ಮಹಾನ್ ವ್ಯಕ್ತಿಗಳ ಕುರಿತು ಓದುವುದಷ್ಟೇ ಅಲ್ಲ, ಅವರಂತೆ ಬದುಕುವುದನ್ನು ಕಲಿಯಬೇಕು– ಪರ್ತಕರ್ತ ಜಾನ್ ಡಿಸೋಜಾ

ಅಂಪಾರು: ತಂತ್ರಜ್ಞಾನವು ಜೀವನವನ್ನು ಸುಗಮಗೊಳಿಸಿದರೂ, ಮಾನಸಿಕ ನೆಮ್ಮದಿ, ಆರೋಗ್ಯ ಹಾಗೂ ಮಾನವೀಯ ಮೌಲ್ಯಗಳ ಮೇಲೆ ಅದರ ಪರಿಣಾಮಗಳ ಕುರಿತು ಆತ್ಮಾವಲೋಕನ ಅಗತ್ಯವೆಂದು ಮೌಲ್ಯ ಸಾರಥಿ ಪರ್ತಕರ್ತ
ಜಾನ್ ಡಿಸೋಜಾ ಅಭಿಪ್ರಾಯಪಟ್ಟರು.
ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ “ಸಂಜಯ ಸಿಂಚನ – ಮೌಲ್ಯ ಮಾಲಿಕೆ–2” ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರನ್ನುದ್ದೇಶಿಸಿ ಮಾತನಾಡಿದರು.
ತಂತ್ರಜ್ಞಾನಾಧಾರಿತ ಜೀವನಶೈಲಿಯಿಂದ ಉಂಟಾಗುವ ಮಾನಸಿಕ ಒತ್ತಡ, ಮೊಬೈಲ್ ಅವಲಂಬನೆ, ಬದಲಾಗುತ್ತಿರುವ ಮಾನವ ಸಂಬಂಧಗಳು ಹಾಗೂ ಜೀವನಶೈಲಿಯ ಪರಿಣಾಮಗಳನ್ನು ಅವರು ನೈಜ ಘಟನೆಗಳು ಮತ್ತು ಕಥೆಗಳ ಮೂಲಕ ವಿವರಿಸಿದರು.
“ಮೊಬೈಲ್ ಬಳಕೆಯನ್ನು ನಿಯಂತ್ರಿಸಿಕೊಂಡು, ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಕುರಿತು ಓದುವುದಷ್ಟೇ ಅಲ್ಲದೆ, ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ಅವರು ಕರೆ ನೀಡಿದರು.
ಸರಳ ಭಾಷೆ ಹಾಗೂ ನೈಜ ಉದಾಹರಣೆಗಳ ಮೂಲಕ ಅವರು ಮೌಲ್ಯಗಳನ್ನು ವಿವರಿಸಿದ ರೀತಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಚಿಂತನೆಗೆ ಪ್ರೇರಣೆ ನೀಡಿತು.
ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ,ಶೈಕ್ಷಣಿಕ ಸಂಚಾಲಕರು ಹಾಗೂ ಖಜಾಂಚಿಗಳಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ, ಶಾಲೆಯ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ, ಮುಖ್ಯೋಪಾಧ್ಯಾಯರಾದ ಉದಯ ಕುಮಾರ್ ಬಿ. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡ ಈ ಕಾರ್ಯಕ್ರಮವು ಮಾನವೀಯತೆ, ಸಂಸ್ಕಾರ, ಓದುವ ಹವ್ಯಾಸ ಹಾಗೂ ಉತ್ತಮ ಜೀವನಮೌಲ್ಯಗಳನ್ನು ಬೆಳೆಸುವ ಮಹತ್ವವನ್ನು ಸಾರಿತು.












