Category: ಸುದ್ದಿ

  • ಕುಂದಾಪುರ: ಧಾರ್ಮಿಕ ಆಚರಣೆಗಳಿಂದ ಸಂಸ್ಕೃತಿ ಉಳಿವು ಸಾಧ್ಯ : ಶಾಸಕ ಕಿರಣ್ ಕೊಡ್ಗಿ

    ಕುಂದಾಪುರ: ಧಾರ್ಮಿಕ ಆಚರಣೆಗಳಿಂದ ಸಂಸ್ಕೃತಿ ಉಳಿವು ಸಾಧ್ಯ : ಶಾಸಕ ಕಿರಣ್ ಕೊಡ್ಗಿ

    Video :

    ಬ್ರಹ್ಮಶ್ರೀ ನಾರಾಯಣಗುರು ಮಂದಿರ , ಶ್ರಿ ಸಿದ್ಧಿವಿನಾಯಕ ದೇವಸ್ಥಾನದ 23ನೇ ವರ್ಧಂತ್ಯುತ್ಸವ, ಆಯ್ದ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಆಚರಣೆ, ಸಂಪ್ರದಾಯ, ಸಂಸ್ಕೃತಿಗಳ ಬೆಸುಗೆಯಾಗಿರುವ ಭಾರತದ ಅಸ್ತಿತ್ವ ಇರುವುದೇ ಧಾರ್ಮಿಕ ಆಚರಣೆಯಲ್ಲಿ. ಧಾರ್ಮಿಕ ಆಚರಣೆಗಳು ನಡೆದಷ್ಟು ದೇಶದ ಗಟ್ಟಿತನ ಉಳಿಯುವುದು ಸಾಧ್ಯ ಎಂದು ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    ಬ್ರಹ್ಮಶ್ರೀ ನಾರಾಯಣಗುರು ಮಂದಿರ , ಶ್ರಿ ಸಿದ್ಧಿವಿನಾಯಕ ದೇವಸ್ಥಾನ ಕುಂದಾಪುರ ಇದರ 23ನೇ ವರ್ಧಂತ್ಯುತ್ಸವ ಪ್ರಯುಕ್ತ ಆಯ್ದ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಮಾತನಾಡಿ, ಬಿಲ್ಲವ ಸಂಘಕ್ಕೆ 75ನೇ ವರ್ಷದ ಸಂಭ್ರಮಕ್ಕೆ ದೇವತಾ ಕಾರ್ಯದ ಮೂಲಕ ಆರಂಭವಾಗಿದೆ. ಆ ಮೂಲಕ ಕುಂದಾಪುರದಲ್ಲಿ ಭಜನಾ ಕೈಂಕರ್ಯಕ್ಕೆ ಮುಂದಾದಾಗ ಸಂಸ್ಕಾರ ಬೆಳೆಯುತ್ತದೆ ಎಂದರು.

    ಇದೇ ಸಂದರ್ಭ ರಾಷ್ಟ್ರೀಯ ಮಟ್ಟದ ವಿಶೇಷಚೇತನ ಮಹಿಳಾ ಕ್ರಿಕೆಟ್ ನಲ್ಲಿ ಚಾಂಪಿಯನ್ ಆಗಿರುವ ಕ್ರಿಕೆಟ್ ತಾರೆ ಸೃಜನಾ ಎಸ್.ಪಿ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ನಡೆದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ 20 ಭಜನಾ ತಂಡಗಳು ಭಾಗವಹಿಸಿದವು.

    ಉದ್ಯಮಿ ಗಣೇಶ್ ಕಿಣೆ ಬೆಳ್ವೆ, ತಾಲೂಕು ಪಂಚಾಯಿತಿನ ಮಾಜಿ ಉಪಾಧ್ಯಕ್ಷರಾದ ಶೇಖರ್ ಚಾತ್ರಬೆಟ್ಟು, ಕುಂದಾಪುರ ಪುರಸಭೆಯ ಸದಸ್ಯರಾದ ಕೆ ಮೋಹನ್ ದಾಸ್ ಶೆಣೈ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ.ಕೆ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಮುಖ್ಯ ಕಾರ್ಯನಿರ್ವಣಾಧಿಕಾರಿ ಸಬಿತಾ ಪೂಜಾರಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿ, ಬಿಲ್ಲವ ಸಮಾಜದ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ,ಶಿವರಾಂ ಪೂಜಾರಿ ಬಸ್ರೂರು,ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರಾದ ಗಿರಿಜಾ ಮಾಣಿ ಗೋಪಾಲರವರುಈ ಸಭೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ ಕಡ್ಗಿ ಪ್ರಾಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ವಂದಿಸಿದರು. ಸತೀಶ್ ಪೂಜಾರಿ ವಡ್ಡರ್ಸೆ ಹಾಗೂ ಅನಿತಾ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ – ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ

    ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ – ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

    ಸೈಂಟ್ ಮೇರಿಸ್ ಪ್ರೌಢ ಶಾಲೆ, ಕುಂದಾಪುರ ಇಲ್ಲಿಯ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೊರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶೇ. 85 ಮತ್ತು 90 ಕ್ಕಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ನೀಡಿ, ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

    ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರೇಷ್ಮಾ ಡಿಸೋಜಾ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಪ್ರಮೀಳಾ ಡಿಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗರವರು ಸ್ವಾಗತಿಸಿ, ಸಹಶಿಕ್ಷಕಿ ರಕ್ಷಿತಾ ನಿರೂಪಿಸಿ, ವಿದ್ಯಾರ್ಥಿನಿ ಮನ್ವಿತಾ ವಂದಿಸಿದರು.

