ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬಿದ್ಕಲ್ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಭಾಭವನ ನಿರ್ಮಾಣಕ್ಕೆ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ರೂ.2.00 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರುರವರು ಶಾಲಾ ಉಪಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಈ ಬಗ್ಗೆ ಸಂದರ್ಭ ಮಾತನಾಡಿದ ಯೋಜನಾಧಿಕಾರಿಯವರು ಗ್ರಾಮದ ಪ್ರತೀ ಮಕ್ಕಳೂ ಶಾಲಾ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಉತ್ತಮ ಶಿಕ್ಷಣ ದೊರೆಯಬೇಕಾದರೆ, ಮೂಲಭೂತ ಸೌಕರ್ಯಗಳಿರುವ ಶಾಲೆಯು ಕೂಡ ಗ್ರಾಮಕ್ಕೆ ಅತೀ ಮುಖ್ಯವಾಗಿ ಬೇಕಾಗುತ್ತದೆ. ಪ್ರತೀ ಗ್ರಾಮದಲ್ಲಿಯೂ ಶಿಕ್ಷಣದ ಕ್ರಾಂತಿ ಆಗಬೇಕು. ಈ ನಿಟ್ಟಿನಲ್ಲಿ ಶಾಲೆಗಳ ತರಗತಿ ಕೊಠಡಿ ನಿರ್ಮಾಣಕ್ಕೆ, ಶಾಲಾ ಸಭಾಭವನ ನಿರ್ಮಾಣಕ್ಕೆ, ಶಾಲಾ ಶೌಚಾಲಯ ನಿರ್ಮಾಣಕ್ಕೆ, ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುದಾನವನ್ನು ಒದಗಿಸಿಕೊಡಲಾಗುತ್ತಿದೆ. ಇಷ್ಟೇ ಅಲ್ಲದೇ ಮಕ್ಕಳು ಸರಿಯಾಗಿ ಕುಳಿತು ಪಾಠವನ್ನು ಕೇಳಲು ಅನುಕೂಲವಾಗುವಂತೆ ಬೆಂಚು ಡೆಸ್ಕ್ಗಳ ಒದಗಣೆ, ಶಿಕ್ಷಕರಿಲ್ಲದ ಅಗತ್ಯ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕಾತಿಯನ್ನ ಕೂಡ ಮಾಡಲಾಗುತ್ತಿದೆ. ಇದರೊಂದಿಗೆ SSLC ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಗೊಳ್ಳಲು ಸಹಕಾರಿಯಾಗುವಂತೆ ವಾರ್ಷಿಕ 03 ತಿಂಗಳುಗಳ ಕಾಲ ಶಾಲಾ ಎಲ್ಲಾ SSLC ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ಕ್ಲಾಸ್ನ್ನು ಕೂಡ ಯೋಜನೆಯ ವತಿಯಿಂದ ನೀಡಲಾಗುತ್ತಿದೆ.
ಈವರೆಗೆ ತಾಲೂಕಿನಲ್ಲಿ ವರ್ಷಂದೀಚೆಗೆ ಒಟ್ಟು 47 ಲಕ್ಷದ 25 ಸಾವಿರ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 17 ನೇ ಶಾಲೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಶಾಲಾ ಉಪಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ, ಉಪಪ್ರಾಂಶುಪಾಲರು ಮಹೇಶ್ ಶೆಣೈ ಉದ್ಯಮಿಗಳು, ದಯಾನಂದ ಬಾಸ್ಬೈಲು, ಗುತ್ತಿಗೆದಾರರು, ದೀಪಕ್ ಶೆಟ್ಟಿ ಉದ್ಯಮಿಗಳು, ಕಿಶೋರ್ ಶೆಟ್ಟಿ ಉದ್ಯಮಿಗಳು ದೀನ್ ಪಾಲ್ ಶೆಟ್ಟಿ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಮೊಳಹಳ್ಳಿ, ಒಕ್ಕೂಟದ ಆದ್ಯಕ್ಷೆ ಸುಮನಾ, ಕಾರ್ಯದರ್ಶಿ ಸಂಗೀತಾ ಮೇಲ್ವಿಚಾರಕಿ ಶರ್ಮಿಳಾ ಜಿ, ಸೇವಾಪ್ರತಿನಿಧಿ ಶೋಭಾ ಹಾಗೂ ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.












