ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ದಕ್ಷಿಣ ಕನ್ನಡ ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪುಂಜಾಲಕಟ್ಟೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಖಂಡಿಸಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆಯವರ ನೇತೃತ್ವದಲ್ಲಿ ವಕೀಲರ ಸಂಘದಿಂದ ಬುಧವಾರ ಬೆಳಿಗ್ಗೆ ಕುಂದಾಪುರ ವಕೀಲರ ಭವನದ ಮುಂಭಾಗದಲ್ಲಿ ದೌರ್ಜನ್ಯಕ್ಕೊಳಗಾದ ವಕೀಲರ ಪರವಾಗಿ ಪ್ರತಿಭಟನೆ ನಡೆಯಿತು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ತೀವ್ರವಾಗಿ ಖಂಡಿಸಿದರು. ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಪ್ರಕರಣ ಇದ್ದು ಎದ್ರಿದಾರರ ವಿರುದ್ದ ಪ್ರತಿಬಂಧಕಾಜ್ಞೆ ಇದ್ದರೂ ಕೂಡ ಸುಳ್ಳು ದೂರಿನ ಆಧಾರದಲ್ಲಿ ವಕೀಲರ ಮೇಲೆ ಎಫ್.ಐ.ಆರ್ ದಾಖಲಿಸಿ ರಾತೋರಾತ್ರಿ ವಕೀಲರ ಮನೆ ಪ್ರವೇಶ ಮಾಡಿ ವಕೀಲರನ್ನು ಮನೆಯಿಂದ ಎಳೆದುಕೊಂಡು ಹೋಗಿ ನಡೆಸಿದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. ನ್ಯಾಯಾಲಯದ ಆದೇಶದಂತೆ ಈ ಕೂಡಲೇ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.
ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೊಸೆಫ್, ಜತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್, ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು.