  • ಕುಂದಾಪುರದಲ್ಲಿ ಜಿಲ್ಲಾ ಮಟ್ಟದ ದೇಸಿ ಜಗಲಿ ಕಥಾ ಕಮ್ಮಟ ಉದ್ಘಾಟನೆ

    ಕುಂದಾಪುರದಲ್ಲಿ ಜಿಲ್ಲಾ ಮಟ್ಟದ ದೇಸಿ ಜಗಲಿ ಕಥಾ ಕಮ್ಮಟ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸೃಜಶೀಲತೆಯನ್ನು ಸೃಷ್ಟಿಸುವ ಕಥೆ ಬರೆಯುವುದು ಭಾವನೆಗಳನ್ನು ಅಭಿವ್ಯಕ್ತಿಸುವ ಉತ್ತಮ ವೇದಿಕೆ. ಕಥೆ ಓದುವುದು ಕಲ್ಪನಾ ಲೋಕದಲ್ಲಿ ವಿಹರಿಸುವ ಅನುಭವ ನೀಡುತ್ತದೆ. ಕಥೆ ರಚನೆಗೆ ವಸ್ತುಗಳ ಕೊರತೆ ಇಲ್ಲ, ಓದುವ ಹವ್ಯಾಸ, ಬರೆಯುವ ಆಸಕ್ತಿ, ಸೃಜನಶೀಲ ಮನಸು ಉತ್ತಮ ಕಥೆಗಾರರನ್ನಾಗಿ ರೂಪಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರು, ಲೇಖಕರು ಆಗಿರುವ ಡಾ.ಉಮೇಶ ಪುತ್ರನ್ ಹೇಳಿದರು.

    ಮಾ.2ರಂದು ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ಕಾಲೇಜು ರಸ್ತೆಯ ರೋಟರಿ ಕುಂದಾಪುರ ಮಿಡ್‍ಟೌನ್ ಸಭಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ‘ದೇಸಿ ಜಗಲಿ ಕಥಾ ಕಮ್ಮಟ’ವನ್ನು ಮಾಸ್ತಿಯವರ ಕಥೆ ಓದುವುದರ ಮೂಲಕ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

    ನಮ್ಮ ಮೆದುಳಿನ ಎಡಭಾಗ ವಿಶ್ಲೇಷಣೆಗೆ ಒತ್ತು ನೀಡುತ್ತದೆ. ಮೆದುಳಿನ ಬಲಭಾಗ ಸೃಜನಶೀಲತೆ, ಭಾವನೆ, ಕಲ್ಪನೆಗಳ ಹುಟ್ಟು ಹಾಕುತ್ತದೆ. ಭಾವನೆಗಳಿಗೆ ಅರ್ಥ ಕಲ್ಪಿಸಲು ಸಹಕರಿಸುತ್ತದೆ. ಹೊಸ ಹೊಸ ಚಿಂತನೆ, ಆಲೋಚನೆಗಳು ಕಥೆಗಳ ಹುಟ್ಟಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯ ಸದುಪಯೋಗ ಆಗಬೇಕು ಎಂದರು.

    ಇಂಥಹ ಕಥಾ ಕಮ್ಮಟಗಳು ದೊಡ್ಡ ದೊಡ್ಡ ಕಥೆಗಾರರನ್ನು ಬೆಳೆಸಲು ವೇದಿಕೆಯಾಗಲಿದೆ. ಆಧುನಿಕ ಜಗತ್ತಿನಲ್ಲಿ ಮೊಬೈಲ್‍ಗಾಗಿ ಹೆಚ್ಚು ಸಮಯವನ್ನು ಮೀಸಲಾಗಿಡುವ ಪರಿಪಾಠ ಬೆಳೆದಿದೆ. ಸಾಹಿತ್ಯ, ಸಾಂಸ್ಕøತಿಕ ವಿಚಾರಗಳ ಬಗ್ಗೆ ಹೆಚ್ಚು ಸಮಯ ಮೀಸಲಿಡುವುದರಿಂದ ಹೆಚ್ಚು ಪ್ರಯೋಜನವಿದೆ ಎಂದರು.

    ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಸದಾಶಿವ ರಾವ್ ಅರೆಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಅವರು ಬರೆಯುವಿಕೆಯ ಹಿಂದೆ ಓದುವಿಕೆ ಇರುತ್ತದೆ. ಓದಿದ ಬಳಿಕ ಕಥೆ ಕಟ್ಟುವ ಪ್ರಯತ್ನ ಮಾಡಬೇಕು. ಪ್ರಸ್ತುತ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಸಮಯ ವಿನಿಯೋಗಿಸುವುದನ್ನು ಬಿಟ್ಟು ಸಾಹಿತ್ಯ, ಸಾಂಸ್ಕøತಿಕ ವಿಚಾರಗಳ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ. ಓದುವ ವಿಚಾರದಲ್ಲಿಯೇ ಕಮ್ಮಟಗಳನ್ನು ಮಾಡುವ ಅನಿವಾರ್ಯತೆಯೂ ಸದ್ಯಕ್ಕಿದೆ. ಆ ನಿಟ್ಟಿನಲ್ಲಿ ಅರೆಹೊಳೆ ಪ್ರತಿಷ್ಠಾನವೂ ಕಾರ್ಯೋನ್ಮುಖವಾಗಲಿದೆ ಎಂದರು.

