ಕುಂದಾಪುರ :ಸೆ.10 ಮತ್ತು 11ರಂದು ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್ ನಲ್ಲಿ ಭಾರತೀಯ ಮನೋವೈದ್ಯಕೀಯ ಸಂಘದ 32ನೇಯ ವಾರ್ಷಿಕ ವೈಜ್ಞಾನಿಕ ಸಮ್ಮೇಳನ

0
483

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಭಾರತೀಯ ಮನೋವೈದ್ಯಕೀಯ ಸಂಘ ಕರ್ನಾಟಕ ಶಾಖೆಯ 32ನೆಯ ವಾರ್ಷಿಕ ವೈಜ್ಞಾನಿಕ ಸಮ್ಮೇಳನವು ಇದೇ ಸೆ.10ರ ಶನಿವಾರ ಮತ್ತು 11 ರ ಭಾನುವಾರ ಕೋಟೇಶ್ವರದ ಯುವ ಮೆರಿಡಿಯನ್ ಬೇ ರೆಸಾರ್ಟ್ ನಲ್ಲಿ ನಡೆಯಲಿದೆ.

ಯುವ ಮೆರಿಡಿಯನ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ, ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಈ ಬಗ್ಗೆ ವಿವರಗಳನ್ನು ನೀಡಿದರು.

ಜಿಲ್ಲಾ ಕೇಂದ್ರಗಳು ಮತ್ತು ನಗರ ಪ್ರದೇಶಗಳಲ್ಲೇ ಈ ಹಿಂದೆ ಹೆಚ್ಚಾಗಿ ನಡೆಯುತ್ತಿದ್ದ ಈ ಸಮ್ಮೇಳನವು ಈ ಬಾರಿ ಕುಂದಾಪುರ ತಾಲೂಕಿನಲ್ಲಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದೊಂದು ವಿಶೇಷ. ಉಡುಪಿ ಮತ್ತು ಮಂಗಳೂರಿನ ಮನೋವೈದ್ಯಕೀಯ ಸಂಘಗಳು ಜಂಟಿಯಾಗಿ ಆಯೋಜಿಸಿರುವ ಈ ಸಮ್ಮೇಳನವು ಸೆ.10 ರ ಶನಿವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಸಚಿವ ಡಾ. ಅಶ್ವಥ್ ನಾರಾಯಣ್ ಸಿ. ಎನ್., ಹಿಂದುಳಿದ ವರ್ಗಗಳ ಅಭಿವೃದ್ಧಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ನಾಡೋಜ ಡಾ. ಜಿ. ಶಂಕರ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಕಿರಣ್ ಕುಮಾರ್ ಪಿ. ಕೆ. ವಹಿಸುವರು.

ಸಮ್ಮೇಳನದ ಪೂರ್ವಭಾವಿಯಾಗಿ ಸೆ.9ರ ಶುಕ್ರವಾರ ಎರಡು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲನೆಯ ಕಾರ್ಯಾಗಾರವು ಉಡುಪಿ ಜಿಲ್ಲೆಯ ವೃತ್ತಿಪರ ಪತ್ರಕರ್ತರಿಗಾಗಿದ್ದು, “ಆತ್ಮಹತ್ಯೆಯನ್ನು ಅರ್ಥೈಸಿಕೊಳ್ಳುವುದು” ಎಂಬ ವಿಷಯವಾಗಿರುತ್ತದೆ. ಈ ಕಾರ್ಯಾಗಾರವು ಉಡುಪಿ ಜಿಲ್ಲೆಯ ಐ ಎಂ ಎ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 9ರಿಂದ ಮಧ್ಯಾನ್ಹ 1 ರವರೆಗೆ ನಡೆಯುವುದು.

Click Here

ಎರಡನೆಯ ಕಾರ್ಯಾಗಾರವು ಕೋಟೇಶ್ವರದ ಯುವ ಮೆರಿಡಿಯನ್ ರೆಸಾರ್ಟ್ ನಲ್ಲಿ ಮಧ್ಯಾನ್ಹ 2 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಇದು ಉಡುಪಿ ಜಿಲ್ಲೆಯ ಸರ್ಕಾರಿ ವೈದ್ಯರಿಗೆ ಮತ್ತು ಐ ಎಂ ಎ ಕುಂದಾಪುರದ ವೈದ್ಯರುಗಳಿಗಾಗಿದೆ. ಇದರಲ್ಲಿ ಮಾನಸಿಕ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವುದು ಎಂಬ ವಿಷಯವಾಗಿ ಪರಿಣತರು ಮಾಹಿತಿ ನೀಡುವರು. ಈ ಕಾರ್ಯಾಗಾರಕ್ಕೆ ಈಗಾಗಲೇ ನೂರಕ್ಕೂ ಹೆಚ್ಚು ವೈದ್ಯರುಗಳು ನೋಂದಾವಣೆ ಮಾಡಿಕೊಂಡಿದ್ದಾರೆ.

