Category: ಸುದ್ದಿ

  • ಕೋಟದಲ್ಲಿ ಮೇಳೈಸಿದ ನವನವೀನ ಗೋ ಕರುಗಳ ತಳಿಗಳ ಪ್ರದರ್ಶನ,ಸ್ಪರ್ಧೆ, ರಾಸುಗಳ ಹಾಲಿಂಡುವ ಸ್ಫರ್ಧೆ

    ಕೋಟದಲ್ಲಿ ಮೇಳೈಸಿದ ನವನವೀನ ಗೋ ಕರುಗಳ ತಳಿಗಳ ಪ್ರದರ್ಶನ,ಸ್ಪರ್ಧೆ, ರಾಸುಗಳ ಹಾಲಿಂಡುವ ಸ್ಫರ್ಧೆ

    ಆನಂದ್ ಸಿ ಕುಂದರ್ ರವರ ಹುಟ್ಟು ಹಬ್ಬದ ಅಮೃತಮಹೋತ್ಸವದ ಸಂಭ್ರಮದ ಅಮೃತ ಗೌರವ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಹೈನುಗಾರಿಕೆ, ಕೃಷಿ ಆರೋಗ್ಯಕರ ಜೀವನ ಹಿಂದೆ ಕೃಷಿ ಮತ್ತು ಹೈನುಗಾರಿಕೆಯಿಂದ ಜೀವನ ನಡೆಸುತ್ತಾ ಬಂದಿದ್ದು, ಇಂದು ಯುವ ಸಮುದಾಯದಲ್ಲಿ ಆಸಕ್ತಿ ಕಡಿಮೆಯಾಗಿರುವುದು ವಿಷಾದದ ಸಂಗತಿ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.

    ಮಂಗಳವಾರ ಕೋಟದ ಶಾಂಭವೀ ಶಾಲಾ ಮೈದಾನದಲ್ಲಿ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಡುಪಿ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ,ಗೀತಾನಂದ ಫೌಂಡೇಶನ್ ಮಣೂರು, ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲ ಕೋಟ, ಕೋಟ ವಲಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹೋಬಳಿ ಮಟ್ಟದ ಕರುಗಳ ಪ್ರದರ್ಶನ, ಸ್ಪರ್ಧೆ, ರಾಸುಗಳ ಹಾಲು ಹಿಂಡುವ ಸ್ಪರ್ಧೆ ಹಾಗೂ ಹೈನುಗಾರಿಕಾ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
    ಪೋಷಕರು ಕೇವಲ ವಿದ್ಯಾಭ್ಯಾಸ ಅಂಕಗಳನ್ನು ಗಳಿಸಿ ಎಂದು ತಮ್ಮ ಮಕ್ಕಳಿಗೆ ತಿಳುವಳಿಕೆಯನ್ನು ನೀಡುವುದರೊಂದಿಗೆ ಉತ್ತಮ ಸಂಸ್ಕಾರವನ್ನೂ ನೀಡುವಂತಾಗಬೇಕು. ಹೈನುಗಾರಿಕೆ ಮತ್ತು ಕೃಷಿ ಯಲ್ಲಿ ನಾವೇಕೆ ಹಿಂದೆ ಬಿದ್ದಿದ್ದೇವೆ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾದ ಅಗತ್ಯತೆ ಇದೆ. ಕೃಷಿಯಿಂದ ಆರೋಗ್ಯಕರ ಜೀವನಸಾಧ್ಯ ಎಂದ ಅವರು ಮುಂದಿನ ದಿನಗಳಲ್ಲಿ ಸರ್ಕಾರದ ಸವಲತ್ತುಗಳನ್ನು ತೆಗೆದುಕೊಂಡು ಹೈನುಗಾರಿಕೆ ಯನ್ನು ಮುಂದುವರಿಸಿಕೊಂಡು ಹೋಗುವಂತಾಗಬೇಕು ಎಂದು ಕರೆ ನೀಡಿದರು.

    ಈ ವೇಳೆ ಆನಂದ್ ಸಿ ಕುಂದರ್ ದಂಪತಿಗಳಿಗೆ ಅಮೃತ ಮಹೋತ್ಸವದ ಅಮೃತ ಗೌರವ ನೀಡಿ ಗೌರವಿಸಲಾಯಿತು.