    ನಿವೃತ್ತ ಪ್ರಾಂಶುಪಾಲರು ಹಾಗೂ ಜಾನಪದ ವಿದ್ವಾಂಸರು ಆಗಿರುವ ಡಾ.ಗಣನಾಥ ಎಕ್ಕಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

    ಜನಪ್ರತಿನಿಧಿ ಪತ್ರಿಕೆಯ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಸಾಹಿತ್ಯ ಒಲವು ಹೆಚ್ಚಿಸುವ ನಿಟ್ಟಿನಲ್ಲಿ ನಡೆಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾಗರಾಜ ವಂಡ್ಸೆ ಸ್ವಾಗತಿಸಿದರು. ಸುಮನಾ ಪಡುಕೋಣೆ, ರೂಪೇಶ್ ಗಂಗೊಳ್ಳಿ, ಸುರಕ್ಷಾ ಉಡುಪ ಅತಿಥಿಗಳನ್ನು ಪರಿಚಯಿಸಿದರು. ಶ್ರೀರಾಜ್ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಸುಮನಾ ಪಡುಕೋಣೆ ವಂದಿಸಿದರು. ಕೃಷ್ಣ, ರಕ್ಷಿತ್ ಕೋಟೇಶ್ವರ, ಗಣೇಶ್ ಬಳ್ಕೂರು ಕಾರ್ಯಕ್ರಮಕ್ಕೆ ಸಹಕರಿಸಿದರು.

    ಕಥಾ ಕಮ್ಮಟದಲ್ಲಿ ಮೊದಲ ಭಾಗದಲ್ಲಿ ಡಾ.ಗಣನಾಥ್ ಎಕ್ಕಾರು ಅವರು ನಮ್ಮೊಡನೆ ಕಥೆಗಳು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು-‘ಕಥೆಯಲ್ಲಿ ಪಾತ್ರ ಸಂಯೋಜನೆ’, ಡಾ.ಪಾರ್ವತಿ ಜಿ.ಐತಾಳ್- ‘ಭಾಷಾಂತರ ಮತ್ತು ಕಥೆ’, ಡಾ.ರೇಖಾ ಬನ್ನಾಡಿ-‘ಚರ್ಚೆ, ಸಂವಹನ, ಪರಾಮರ್ಶನ’ ವಿಷಯದ ಕುರಿತು ವಿಷಯ ವಿಶ್ಲೇಷಣೆ ಮಾಡಿದರು.

    ಕಥಾ ಕಮ್ಮಟದಲ್ಲಿ ಉಡುಪಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

  • ಬೈಂದೂರು :ದಾದರ್-ತಿರುನೆಲ್ವೇಲಿ ರೈಲು ನಿಲುಗಡೆ ಅವಕಾಶ ರೈಲ್ವೆ ಸಚಿವರಿಗೆ ಸಂಸದ ಬಿವೈಆರ್ ಧನ್ಯವಾದ

    ಬೈಂದೂರು :ದಾದರ್-ತಿರುನೆಲ್ವೇಲಿ ರೈಲು ನಿಲುಗಡೆ ಅವಕಾಶ ರೈಲ್ವೆ ಸಚಿವರಿಗೆ ಸಂಸದ ಬಿವೈಆರ್ ಧನ್ಯವಾದ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ದಾದರ್-ತಿರುನೆಲ್ವೆಲಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 22629/22630 ರೈಲನ್ನು ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ಅವಕಾಶ ನೀಡಿದ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಧನ್ಯವಾದನ್ನು ಹೇಳಿದ್ದಾರೆ.

    ಮೂಕಾಂಬಿಕಾ ರಸ್ತೆ ಬೈಂದೂರು ರೈಲು ನಿಲ್ದಾಣವು ಕರಾವಳಿ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡು ರಾಜ್ಯದ ಭಕ್ತರು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ನೀಡುವುದರಿಂದ ಕೇರಳ ಹಾಗೂ ಮುಂಬೈಗೆ ಹೋಗುವ ಹೆಚ್ಚಿನ ರೈಲುಗಳಿಗೆ ಇಲ್ಲಿ ನಿಲುಗಡೆ ನೀಡಲಾಗುತ್ತಿದೆ.

