ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನನದೊಂದಿಗೆ ಹಿಂದುಳಿದ ಸಮಾಜದ ಬೆಳಕು ಹುಟ್ಟಿತು. ಸ್ವತಃ ತಾನು ಅವಮಾನ, ಶೋಷಣೆ ಅನುಭವಿಸಿದರೂ ಹಿಂದುಳಿದ ಸಮಾಜದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆಯ ಹರಿಕಾರರಾದರು. ಸಮಾಜದಲ್ಲಿನ ಅನಿಷ್ಠ ಪೀಡುಗುಗಳ ವಿರುದ್ಧ ಜಾಗೃತಿ ಮೂಡಿಸಿ ಪರಿವರ್ತನೆಗೆ ಕಾರಣರಾದರು. ಅಂಥಹ ಅಂಬೇಡ್ಕರ್ ಅವರ ಚಿಂತನೆಗಳನ್ನು ಅನುಸರಿಸಿಕೊಂಡರೆ ಭಾರತ ದೇಶ ಬಲಿಷ್ಠವಾಗುತ್ತದೆ ಎಂದು ಹಿಂದುಳಿದ ಸಮಾಜದ ಮುಖಂಡರಾದ ಅಶೋಕ ಪೂಜಾರಿ ಬೀಜಾಡಿ ಹೇಳಿದರು.
ಅವರು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಎ.14ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ., ಅಂಬೇಡ್ಕರ್ ವಾದ ತಾಲೂಕು ಸಮಿತಿ ಕುಂದಾಪುರ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಮಾನವ ಪ್ರೇಮಿಗಳಿಗೆಲ್ಲ ಅಭಿಮಾನದ ವ್ಯಕ್ತಿ. ಸಂವಿಧಾನದಿಂದಾಗಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ಬ೦ದಿದೆ. ಮಹಾನ್ ಮಾನವತವಾದಿ ಅಂಬೇಡ್ಕರ್ ಅವರ ತತ್ವ ಚಿಂತನೆಗಳನ್ನು ನಾವೆಲ್ಲಾ ಅನುಸರಿಬೇಕು. ದಲಿತ ಸಂಘಟನೆಗಳು ಎಲ್ಲ ಒಟ್ಟಾಗಿ ಸಮುದಾಯದ ಅಭಿವೃದ್ಧಿಗಾಗಿ ಪ್ರಾಮಾಣಿಕ ಕೆಲಸ ಮಾಡಬೇಕು. ಇವತ್ತು ದೇಶದಲ್ಲಿ ೨೫ ಲಕ್ಷಕ್ಕೂ ಅಧಿಕ ಸಂಘಟನೆಗಳಿವೆ. ಎಲ್ಲರೂ ಸಮಾಜದ ವಿಷಯದಲ್ಲಿ ಸಾಂಘಿಕವಾಗಿ ಶ್ರಮಿಸಬೇಕು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ., ಅಂಬೇಡ್ಕರ್ ವಾದ ಇದರ ಪ್ರಧಾನ ಸಂಚಾಲಕರಾದ ಕೆ.ಸಿ ರಾಜು ಬೆಟ್ಟಿನಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಮುಖಂಡರಾದ ಚಂದ್ರಶೇಖರ ಡಾ.ಬಿ.ಆರ್.ಅಂಬೇಡ್ಕರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕುಂದಾಪುರ ನಗರ ಯೋಜನ ಪ್ರಾಧೀಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ತ, ಗ್ರಾಮ ಪಂಚಾಯತ್ ನೌಕರರ ಸಂಘದ ಉಪಾಧ್ಯಕ್ಷ ನಾರಾಯಣ ಬೀಜಾಡಿ, ವಿಮಾ ನೌಕರರ ಸಂಘದ ಭೋಜರಾಜ ಕೆ., ಸತೀಶ ಕಂಚುಗೋಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ತಾಲೂಕು ಸಮಿತಿ ಕೋಶಾಧಿಕಾರಿ ಚಂದ್ರ ಕೊರ್ಗಿ ಸ್ವಾಗತಿಸಿದರು. ಸಮೀಕ್ಷಾ ಅಂಬೇಡ್ಕರ್ ಗೀತೆ ಹಾಡಿದರು.