    ಇದೇ ವೇಳೆ ಹಿರಿಯ ಪಶುವೈದ್ಯಾಧಿಕಾರಿ ಸರ್ವೋತ್ತಮ ಉಡುಪ, ಡಾ.ಎಸ್ ಮೋಹನ್ ರೆಡ್ಡಿ,ಡಾ.ಅರುಣ್ ಕುಮಾರ್ ಶೆಟ್ಟಿ, ಅಭಿನಂದಿಸಲಾಯಿತು.

    ಕಾರ್ಯಕ್ರಮ ಪ್ರಾರಂಭದಲ್ಲಿ ಗೋ ಕರುಗಳಿಗೆ ಗೋ ಪೂಜೆಯನ್ನು ಆನಂದ್ ಸಿ ಕುಂದರ್ ದಂಪತಿಗಳು ನೆರವೆರಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋ ಕರುಗಳ ಪ್ರದರ್ಶನ ಸಮಿತಿ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ಬೆಂಗಳೂರು ಇದರ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಪಶುಪಾಲನಾ ಇಲಾಖೆ ಉಡುಪಿ ಉಪನಿರ್ದೇಶಕ ಎಮ್ ಸಿ ರೇವಪ್ಪ, ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ನಿರ್ದೇಶಕ ಕಮಲಾಕ್ಷ ಹೆಬ್ಬಾರ್, ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಉಡುಪಿಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ ಎಸ್, ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ.ಅನಂತಪದ್ಮನಾಭ ಐತಾಳ್,ಹಿರಿಯ ಕೃಷಿಕ ರಘು ಮಧ್ಯಸ್ಥ ಪಾರಂಪಳ್ಳಿ,ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ, ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರೆ, ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರ್ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕೋಟ ಸಹಕಾರ ವ್ಯವಸಾಯಕ ಸಂಘ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.ಸನ್ಮಾನ ಪತ್ರವನ್ನು ಕೋಟ ಚಂದ್ರ ಆಚಾರ್ ವಾಚಿಸಿದರು,ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಹಕರಿಸಿದರು.ಬಹುಮಾನ ಪತ್ರವನ್ನು ಕೋಟ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ವಾಚಿಸಿದರು.

    ಕರುಗಳ ನೊಂದಣಿ ಕಾರ್ಯದ ಉದ್ಘಾಟನೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಉದ್ಘಾಟಿಸಿದರು.
    ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಾನಕಿ ಹಂದೆ,ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ಟಿ.ಮಂಜುನಾಥ ಗಿಳಿಯಾರ್,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ ಪಿ ಎಸ್,ಪಶು ಇಲಾಖೆ ಬ್ರಹ್ಮಾವರ ಇದರ ಮುಖ್ಯ ವೈದ್ಯಾಧಿಕಾರಿ ಡಾ.ಪ್ರದೀಪ್ ಕುಮಾರ್,ಕೋಟ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ ಅನಿಲ್ ಕುಮಾರ್,ಸಂತೆಕಟ್ಟೆ ಪಶು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಮಂಜುನಾಥ್ ಅಡಿಗ,ಉಡುಪಿ ಜಿಲಾ ಸಹಕಾರಿ ಯೂನಿಯನ್ ನಿರ್ದೇಶಕ ಕೊರಗ ಪೂಜಾರಿ ಉಪಸ್ಥಿತರಿದ್ದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ
    ಆನಂದ್ ಸಿ ಕುಂದರ್ ಕೃಷಿ ಹೈನುಗಾರಿಕೆ ಯಲ್ಲಿ ಆಲಸ್ಯ ಒಳ್ಳೆಯದಲ್ಲ. ಹೈನುಗಾರಿಕೆ ಲಾಭದಾಯಕ ವಾಗಬೇಕು. ಇದಕ್ಕೆ ಸರ್ಕಾದ ಸಹಭಾಗಿತ್ವ ಅತೀ ಅಗತ್ಯ. ವ್ಯವಸ್ಥೆ ಬೆಳೆಯಲು ಎಲ್ಲರೂ ಒಗ್ಗಟ್ಟಾಗಬೇಕುಗೋ ಸಂಪತ್ತು ಉಳಿಯಲು ಮತ್ತು ಮನುಸಂಕುಲನ ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ಸಹಕಾರಿ, ಕೃಷಿ ಪ್ರದೇಶದಲ್ಲಿ ಮೇವು ಹೇಗೆ ಬೆಳೆಸಬೇಕು, ಅದರ ಸಂಸ್ಕರಣೆ ಮತ್ತು ಬಳಕೆ ಹೇಗೆ ಮಾಡಬಹುದು ಎನ್ನುವ ಬಗ್ಗೆ ಯೋಚಿಸಿದಲ್ಲಿ ಹೈನುಗಾರಿಕೆ ಮತ್ತು ಕೃಷಿ ಲಾಭದಾಯಕವಾಗಬಲ್ಲದು ಎಂಬುದನ್ನು ತಿಳಿಸಿದರು.