    ಮೂಕಾಂಬಿಕಾ ರಸ್ತೆ ಬೈಂದೂರು ನಿಲ್ದಾಣದಲ್ಲಿ ದಾದರ್-ತಿರುನೆಲ್ವೆಲಿ ರೈಲು ನಿಲುಗಡೆಯಿಂದ ಬೈಂದೂರು ಕ್ಷೇತ್ರದ ಯಾತ್ರಾರ್ಥಿಗಳಿಗೆ ಮಧುರೈ ಮೀನಾಕ್ಷಿ, ಗುರುವಾಯೂರ್ ಮತ್ತು ಶಬರಿಮಲೈ ಅಯ್ಯಪ್ಪ ದೇವಸ್ಥಾನದಂತಹ ಇತರ ಯಾತ್ರಾ ಸ್ಥಳಗಳ ದರ್ಶನಕ್ಕೆ ಅನುಕೂಲವಾಗಲಿದೆ ಹಾಗೂ ಅಲ್ಲಿನ ಭಕ್ತಾದಿಗಳಿಗೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಬರಲು ಅನುಕೂಲವಾಗಲಿದೆ

  • ಬೈಂದೂರು :ಡಿಸಿ ಮನ್ನಾ ಭೂಮಿಗೆ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಡಿಸಿ ಎಸ್ಪಿ ಭೇಟಿ – ಸತ್ಯಾಗ್ರಹ ವಾಪಾಸ್

    ಬೈಂದೂರು :ಡಿಸಿ ಮನ್ನಾ ಭೂಮಿಗೆ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಡಿಸಿ ಎಸ್ಪಿ ಭೇಟಿ – ಸತ್ಯಾಗ್ರಹ ವಾಪಾಸ್

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಕಳೆದ ನಾಲ್ಕು ದಿನಗಳಿಂದ ದಲಿತ ಸಂಘಟನೆ ನಡೆಸುತ್ತಿದ್ದ ಡಿಸಿ ಮನ್ನಾ ಭೂಮಿಗಾಗಿ ಉಪವಾಸ ಸತ್ಯಾಗ್ರಹ ಗುರುವಾರ ಸಂಜೆ ಹಿಂಪಡೆದುಕೊಳ್ಳಲಾಗಿದೆ ಎಂದು ಸತ್ಯಾಗ್ರಹ ನಿರತ ದಲಿತ ಮುಖಂಡರು ತಿಳಿಸಿದ್ದಾರೆ

    ಗುರುವಾರ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಎಸ್ಪಿ ಅರುಣ್ ಕುಮಾರ್ ಸ್ಥಳಕ್ಕೆ ಭೇಟಿ ದಲಿತ ಮುಖಂಡರೊಡನೆ ಮಾತುಕತೆ ಮಾಡಿದ್ದು, ದಲಿತರ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸತ್ಯಾಗ್ರಹ ವಾಪಾಸ್ ಪಡೆಯಲಾಗಿದೆ ಎಂದು ದಲುತ ಮುಖಂಡರು ತಿಳಿಸಿದ್ದಾರೆ.

    ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಲಾಗಿದೆ. ಒಂದೊಮ್ಮೆ ಬೇಡಿಕೆಗಳು ಈಡೇರದೇ ಇದ್ದರೆ ಶಿರೂರಿನಿಂದ ಜಿಲ್ಲಾಧಿಕಾರಿಗಳ ಕಚೇರಿ ತನಕ ತಮಟೆ ಬಾರಿಸಿಕೊಂಡು ಮೆರವಣಿಗೆ ಮೂಲಕ ಹೋಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಸಂದರ್ಭ ದಲಿತ ಮುಖಂಡ ವಕೀಲ, ಮಂಜುನಾಥ ಗಿಳಿಯಾರ್, ರಾಘವೇಂದ್ರ ಶಿರೂರು, ರಮೇಶ್ ಶಿರೂರು, ಮಾಧವ, ಸುಬ್ರಹ್ಮಣ್ಯ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.

  • ಬೈಂದೂರು :ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ಥಾನಿ ನಾಗೂರು – ಸುವರ್ಣ ಸಂಭ್ರಮ 2024

    ಬೈಂದೂರು :ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ಥಾನಿ ನಾಗೂರು – ಸುವರ್ಣ ಸಂಭ್ರಮ 2024

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: 1 ಕೋಟಿ 20 ಲಕ್ಷ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುತ್ತಾರೆ. ಅಂತಹಾ ಅದ್ಭುತ ದೇವರುಗಳಸೇವೆ ಮಾಡುವ ಸೇವೆ ಮಾಡುವ ಭಾಗ್ಯ ನನಗೆ ಒದಗಿ ಬಂದಿದ್ದಕ್ಕೆ ಹೆಮ್ಮೆಯಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಟ್ಟರೆ ದೇಶಕ್ಕೆ ಉತ್ತಮ ಪ್ರಜೆಯನ್ನು ನೀಡಿದ ಹಾಗೇ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದರೆ ದೇವರು ನಮಗೆ ಉತ್ತಮವಾದ ವರ ನೀಡುತ್ತಾರೆ ಎಂದು ಭಾವಿಸುತ್ತೇನೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

    ಅವರು ಗುರುವಾರ ಬೈಂದೂರು ತಾಲೂಕಿನ ನಾಗೂರು ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಹಿಂದೂಸ್ಥಾನಿ ನಾಗೂರು ಇಲ್ಲಿನ ಸುವರ್ಣ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.

