ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿಎ/ಸಿಎಸ್ ತರಬೇತಿ ಶಿಕ್ಷಣ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ತಲ್ಲೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ಕುಂದೇಶ್ವರ ದೇವಸ್ಥಾನ ಹತ್ತಿರ ಶಿಕ್ಷ ಪ್ರಭ ಅಕಾಡೆಮಿಯ ಆಡಿಟೋರಿಯಂನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಹಣ್ಣಿನ ಗಿಡ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಉಪವಲಯ ಅರಣ್ಯ ಅಧಿಕಾರಿ ಹಸ್ತಾ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರಿ ತುಂಬಾ ಆಳವಾಗಿರಬೇಕು ಮತ್ತು ತುಂಬಾ ದೊಡ್ಡ ಕನಸುಗಳನ್ನು ಹೊಂದಿರಬೇಕು. ಅದಕ್ಕೆ ತಕ್ಕಂತೆ ನಮ್ಮ ಕಠಿಣ ಪರಿಶ್ರಮ ಮತ್ತು ಹೋರಾಟವಿದ್ದರೆ ಗುರಿ ಬೇಗ ತಲುಪಬಹುದು ಎಂದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಇಂದು ಸಹಾಯಕ ಅರಣ್ಯ ಅಧಿಕಾರಿಯಾಗಿ ಆಯ್ಕೆಯಾಗಿದ್ದೇನೆ ಎಂದರೆ ಬಡ ಕುಟುಂಬದಲ್ಲಿ ಜನಿಸಿರುವ ಯಾವುದೇ ವಿದ್ಯಾರ್ಥಿಯು ಕೂಡ ನನ್ನಂತೆ ಸಾಧನೆ ಮಾಡಬಹುದು ಎಂದರು.

ಶಿಕ್ಷ ಪ್ರಭ ಸಂಸ್ಥೆಯ ಸಂಸ್ಥಾಪಕರಾದ ಪ್ರತಾಪಚಂದ್ರ ಶೆಟ್ಟಿಯವರು ಮಾತನಾಡಿ ನೆಲ-ಜಲ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಲಯನ್ಸ್ ಕ್ಲಬ್ ತಲ್ಲೂರು ಇದರ ಖಜಾಂಚಿ ಟಿ. ನಾರಾಯಣ ಶೆಟ್ಟಿಯವರು ಮಾತನಾಡುತ್ತಾ ಹಸ್ತಾ ಶೆಟ್ಟಿ ಮೇಡಮ್ ಅವರು ಇವತ್ತಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎಂದರು.
ಶಿಕ್ಷ ಪ್ರಭ ಸಂಸ್ಥೆಯ ಸಂಸ್ಥಾಪಕರಾದ ಭರತ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ದೂರದ ಯಾವುದೋ ವ್ಯಕ್ತಿಗಳನ್ನು ನೋಡಿ ಕಲಿಯುವುದಕ್ಕಿಂತ ನಮ್ಮ ನಡುವೆ ಇರುವ ಹಸ್ತಾ ಶೆಟ್ಟಿಯವರಿಂದ ಕಲಿಯುವುದು ಸಾಕಷ್ಟಿದೆ ಎಂದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ತಲ್ಲೂರಿನ ಅದ್ಯಕ್ಷರಾಗಿರುವ ಬಿ. ಗೋಪಾಲ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಅಧಿಕ ಹಣ್ಣಿನ ಗಿಡಗಳನ್ನು ಸಿಎ/ಸಿಎಸ್ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷ ಪ್ರಭ ಅಕಾಡೆಮಿಯ ಸಿಎ/ಸಿಎಸ್ ವಿದ್ಯಾರ್ಥಿಗಳು ಹಾಗೂ ಲಯನ್ಸ್ ಕ್ಲಬ್ ತಲ್ಲೂರು ಇದರ ಸದಸ್ಯರು ಉಪಸ್ಥಿತರಿದ್ದರು.
ಅಂಕಿತಾ ವಿ. ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.