    ಪ್ರದರ್ಶನದ ಭಾಗಿಯಾದ ಕರುಗಳು
    ಇದೇ ಮೊದಲ ಬಾರಿ ಗ್ರಾಮೀಣ ಭಾಗವಾದ ಕೋಟದಲ್ಲಿ ಕರುಗಳ ಪ್ರದರ್ಶನದಲ್ಲಿ ದೇಸಿ ಹಾಗೂ ಎಚ್ ಎಫ್ ಸೇರಿದಂತೆ ವಿವಿಧ ಜಾತಿಯ ತಳಿಗಳು ಸುಮಾರು 170ಕ್ಕೂ ಅಧಿಕ ಗೋ ಕರುಗಳ ಹೈನುಗಾರರ ಮೂಲಕ ಪ್ರದರ್ಶನದಲ್ಲಿ ಭಾಗಿಯಾದವು.

    ಶಾಲಾ ವಿಧ್ಯಾರ್ಥಿಗಳ ವೀಕ್ಷಣೆ
    ಪ್ರದರ್ಶನದಲ್ಲಿ ಸ್ಥಳೀಯ ಕೋಟ ಶಿವರಾಮ ಕಾರಂತರು ಕಲಿತ ಕೋಟ ಶಾಲೆ, ಗಿಳಿಯಾರು ಶಾಂಭವೀ ಶಾಲಾ ವಿದ್ಯಾರ್ಥಿಗಳು
    ಗೋ ಕರುಗಳ ಮಾಹಿತಿಯನ್ನು ಪಡೆದು ಸಾಲು ಸಾಲಾಗಿ ವಿಕ್ಷೀಸಿದರು.

  • ಕುಂದಾಪುರ :ಜನರ ಧ್ವನಿಯಾಗಿ ಮಾಧ್ಯಮಗಳು ಮಹತ್ತರ ಪಾತ್ರವಹಿಸುತ್ತವೆ – ಡಾ. ಹೆಚ್.ಎಸ್.ಶೆಟ್ಟಿ

    ಕುಂದಾಪುರ :ಜನರ ಧ್ವನಿಯಾಗಿ ಮಾಧ್ಯಮಗಳು ಮಹತ್ತರ ಪಾತ್ರವಹಿಸುತ್ತವೆ – ಡಾ. ಹೆಚ್.ಎಸ್.ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ದೇಶದ ಎಲ್ಲಾ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಮುನ್ನೆಡೆಸುವ ಕಾರ್ಯನಿರ್ವಹಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮಕ್ಷೇತ್ರದಲ್ಲಿ ಒಂದು ಹೊಸಹೊಸ ಬದಲಾವಣೆಗಳು ಆಗಿವೆ. ಜನರ ಧ್ವನಿಯಾಗಿ ಮಾದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉದ್ಯಮಿ ಡಾ.ಎಚ್.ಎಸ್ ಶೆಟ್ಟಿ ಅಭಿಪ್ರಾಯಪಟ್ಟರು.

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್‍ನ ಸುಮುಖಾ ಮಿನಿ ಹಾಲ್‍ನಲ್ಲಿ ನಡೆದ ಬೆಳಗಾವಿ ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟ್ ಗೌರವ ಪಡೆದಿರುವ ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ಪತ್ರಿಕಾ ಮಾಧ್ಯಮ ಕ್ಷೇತ್ರದಕ್ಕೆ ಹೊಸ ತಾಂತ್ರಿಕತೆ, ಡಿಜಿಟಲ್ ಮಾಧ್ಯಮಗಳ ಪ್ರವೇಶವಾಗಿದೆ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಿ ಅದನ್ನು ಅಳವಡಿಸಿಕೊಂಡು ಮುನ್ನೆಡೆಯುವ ಸಂದಿಗ್ದತೆಯೂ ಪ್ರಸ್ತುತ ಇದೆ. ಓದುವ ಆಸಕ್ತಿ ಯುವಜನಾಂಗದಲ್ಲಿ ಬೆಳೆಯಬೇಕು ಎಂದರು.