    ನಮ್ಮ ದೇಶದ ಸಂವಿಧಾನವೇ ನಮಗೆ ಧರ್ಮ ಗ್ರಂಥವಾಗಬೇಕು. ಹುಟ್ಟಿದ್ದು ಯಾವುದೇ ಜಾತಿ ಧರ್ಮವಿರಬಹುದು. ಆದರೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತಕ್ಕೆ ಇರುವುದು ಒಂದೇ ಧರ್ಮ ಗ್ರಂಥ. ಅದುವೇ ಮಾನವೀಯ ಮೌಲ್ಯಗಳನ್ನು ಸಾರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಬಿಟ್ಟುಹೋದ ಸಂವಿಧಾನ. ಅದರ ಆಧಾರದಡಿಯಲ್ಲಿ ನಾವೆಲ್ಲರೂ ದೇಶದ ಉತ್ತಮ ಪ್ರಜೆಗಳಾಗಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿದಾಗ ಮಾತ್ರ ಸಂವಿಧಾನದ ಸದಾಶಯ ಈಡೇರುತ್ತದೆ ಎಂದರು.

    ಇದೇ ಸಂದರ್ಭ 100 ಲಕ್ಷ ಮೌಲ್ಯದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು. ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಚಿವ ಮಧು ಬಂಗಾರಪ್ಪ ಅವರನ್ನೂ ಶಾಲು ಹೊದೆಸಿ ಸನ್ಮಾನಿಸಲಾಯಿತು. ಈ ಸಂದರ್ಭ ಐದು ಲಕ್ಷ ರೂಪಾಯಿಗಳ ಕುಟುಂಬ ಅಪಘಾತ ವಿಮಾ ಚೆಕ್ಕನ್ನು ಬಿಡುಗಡೆಗೊಳಿಸಲಾಯಿತು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೆಖರ್ ಖಾರ್ವಿ ದ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಸುಬ್ಬಣ್ಣ ಶೆಟ್ಟಿ ಪುರಮೆರವಣಿಗೆ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಡಿಡಿಪಿಐ ಗಣಪತಿ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಕೆ. ನಾಯ್ಕ್, ಜಿಲ್ಲಾ ಪಂಚಾಯತ್ ಮಾಜೀ ಅಧ್ಯಕ್ಷ ರಾಜು ಪುಜಾರಿ, ತಾ.ಪಂ ಮಾಜೀ ಸದಸ್ಯೆ ಶಾಮಲ ಕುಂದರ್ ಜಿ.ಪಂ.ಮಾಜೀ ಸದಸ್ಯೆ ಗೌರಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಪುರಮೆರವಣಿಗೆಯ ಬಳಿಕ ಸಚಿವ ಮಧು ಬಂಗಾರಪ್ಪ ಮಕ್ಕಳಿಗೆ ಸ್ವತಃ ಚಾಕಲೇಟ್ ನೀಡಿದರು.

  • ಕೋಟ :ಕೃಷಿ ಮಾಡುವ ಇಚ್ಛಾಶಕ್ತಿ ಶ್ರೇಷ್ಠವಾದದ್ದು – ಕಾರ್ಕಡ ರಾಜು ಪೂಜಾರಿ

    ಕೋಟ :ಕೃಷಿ ಮಾಡುವ ಇಚ್ಛಾಶಕ್ತಿ ಶ್ರೇಷ್ಠವಾದದ್ದು – ಕಾರ್ಕಡ ರಾಜು ಪೂಜಾರಿ

    ಪಂಚವರ್ಣ ಸಂಸ್ಥೆಯ ರೈತರೆಡೆಗೆ ನಮ್ಮನಡಿಗೆ 33ನೇ ಮಾಲಿಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕೃಷಿ ಮಾಡುವ ಇಚ್ಛಾಶಕ್ತಿ ಶ್ರೇಷ್ಠತೆ ಹೊಂದುತ್ತದೆ ಅಂತಹ ಕೃಷಿಕರಿಗೆ ಸ್ವತಃ ಭೂಮಿ ಬೇಕಾಗಿಲ್ಲ ಗೇಣಿ ಭೂಮಿಯ ಮೂಲಕವು ಕೃಷಿ ಕಾಯಕ ಮಾಡುತ್ತಾರೆ ಎಂದು ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯ ರಾಜು ಪೂಜಾರಿ ಕಾರ್ಕಡ ನುಡಿದರು.

    ಕೋಟ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 33ನೇ ಮಾಲಿಕೆ ಕಾರ್ಯಕ್ರಮ ಸಾಲಿಗ್ರಾಮದ ಕಾರ್ಕಡ ಉಮೇಶ್ ಪೂಜಾರಿ ಇವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಉಮೇಶ್ ಪೂಜಾರಿ ಎನ್ನುವ ಯುವ ಕೃಷಿಕ ಇತರರಿಗೆ ಮಾದರಿದಾಯಕರಾಗಿ ಕೃಷಿ ಕ್ಷೇತ್ರದಲ್ಲಿ ತನ್ನದೆ ಆದ ಸಾಧನೆ ಮಾಡುತ್ತಿದ್ದಾರೆ.

    ಕರಾವಳಿ ಭಾಗದಲ್ಲಿ ತುಂಡು ಕೃಷಿ ಭೂಮಿ ಹೆಚ್ಚಾಗಿದ್ದು ಅದರಲ್ಲಿ ಕೃಷಿ ಕಾಯಕ ಕ್ಲಿಷ್ಟಕರ ಎಂದರಲ್ಲದೆ ಕೃಷಿ ಅವಲಂಬಿತ ಈ ಭಾರತದಲ್ಲಿ ಸಾವಯವ ಕೃಷಿ ಪದ್ಧತಿ ಅನಿವಾರ್ಯ ಹಾಗೂ ಅನುಷ್ಠಾನಕ್ಕೆ ಸರಕಾರ ಕಾರ್ಯಕ್ರಮ ರೂಪಿಸಲಿ ಅದರ ಜತೆಗೆ ಕೃಷಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಿ ಎಂದು ಪಂಚವರ್ಣ ಸಂಸ್ಥೆ ಈ ಕಾರ್ಯಕ್ರಮರೈತರಿಗೆ ಪ್ರೋತ್ಸಾಕರವಾಗಿದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

    ಈ ವೇಳೆ ಯುವ ಕೃಷಿಕ ಉಮೇಶ್ ಪೂಜಾರಿ ಪತ್ನಿ ಪೂರ್ಣಿಮಾ ಇವರುಗಳಿಗೆ ಕೃಷಿ ಪರಿಕರವನ್ನಿತ್ತು ಗೌರವಿಸಲಾಯಿತು.
    ಅಲ್ಲದೆ ವಿಶೇಷವಾಗಿ ರಕ್ತಚಂದನ ಗಿಡ ನೆಟ್ಟು ರೈತರೆಡೆಗೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲಾಯಿತು.

    ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ ರೈತರಿಗೆ ಕೃಷಿ ಮಾಹಿತಿ ಸಮಗ್ರ ಕೃಷಿ ನೀತಿಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮದ ಸಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ನ್ಯೂ ಕಾರ್ಕಡ ಶಾಲೆಯ ಶಿಕ್ಷಕ ಸತ್ಯನಾರಾಯಣ, ಕಾರ್ಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ, ಐರೋಡಿ ಪರಿಸರದ ಹಿರಿಯ ಕೃಷಿಕ ಸಂಜೀವ ಪೂಜಾರಿ, ಗೆಳೆಯರ ಬಳಗ ಕಾರ್ಕಡ ಕಾರ್ಯದರ್ಶಿ ಶೀನ.ಕೆ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಚಿತ್ರಪಾಡಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ರಮೇಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

    ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರೆ,ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

  • ತಲ್ಲೂರು: ಬೃಹತ್ ಉದ್ಯಮದಿಂದ ಮನೆಗಳಿಗೆ ತೊಂದರೆ ಆರೋಪ – ಮನವಿ

    ತಲ್ಲೂರು: ಬೃಹತ್ ಉದ್ಯಮದಿಂದ ಮನೆಗಳಿಗೆ ತೊಂದರೆ ಆರೋಪ – ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅಡುಗೆ ಮಸಾಲಾ ಉತ್ಪನ್ನಗಳನ್ನು ತಯಾರಿಸುವ ಉದ್ಯಮದಿಂದ ಸುತ್ತಮುತ್ತಲಿನ ಸುಮಾರು 40 ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಅರೋಪಿಸಿದ ಪ್ರತಿಭಟನಾಕಾರರು ತಲ್ಲೂರು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ಸಲ್ಲಿಸಿದರು.

    ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಶಿವಾನಂದ ಶೆಟ್ಟಿ, ಉದ್ಯಮದಿಂದ ಬದುಕುವುದೇ ಕಷ್ಟ ಎಂದು ಅಳಲು ತೋಡಿಕೊಂಡರು.

    ಈ ಸಂದರ್ಭ ಸ್ಥಳೀಯರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

  • ಶ್ರೀ ವಿನಾಯಕ ಯುವಕ ಸಂಘದ 25ನೇ ವರ್ಷದ ರಜತ ಮಹೋತ್ಸವ – ಅದ್ದೂರಿಯಾಗಿ ಸಂಪನ್ನಗೊಂಡ ನೆಂಪು ಉತ್ಸವ

