ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕುಂದಾಪುರ ಸೈನ್ ಇನ್ ಸೆಕ್ಯೂರಿಟಿ ಸಿಸಿಟಿವಿ ಕಣ್ಗಾವಲು ಸಹಕಾರದಿಂದ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಬಂಧಿತ ವಿರಾಜಪೇಟೆ ಮೂಲದ ರವಿ. ದೇವಸ್ಥಾನದೊಳಗೆ ನುಗ್ಗಿದ ಆರೋಪಿ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಹಣ ಕಳವು ಮಾಡಲು ಯತ್ನಿಸಿದ್ದು, ಬಳಿಕ ಮತ್ತೊಂದು ಕಾಣಿಕೆ ಹುಂಡಿಯನ್ನು ಒಡೆಯಲು ಮುಂದಾಗಿದ್ದ ಎನ್ನಲಾಗಿದೆ.
ದೇವಸ್ಥಾನದಲ್ಲಿ ಸುಮಾರು ಒಂದು ವರ್ಷದ ಹಿಂದೆ ಕಳವು ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಭದ್ರತ ಕ್ರಮಗಳನ್ನು ಬಿಗಿಗೊಳಿಸುವ ಉದ್ದೇಶದಿಂದ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿಸ್ ಸಂಸ್ಥೆಯ ಸಹಕಾರ ಪಡೆದು ದೇವಸ್ಥಾನದ ಆವರಣದಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಿತ್ತು. ಕೆಮರಾಗಳ ನೇರ ನಿಗಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಸೋಮವಾರ ಮುಂಜಾನೆ ದೇವ ಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಹಾಗೂ ಕಾಣಿಕೆ ಹುಂಡಿಗಳನ್ನು ಒಡೆಯುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಸೆಕ್ಯೂರಿಟಿಸ್ ಸಂಸ್ಥೆಯ ಸಿಬಂದಿ ಕೆಮರಾದಲ್ಲಿ ಕಳ್ಳತನದ ಪ್ರಯತ್ನವನ್ನು ಲೈವ್ ಆಗಿ ಗಮನಿಸಿ, ಕೂಡಲೇ ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಮಾಹಿತಿ ದೊರೆತ ಕೂಡಲೆ ಪೊಲೀಸರು ದೇವಸ್ಥಾನಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆ ಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ತ್ವರಿತವಾಗಿ ಕಾರ್ಯಚರಣೆ ನಡೆಸಿದ ಪರಿಣಾಮ ದೇವಸ್ಥಾನದಲ್ಲಿದ್ದ ಹಣ ಹಾಗೂ ಬೆಲೆಬಾಳುವ ವಸ್ತುಗಳು ಕಳವಾಗುವುದನ್ನು ತಪ್ಪಿಸಲಾಗಿದೆ.
ಆರೋಪಿ ವಿರುದ್ಧ ಮೂಲ್ಕಿ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿದೆ. ದೇವಸ್ಥಾನದಲ್ಲಿ ಈ ಹಿಂದೆ ನಡೆದಿದ್ದ ಕಳವು ಪ್ರಕರಣಕ್ಕೂ ಆರೋಪಿಗೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿ ಕೆಮರಾದ ನಿರಂತರ ನಿಗಾ ವ್ಯವಸ್ಥೆಯಿಂದಾಗಿ ಕಳ್ಳತನದ ಯತ್ನವನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ












