಯಕ್ಷಗಾನ ‘ಸಾಕೇತ ಸಾಮ್ರಾಜ್ಞಿ’ ಪ್ರದರ್ಶನಗೊಳ್ಳಲಿದೆ ಎಂದರು.
ಎ.17ರಂದು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಯಕ್ಷಗಾನ ತಾಳಮದ್ದಳೆ ‘ಸುದರ್ಶನ ವಿಜಯ’ ನಡೆಯಲಿದೆ. ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಪ್ರಸ್ತುತಿಯಲ್ಲಿ ತಾಳಮದ್ದಳೆ ನಡೆಯಲಿದೆ. ಸಂಜೆ 7.30ಕ್ಕೆ ನಟನ ಪ್ರಸ್ತುತಿಯಲ್ಲಿ ನಾಟಕ ‘ಕಣಿವೆಯ ಹಾಡು’ ಪ್ರದರ್ಶನಗೊಳ್ಳಲಿದೆ ಎಂದರು.
ಎ.18ರಂದು ಮಧ್ಯಾಹ್ನ 2.30ಕ್ಕೆ ಅರೆಹೊಳೆ ನೃತ್ಯ ತರಗತಿಯ ವಿದ್ಯಾರ್ಥಿಗಳಿಂದ ‘ನೃತ್ಯ ವರ್ಷಾ’, ಗೀತಾ ಬೈಂದೂರು ನೇತೃತ್ವದ ಇನಿದನಿ ಮ್ಯೂಸಿಕಲ್ಸ್ ಬೈಂದೂರು ಇವರಿಂದ ‘ಹಾಡುತಾ ಆಡುತಾ’, ಸಂಜೆ 5ಕ್ಕೆ ಅರೆಹೊಳೆ ದಿಬ್ಬಣ ಪುರಸ್ಕಾರ ಪ್ರದಾನ ನಡೆಯಲಿದ್ದು, ಹಿರಿಯ ಸ್ಯಾಕ್ಸೋಪೋನ್ ವಾದಕ ಮಂಜು ದೇವಾಡಿಗ ಅಕಳಬೈಲು, ಹಿರಿಯ ಯಕ್ಷಗಾನ ಕಲಾವಿದ ಮಹಾಬಲೇಶ್ವರ ರೈ ಕಾಸರಗೋಡು, ಹಿರಿಯ ಸೂಲಗಿತ್ತಿ ತುಂಗ ದೇವಾಡಿಗ ಚಿಕ್ತಾಡಿ ಇವರಿಗೆ ‘ಅರೆಹೊಳೆ ದಿಬ್ಬಣ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ ಭಾಗವಹಿಸಲಿದ್ದಾರೆ. ಸಂಜೆ 7.15ರಿಂದ ಅಯಣ ಡಾನ್ಸ್ ಕಂಪನಿ ಪ್ರಸ್ತುತಿಯಲ್ಲಿ ‘ಧ್ರುವ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದರು.
ಎ.19 ಆದಿತ್ಯವಾರ ಮಧ್ಯಾಹ್ನ 2.30ಕ್ಕೆ ಅರೆ ಶಾಸ್ತ್ರೀಯ ಸಮೂಹ ನೃತ್ಯ ಸ್ಪರ್ಧೆ ‘ನೂಪುರಂಗಳ್…’, ಸಂಜೆ 6.45ಕ್ಕೆ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಗಾನನೃತ್ಯ ಅಕಾಡೆಮಿ ಮಂಗಳೂರು ಇವರ ಪ್ರಸ್ತುತಿಯಲ್ಲಿ ‘ಜ್ವಾಲಾಮುಖಿ ಅಂಬೆ’ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ. ಎ.20 ಸೋಮವಾರ ಮಧ್ಯಾಹ್ನ 2.30ರಿಂದ ರಾಜ್ ಗುರು ಹೊಸಕೋಟೆ ಮತ್ತು ನಯನ ಸೂಡ ನೃತೃತ್ವದ ಅದಿಮೂಲ ತಂಡ ಹಾಗೂ ರಂಗಿನಾಟ ಶಿಬಿರಾರ್ಥಿಗಳಿಂದ ರಂಗಗೀತೆಗಳು, ಸಂಜೆ 7.30ಕ್ಕೆ ನೃತ್ಯ ನಿಕೇತನ ಕೊಡವೂರು ಇವರಿಂದ ನೃತ್ಯ ರೂಪಕ ನಾರಸಿಂಹ ಪ್ರದರ್ಶನಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಅರೆಹೊಳೆ ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಕಾರಂತ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚಿಕ್ತಾಡಿ ಗೆಳೆಯರ ಬಳಗದ ಅಧ್ಯಕ್ಷ ಉಮೇಶ ಮೊಗವೀರ, ನಂದಗೋಕುಲ ತಂಡದ ನೃತ್ಯ ನಿರ್ದೇಶಕಿ ಶ್ವೇತಾ ಅರೆಹೊಳೆ ಉಪಸ್ಥಿತರಿದ್ದರು. ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ ಕಾರ್ಯಕ್ರಮ ನಿರ್ವಹಿಸಿದರು.