    ಶ್ರೀ ವಿನಾಯಕ ಯುವಕ ಸಂಘದ 25ನೇ ವರ್ಷದ ರಜತ ಮಹೋತ್ಸವ – ಅದ್ದೂರಿಯಾಗಿ ಸಂಪನ್ನಗೊಂಡ ನೆಂಪು ಉತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶ್ರೀ ವಿನಾಯಕ ಯುವಕ ಸಂಘ ರಿ. ನೆಂಪು ಇದರ ರಜತ ಮಹೋತ್ಸವದ ಪ್ರಯುಕ್ತ ಫೆ.24 ರಂದು ನೆಂಪು ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ನೆಂಪು ಉತ್ಸವವನ್ನು ಉದ್ಘಾಟಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಬಿ.ವೈ ರಾಘವೇಂದ್ರರವರು ದೇವಭಕ್ತಿ ಮತ್ತು ದೇಶಭಕ್ತಿ ಇಂದಿನ ಯುವಕರ ಆದ್ಯತೆ ಆಗಬೇಕು. ಪರರ ನೋವಿಗೆ ಸ್ಪಂದಿಸುವ ಮತ್ತು ಸಾಧನೆಯನ್ನು ಪ್ರೋತ್ಸಾಹಿಸುವ ಗೌರವಿಸುವ ಯುವಕರು ದೇಶದ ಆಸ್ತಿ. ಯುವಕರು ದೇಶಭಕ್ತಿಯನ್ನು ರೂಢಿಸಿ ಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಂಪು ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಅರುಣ್ ಮೊಗವೀರ ನೆಂಪು ವಹಿಸಿದ್ದರು.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ರಜತ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಕೃಷ್ಣಮೂರ್ತಿ ಮಂಜರು, ನಾನು ಓದಿದ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವಾಗ ಪಟ್ಟ ಸಂತೋಷಕ್ಕಿಂತ ಹೆಚ್ಚು. 35 ವರ್ಷಗಳ ಹಿಂದೆ ದಾನ ಪ್ರಕ್ರಿಯೆ ಆರಂಭಿಸಿದ್ದು ನೆಂಪುವಿನಿಂದಲೆ. ಆಗ ನೆಂಪು ದೇವಸ್ಥಾನಕ್ಕೆ 1001 ದೇಣಿಗೆ ನೀಡಿದ್ದೆ ಎಂದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ದುಡಿದು ಬದುಕಲು ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಡಿ ಎಂದರು.

    ಈ ಸಂದರ್ಭದಲ್ಲಿ ಉದ್ಯಮಿ ಸೀತಾರಾಮ್ ಶೆಟ್ಟಿ ನೆಂಪು, ಶ್ರೀನಿವಾಸ್‌ ಮೆಂಡನ್ ಬಳ್ಳಿಹಿತ್ತಲು, ಶಿವರಾಮ್ ಮಂಗಲಸನಕಟ್ಟೆ ಇವರಿಗೆ ಹುಟ್ಟೂರ ಸನ್ಮಾನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವೈದ್ಯರಾದ ಡಾ. ರಾಮಮೂರ್ತಿ ಭಟ್, ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ವೆಂಕಟರಾಮ್ ಭಟ್, ಕಾಮನ್‌ವೇಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತರಾದ ಗುರುರಾಜ್ ಪೂಜಾರಿ ಜಡ್ಡು ವಂಡ್ರೆ, ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ನವೀನ್ ಕಾಂಚನ್, ಭಾರತೀಯ ಸೇನೆಗೆ ಸೇರ್ಪಡೆಗೊಂಡ ಅಭಿಜಿತ್ ಮೊಗವೀರ ಬಗ್ವಾಡಿ, ರಕ್ತದಾನಿ ಹಾಗೂ ಕೊರೋನಾ ಫ್ರಂಟ್‌ಲೈನ್ ವಾರಿಯರ್ ರಾಘವೇಂದ್ರ ನೆಂಪು, ಆಶಾ ಕಾರ್ಯಕರ್ತೆ ಚಂದ್ರಾವತಿ, ರಾಷ್ಟ್ರಮಟ್ಟದ ಕರಾಟೆ ಪಟು ಶ್ರೀಶ ಗುಡ್ರಿ, ಪ್ರವೀಣ್ ನೆಂಪು, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆ ಶರಣ್ಯ ನೆಂಪು ಇವರನ್ನು ಸನ್ಮಾನಿಸಲಾಯಿತು.

    ಸಹಾಯಹಸ್ತ ಕಾರ್ಯಕ್ರಮದ ಅಂಗವಾಗಿ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು ನೀಡಲಾಯಿತು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ, ಉದ್ಯಮಿಗಳಾದ ಬಿ.ಎನ್ ಶೆಟ್ಟಿ ಬಗ್ವಾಡಿ ಮೆತ್ತಿನಮನೆ, ಗೋವಿಂದ ಬಾಬು ಪೂಜಾರಿ, ಕೃಷ್ಣಪ್ರಸಾದ್ ಅಡ್ಯಂತಾಯ, ರಾಜು ಮೆಂಡನ್ ಬಳ್ಳಿಹಿತ್ಲು, ಭಾಸ್ಕರ್ ಮಂಡನ್ ಬಳ್ಳಿಹಿತ್ಲು, ಪ್ರವೀಣ್ ಕುಮಾ‌ರ್ ಶೆಟ್ಟಿ ಉಳ್ಳೂರು, ಸಂತೋಷ್ ಕುಮಾರ್ ಶೆಟ್ಟಿ, ಗೋಪಾಲ್ ನಾಯ್ಕ ಶಾರಾಳ, ದೀಪಕ್ ಕುಮಾರ್ ಶೆಟ್ಟಿ ಬೈಂದೂರು, ಸದಾನಂದ ಉಪ್ಪಿನಕುದ್ರು, ಕರ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿಜ್ರಿ ರಾಜೀವ್ ಶೆಟ್ಟಿ, ರಾಜೀವ್ ನಾಯ್ಕ, ಚಂದ್ರಶೇಖ‌ರ್ ಮೊದಲಾದವರು ಉಪಸ್ಥಿತರಿದ್ದರು.

