ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಸಿ.ಎಂ.ಭೇಟಿ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ರತೀ ವರ್ಷವೂ ಇಲ್ಲಿ ಕಡಲ್ಕೊರೆತ ಸಂಭವಿಸುತ್ತಲೇ ಇದೆ. ಜನರು ಸಮಸ್ಯೆ ಅರಿವಿಗೆ ಬಂದಿದೆ. ಕಡಲ್ಕೊರೆತ ನಿಯಂತ್ರಣಕ್ಕೆ ಕೆಲಸ ಕೂಡಲೇ ಪ್ರಾರಂಭಿಸಬೇಕು. ತಾತ್ಕಾಲಿಕವಾಗಿ ತುರ್ತು ಕಾಮಗಾರಿಕೆ ಎಷ್ಟು ಹಣ ಬೇಕೋ ಅದನ್ನು ಕೂಡಲೇ ನೀಡಲಾಗುವುದು. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರಕ್ಕೆ ವಿಶೇಷ ಗಮನ ನೀಡಲಾಗುವುದು. ಹೊಸ ವಿಧಾನದ ಅಳವಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬುಧವಾರ ಮರವಂತೆಯ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
Video:

ಇಡೀ ಕಡಲ ತೀರ ಕಡಲ್ಕೊರೆತ ತಡೆಗೆ ಕಲ್ಲು ಹಾಕುವ ಕಾರ್ಯ ಸಮರ್ಪಕವಾಗಿಲ್ಲ. ತಳಮಟ್ಟವನ್ನು ಸರಿಪಡಿಸಿಕೊಂಡು ನೀಟಾಗಿ ಕಲ್ಲು ಹಾಕಬೇಕು. ಎಲ್ಲೆಲ್ಲಿ ಕಾಮಗಾರಿ ಆಗಿದೆಯೋ ಅದನ್ನು ಪರಿಶೀಲಿಸಿ, ಕಳಪೆ ಆಗಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಶಾಶ್ವತ ಕಾರ್ಯಕ್ರಮಕ್ಕೆ ಇಡೀ ಕಡಲತೀರದ ಡಿಪಿಆರ್ ಮಾಡಲು ಹೇಳಿದ್ದೇನೆ. ಸೂಚನೆ ನೀಡಲಾಗಿದೆ. ವಿಶೇಷ ಅನುದಾನದ ಮೂಲಕ ಅಭಿವೃದ್ದಿ ಪಡಿಸಲಾಗುವುದು. ಮರವಂತೆ ಬಂದರು ಅಭಿವೃದ್ದಿ 184 ಕೋಟಿ ರೂಪಾಯಿ ಟೆಂಡರ್ ಆಗಿದ್ದು ತಕ್ಷಣ ಆ ಕೆಲಸವನ್ನು ಆರಂಭಿಸಲಾಗುವುದು ಎಂದರು.
ಈಗಾಗಲೇ ಮಳೆಯಿಂದ ಸ್ವಲ್ಪ ಹಾನಿಯಾದರೂ ತಕ್ಷಣ 10 ಸಾವಿರ ಹಾಗೂ ಮನೆ ಬಿದ್ದ ಪ್ರಕರಣಗಳಿದ್ದರೆ 5 ಲಕ್ಷ ನೀಡುವಂತೆ ಜಿಲ್ಲಾದಿಕಾರಿಗಳಿಗೆ ಆದೇಶ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಅಂಗಾರ, ಕಂದಾಯ ಸಚಿವ ಆರ್.ಅಶೋಕ್, ಹಿಂದುಳಿದ ವರ್ಗಗಳ ಅಭಿವೃದ್ದಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮುಖ್ಯ ಕಾರ್ಯದರ್ಶಿ ಜಿ.ಜಗದೀಶ, ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಸಹಾಯಕ ಆಯುಕ್ತ ಕೆ.ರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ತಹಶೀಲ್ದಾರರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.