ಸೆ 10 ಮತ್ತು 11 ರಂದು ನಡೆಯಲಿರುವ ಮುಖ್ಯ ಸಮ್ಮೇಳನವನ್ನು “ಸಮುದಾಯಕ್ಕೆ ಮಾನಸಿಕ ಆರೋಗ್ಯ ಮಾಹಿತಿ ಲಭ್ಯತೆಯ ಕುಂದು ಕೊರತೆಗಳು” ಎಂಬ ವಿಷಯದ ಕೇಂದ್ರಿತವಾಗಿರುತ್ತದೆ. ಈ ಬಗ್ಗೆ ಸಮುದಾಯಕ್ಕೆ ದೊರಕುತ್ತಿರುವ ಮತ್ತು ದೊರಕದಿರುವ ಸೇವೆಗಳ ಬಗ್ಗೆ ಚರ್ಚಿಸಲಾಗುವುದು. ಇದಕ್ಕೆ ಸಂಬಂಧಿತ ಕಾನೂನು ಅಂಶಗಳು ಇತ್ಯಾದಿ ಮಾಹಿತಿಗಳನ್ನು ಪರಿಣತ ತಜ್ಞರು ನೀಡುವರು ಎಂಬ ವಿವರಗಳನ್ನು ಸಮ್ಮೇಳನಾಧ್ಯಕ್ಷ ಡಾ. ಪ್ರಕಾಶ್ ತೋಳಾರ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರದ ಖ್ಯಾತ ಮನೋವೈದ್ಯ ಡಾ. ಕೆ. ಎಸ್. ಕಾರಂತ, ಇಂದು ಆತ್ಮಹತ್ಯೆ ಎಂಬುದು ಒಂದು ಸಾಮಾಜಿಕ ಪಿಡುಗಾಗಿದೆ. ಸಾಮಾನ್ಯವಾಗಿ ಮನೋರೋಗಿಗಳು ಮತ್ತು ಮನೋವೈದ್ಯರನ್ನು ಅಸ್ಪೃಷ್ಯರಂತೆ ಸಮಾಜ ಕಾಣುತ್ತಿದೆ. ಮನೋವೈದ್ಯರ ಸೇವಾ ಪ್ರತಿಫಲಗಳಿಗೆ ಪ್ರಚಾರದ ಕೊರತೆಯೇ ಇದಕ್ಕೆ ಕಾರಣ. ಆಧುನಿಕ ಜೀವನ ಶೈಲಿಯೇ ಆತ್ಮಹತ್ಯಾ ಪ್ರಕರಣಗಳಿಗೆ ಕಾರಣ. ಈ ಎಲ್ಲ ಅಂಶಗಳ ಬಗ್ಗೆ ಸಮ್ಮೇಳನದಲ್ಲಿ ಸಂವಾದ ನಡೆಯಲಿದೆ ಎಂದರು.

ಖ್ಯಾತ ಮನೋವೈದ್ಯೆ ಡಾ. ಮಹಿಮಾ ಆಚಾರ್ಯ ಮಾತನಾಡಿ, ಸಾಮಾನ್ಯವಾಗಿ ಸ್ಕಿಜೋಫ್ರಿನಿಯಾದಂತಹ ದೊಡ್ಡ ಮಾನಸಿಕ ಕಾಯಿಲೆಗಳ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿವೆ. ಇದರಿಂದಾಗಿ ಅಲ್ಪ ಪ್ರಮಾಣದ ಮನೋ ವಿಕಲ್ಪ ಹೊಂದಿದ್ದವರು ಭಯದಿಂದಲೇ ವೈದ್ಯರಲ್ಲಿಗೆ ಬರುವುದಿಲ್ಲ. ಮನೋರೋಗಿಗಳು ಆಸ್ಪತ್ರೆಗಳಿಗೇ ಬರಬೇಕೆಂದಿಲ್ಲ. ಮನೋವೈದ್ಯರೇ ಸಮುದಾಯದತ್ತ ತೆರಳಿ ಸೂಕ್ತ ಮಾಹಿತಿ, ಚಿಕಿತ್ಸೆ ಒದಗಿಸುವ ಸಾಧ್ಯತೆಗಳ ಬಗ್ಗೆ ಸಮ್ಮೇಳನದಲ್ಲಿ ವಿಶ್ಲೇಷಿಸಲಾಗುವುದು. ಸಾಮಾನ್ಯ ಮನೋ ವಿಕಲ್ಪಗಳ ಬಗ್ಗೆ ಆಪ್ತಸಮಾಲೋಚನೆಯಿಂದ ಔಷಧಿ ಇಲ್ಲದೆಯೇ ಗುಣಪಡಿಸಬಹುದು ಎಂಬುದನ್ನು ಸಾಮಾನ್ಯರಿಗೂ ಮನದಟ್ಟು ಮಾಡುವುದು, ಮನೋ ವಿಕಲ್ಪಗಳ ಲಕ್ಷಣಗಳ ಗುರುತಿಸುವಿಕೆ, ಅಂತವರ ನಿರ್ವಹಣೆಗಳ ಅರಿವು ನೀಡುವುದೇ ಈ ಸಮ್ಮೇಳನದಲ್ಲಿ ಮುಖ್ಯ ವಿಷಯವಾಗಿದೆ ಎಂಬ ಮಾಹಿತಿಗಳನ್ನು ನೀಡಿದರು.

ಸಮ್ಮೇಳನ ಸಮಿತಿ ಕಾರ್ಯದರ್ಶಿ, ಮಣಿಪಾಲ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಸಹಪ್ರಾಧ್ಯಾಪಕ ಡಾ. ರವೀಂದ್ರ ಮುನೋಳಿ ಮಾಹಿತಿ ನೀಡಿದರು.

Click Here

LEAVE A REPLY

Please enter your comment!
Please enter your name here