    ಶ್ರೀ ವಿನಾಯಕ ಯುವಕ ಸಂಘದ ಕಾರ್ಯದರ್ಶಿ ಶಶಿಧ‌ರ್ ಶೆಟ್ಟಿ ಸ್ವಾಗತಿಸಿದರು. ಮಂಜುನಾಥ್ ಚಂದನ್ ನೆಂಪು ವಂದಿಸಿದರು. ನೇರಳಕಟ್ಟೆ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದಾಮೋದರ್ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.

    ಉತ್ಸವದ ಅಂಗವಾಗಿ ನೆಂಪು ಶ್ರೀ ಗಣಪತಿ ದೇವರಿಗೆ ಮಹಾ ರಂಗಪೂಜೆ ಸೇವೆ ಸಲ್ಲಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಂಕು-ಬಡಗು ಸ್ಪರ್ಧಾತ್ಮಕ ಗಾನ ವೈಭವ ಯಕ್ಷ ಕಂಪು ಪ್ರಖ್ಯಾತ ಕಲಾವಿದರಿಂದ ನೆರವೇರಿತು. ಝೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ಸಮೃದ್ಧಿ ಕುಂದಾಪುರ, ರಾಷ್ಟ್ರಮಟ್ಟದ ನೃತ್ಯ ಕಲಾವಿದರು ಕುಮಾರಿ ಸಿಂಚನ ನೆಂಪು ಕುಮಾರಿ ಪ್ರಾರ್ಥನಾ ನೆಂಪು ಅವರಿಂದ ಭರತನಾಟ್ಯ ಜುಗಲ್ ಬಂಧಿ, ಶ್ರೇಷ್ಠ ದೇವಾಡಿಗ ಅವರಿಂದ ಭರತನಾಟ್ಯ, ಪ್ರಸಿದ್ಧ ಸಿನಿ ಗಾಯಕರ ಸಂಗೀತೋತ್ಸವ ಎಕ್ಷ್ಮೀಮ್ ಡ್ಯಾನ್ಸ್ ಅಕಾಡೆಮಿ ಉಡುಪಿ ಇವರಿಂದ ನೃತ್ಯೋತ್ಸವ ಮತ್ತು ಕಲಾಚಿಗುರು ತಂಡ ಹಳ್ಳಾಡಿ ಇವರಿಂದ ಹೆಂಗಸ್ರ ಪಂಚೈತಿ ನೆರವೇರಿತು.

  • ತಲ್ಲೂರು: ಮಾತೃವಂದನಾ ಮೂಲಕ ಮಾದರಿಯಾದ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ

    ತಲ್ಲೂರು: ಮಾತೃವಂದನಾ ಮೂಲಕ ಮಾದರಿಯಾದ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರ ತಾಲೂಕಿನ ತಲ್ಲೂರು ಸರ್ಕಾರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃವಂದನಾ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಾಯಂದಿರ ಪಾದ ತೊಳೆದು, ತಾಯಿಯ ಪಾದಗಳಿಗೆ ಅರಿಶಿಣ ಕುಂಕುಮ ಹಚ್ಚಿ ದೀಪ ಬೆಳಗಿ ಪಾದ ಪೂಜೆ ನಡೆಸಲಾಯಿತು.

    ಕಾರ್ಯಕ್ರಮದ ಪ್ರದಾನ ಭಾಷಣಕಾರರಾದ ದಾಮೋದರ ಶರ್ಮ ಮಾತನಾಡುತ್ತಾ, ತಾಯಿಯಾದವರಿಗೆ ಮಹತ್ತರವಾದ ಜವಾಬ್ಧಾರಿಯಿದೆ. ತಾಯಿ ತಂದೆಗಳ ನಡೆಯೇ ಮಕ್ಕಳ ಬೆಳವಣಿಗೆಯ ಹಾದಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಪೋಷಕರು ಮಾದರಿಯಾಗಬೇಕು ಎಂದು ಹೇಳಿದರು. ಮಕ್ಕಳನ್ನು ಬೇರೆಯವರ ಜೊತೆ ಹೋಲಿಸಬೇಡಿ ಎಂದ ಅವರು, ಬದುಕನ್ನು ನಿರ್ಭಿಡೆಯಿಂದ ಬದುಕುವ ಸವಾಲನ್ನು ಎದುರಿಸುವ ಸ್ಥೈರ್ಯವನ್ನು ಮಕ್ಕಳಲ್ಲಿ ಹೆಚ್ಚಿಸುವುದೇ ಪೋಷಕರ ಜವಾಬ್ಧಾರಿ ಎಂದರು.

    ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕರ ವತಿಯಿಂದ ಮಾತೃವಂದನಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯ್ಕ್ ಅಧ್ಯಕ್ಷತೆ, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಉದಯಕುಮಾರ್ ತಲ್ಲೂರು, ಶಾಲಾ ಮುಖ್ಯೋಪಾದ್ಯಾಯಿನಿ ಪಾರ್ವತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಕೀಲ ಟಿ.ಬಿ.ಶೆಟ್ಟಿ, ತಲ್ಲೂರು ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.