ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಡಿಜಿಟಲ್ ಲೋಕದಿಂದ ಹೊರಬಂದು, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸುಜ್ಞಾನ ಎಜುಕೇಷನಲ್ ಟ್ರಸ್ಟ್ ಆಯೋಜಿಸಿರುವ ‘ಮಂಥನ ‘ ಬೇಸಿಗೆ ಶಿಬಿರವು ಮಕ್ಕಳ ಬದುಕಿಗೆ ಹೊಸ ದಾರಿದೀಪವಾಗಲಿದೆ ಎಂದು ಸುಣ್ಣಾರಿಯ ವಿವೇಕೋದಯ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ತಿಳಿಸಿದರು.
ಅವರು ಸುಜ್ಞಾನ ಎಜುಕೇಷನಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ‘ಮಂಥನ’ ಬೇಸಿಗೆ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರದ ನಾಲ್ಕನೇ ದಿನವು ವೈವಿಧ್ಯಮಯ ಚಟುವಟಿಕೆಗಳಿಂದ ಕೂಡಿದ್ದು, ಶಿಬಿರಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿತು. ಪಾಕ ತಜ್ಞ ಸುಜನ್ ಕುಂದಾಪುರ ಅವರಿಂದ ಮಕ್ಕಳು ‘ಓರಿಯೊ ಸೀಸರ್ ರೋಲ್’ ತಯಾರಿಕೆಯನ್ನು ಕಲಿತರು. ತಾವೇ ತಯಾರಿಸಿದ ಸಿಹಿತಿಂಡಿಯನ್ನು ಸವಿದು ಮಕ್ಕಳು ಸಂಭ್ರಮಿಸಿದರು.
ಶಾಂಭವಿ ರಂಜಿತ್ ಅವರು ಮಕ್ಕಳಿಗೆ ‘ಲೀಫ್ ಆರ್ಟ್’ (ಎಲೆಗಳ ಕಲೆ) ಹಾಗೂ ಆಕ್ಷನ್ ಸಾಂಗ್ ಮೂಲಕ ರಂಜಿಸಿದರು. ಜುಂಬಾ ತಜ್ಞೆ ಸಹನಾ ಜಗನ್ನಾಥ್ ಮತ್ತು ಆಝಾದ್ ಮೊಹಮ್ಮದ್ ಅವರು ಜುಂಬಾ ಹಾಗೂ ಏರೋಬಿಕ್ಸ್ ತರಬೇತಿ ನೀಡಿದರು. ಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಮಕ್ಕಳು ಶಾರೀರಿಕ ಕಸರತ್ತಿನ ಜೊತೆಗೆ ಮಾನಸಿಕ ಉಲ್ಲಾಸ ಪಡೆದರು.
ಮುಖ್ಯ ಅತಿಥಿಯಾಗಿದ್ದ ಬಾರ್ಕೂರಿನ ರುಕ್ಮಿಣಿ ಶೆಟ್ಟಿ ಸ್ಮಾರಕ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಭಾಸ್ಕರ್ ಶೆಟ್ಟಿ ಮಾತನಾಡಿ, ” ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಕೌಶಲವನ್ನು ನೀಡುತ್ತಿರುವ ಸುಜ್ಞಾನ ಸಂಸ್ಥೆಯ ಕಾರ್ಯ ಶ್ಲಾಘನೀಯ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಶಿಬಿರಗಳು ಪೂರಕ,” ಎಂದರು.
ಕನ್ನಡ ಉಪನ್ಯಾಸಕ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಸುಮಾರು 1,500 ವಿದ್ಯಾರ್ಥಿಗಳು ಹಾಗೂ 25ಕ್ಕೂ ಹೆಚ್ಚು ಚಟುವಟಿಕೆಗಳು ಈ ಶಿಬಿರದ ಯಶಸ್ಸಿಗೆ ಸಾಕ್ಷಿ. ಏಳು ದಿನಗಳ ಈ ಅವಕಾಶವನ್ನು ಮಕ್ಕಳು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, “ಬೇರೆ ಬೇರೆ ಊರಿನಿಂದ ಆಗಮಿಸಿರುವ ವಿದ್ಯಾರ್ಥಿಗಳು ಮೊಬೈಲ್ ಬದಿಗಿಟ್ಟು ಇಲ್ಲಿ ಕಲಿಯುತ್ತಿರುವ ಕೌಶಲಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಚಿಟ್ಟಿಬೈಲು ಜಗನ್ನಾಥ ಶೆಟ್ಟಿ, ಟ್ರಸ್ಟ್ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಉಪಸ್ಥಿತರಿದ್ದರು.