    ದೇಶದಲ್ಲಿ ಇಂದು ಮಾಧ್ಯಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

    ನಂತರ ನಡೆದ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಭಾಗದಲ್ಲಿ ಉದ್ಯಮ ಆರಂಭಿಸಲು ಪರಿಸ್ಥಿತಿ ಪ್ರತಿಕೂಲವಾಗಿದೆ. ಉದ್ಯಮಗಳನ್ನು ಆರಂಭಿಸಲು ಸರಿಯಾದ ಪೂರಕವಾದ ವಾತಾವರಣಗಳು ಇರಬೇಕಾಗುತ್ತದೆ. ನನಗೂ ಕೂಡಾ ಹುಟ್ಟೂರಿನ ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಚಿಂತನೆ ಇದೆ ಎಂದರು.

    ನಾನು ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ಅಪೇಕ್ಷೆಯಿಂದ ನಾನು ಸೇವೆ ಮಾಡುತ್ತಿಲ್ಲ. ರಾಜಕೀಯ ಇಲ್ಲದೇ ಜನಸೇವೆ ಮಾಡಲು ಸಾಧ್ಯವಿದೆ. ರಾಜಕೀಯ ಅನಿವಾರ್ಯವೂ ಅಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.
    ಕೋವಿಡ್ ಬಳಿಕ ಸಣ್ಣ ವ್ಯವಹಾರಗಳಿಗೆ ತೊಂದರೆಯಾಗಿದೆ. ದೊಡ್ಡ ಉದ್ಯಮಗಳಿಗೆ ಅಂತಹ ಸಮಸ್ಯೆಯಾಗಲಿಲ್ಲ. ಈಗ ಎಲ್ಲವೂ ಸರಿಯಾಗಿದೆ ಎಂದರು.

    ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಬೇಕು. ಸರ್ಕಾರಿ ಶಾಲೆಗಳು ಬಲಹೊಂದಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರಕುವಂತಾಗಬೇಕು. ನಾನು ಬಡತನವನ್ನು ಸ್ವತಃ ಅನುಭವಿಸಿದವ. ಭಂಡಾರ್ಕಾಸ್ ಕಾಲೇಜಿನಲ್ಲಿ ನಾನು ಓದಿದವ. ಮುಂದೆ ದಾರಿಗಳು ನನ್ನ ಮುಂದೆ ಇದ್ದವು. ಪತ್ರಿಕೆಯೊಂದಲ್ಲಿ ಕೆಲಸ ಸಿಕ್ಕಿತು. ನನ್ನ ಮುಂದೊಂದು ಗುರಿ ಇತ್ತು. ಅದಕ್ಕಾಗಿ ಕೆಲಸ ಬಿಟ್ಟು ಗುರಿಯತ್ತ ಮುನ್ನೆಡೆದೆ. ನಿರಂತರ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿದೆ ಎಂದರು.

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಾ.ಎಚ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ಸ್ವಾಗತಿಸಿದರು. ರಾಘವೇಂದ್ರ ಪೈ ಸನ್ಮಾನ ಪತ್ರ ವಾಚಿಸಿದರು. ಸತೀಶ್ ಆಚಾರ್ ಉಳ್ಳೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶ್ರೀಕರ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು

  • ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೆ .ಪ್ರಭಾಕರ ಮೆಂಡನ್ ಅವಿರೋಧ ಆಯ್ಕೆ

    ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಕೆ .ಪ್ರಭಾಕರ ಮೆಂಡನ್ ಅವಿರೋಧ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: : ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಂಘ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ನಿರ್ದೇಶಕ ಮಂಡಳಿಗೆ ಆಯ್ಕೆ ಪ್ರಕ್ರಿಯೆ ಇತ್ತೀಚಿಗೆ ನಡೆಯಿತು.

    ಅಧ್ಯಕ್ಷರಾಗಿ ಕೆ. ಪ್ರಭಾಕರ ಮೆಂಡನ್, ಉಪಾಧ್ಯಕ್ಷರಾಗಿ ಸುಮತಿ ಪಿ, ನಿರ್ದೇಶಕರುಗಳಾಗಿ ರಘುರಾಮ ಮೆಂಡನ್ ,ಸದಾಶಿವ ಐತಾಳ್, ಹರ್ಷ ಕೆ. ,ಕೆ.ಲಕ್ಷ್ಮೀ ಮರಕಾಲ್ತಿ , ಕೆ. ವಿಶ್ವನಾಥ ಪೂಜಾರಿ , ನಾಗೇಂದ್ರ ನಾವಡ, ಪಾರ್ವತಿ ಕೋಟ್ಯಾನ್, ವನಜಾ, ನೇತ್ರಾವತಿ, ಕಾವೇರಿ ಅವಿರೋಧವಾಗಿ ಆಯ್ಕೆಯಾದರು.

  • ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ – ಹಸಿರು ಹೊರೆಕಾಣಿಕೆ ಮೆರವಣಿಗೆ

    ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ – ಹಸಿರು ಹೊರೆಕಾಣಿಕೆ ಮೆರವಣಿಗೆ

    ಕುಂದಾಪುರ ಮಿರರ್ ಸುದ್ದಿ…

    ಬ್ರಹ್ಮಾವರ : ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇವಸ್ಥಾನದ ಲೋಕಾರ್ಪಣೆಗೆ ಅಂಗವಾಗಿ ಫೆಬ್ರವರಿ 13 ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಬುಧವಾರ ಬಿಂಬ ಪ್ರತಿಷ್ಠಾಪನೆ ಗೊಳ್ಳಲಿರುವ ಅಂಗವಾಗಿ ಭಾನುವಾರ ಹಸಿರುಹೊರೆಕಾಣಿಕೆ ಮೆರವಣಿಗೆ ಜರುಗಿತು.

    ಮುದ್ದೂರು ಬಸ್ ನಿಲ್ದಾಣದಬಳಿಯಲ್ಲಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಪರಮಪೂಜ್ಯ ಶ್ರೀಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಯವರು ಹೊರೆ ಕಾಣಕೆ ಮೆರವಣಿಗೆಗೆ ಚಾಲನೆ ನೀಡಿದರು.

    ನಾನಾ ಭಾಗದಿಂದ ಬಂದ ಹೊರೆಕಾಣಿಕೆ ಮೆರವಣಿಗೆ ಕಜ್ಕೆ ಶಾಖಾ ಮಠದ ಬಳಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಾಗಿ ಬಂತು . ನಾನಾ ಭಜನಾ ತಂಡದಿಂದ ಭಜನೆ ಮಹಿಳೆಯರ ಪೂರ್ಣಕುಂಭ ಸ್ವಾಗತ ಮೆರವಣಿಗೆಯ ಮೆರಗು ಹೆಚ್ಚಿಸಿತ್ತು .
    ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾ ಕುಂಭಾಭಿಷೇಕ ಸಮಿತಿ, ವಿವಿಧ ಉಪಸಮಿತಿಯ ಅಧ್ಯಕ್ಷರುಗಳು ,ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಭಕ್ತಾಧಿಗಳು ಭಾಗವಹಿಸಿದ್ದರು.

  • ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ಆಶ್ರಯದಲ್ಲಿ ಬೃಹತ್‌ ರಕ್ತದಾನ ಶಿಬಿರ

    ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ಆಶ್ರಯದಲ್ಲಿ ಬೃಹತ್‌ ರಕ್ತದಾನ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ( ರಿ.) ಇವರ ಆಶ್ರಯದಲ್ಲಿ ಮೊಳಹಳ್ಳಿ ಆರೋಗ್ಯ ಕೇಂದ್ರದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟ್ರಸ್ಟ್ ನ ನಿರ್ದೇಶಕರಾದ ಮಹೇಶ್ ಹೆಗ್ಡೆ ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆಯನ್ನು ಈಡೇರಿಸಲು ಇಂತಹ ರಕ್ತದಾನ ಶಿಬಿರಗಳ ಮೂಲಕ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

    ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಜಯಕರ ಶೆಟ್ಟಿ ರಕ್ತದಾನ ಮಾಡುವುದರಿಂದ ದೇಹಕ್ಕೆ ಯಾವೆಲ್ಲ ಲಾಭಗಳಿವೆ ಎಂಬುದನ್ನು ಜನರಿಗೆ ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರವರ್ತಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲ. ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿಂದಾಗಿ ಅದೆಷ್ಟೋ ಜನರ ಚಿಕಿತ್ಸೆ ವಿಫಲವಾಗಿದ್ದು ಇಂತಹ ಕೊರತೆಯನ್ನು ನೀಗಿಸುವ ಸಲುವಾಗಿ ಸಮಾಜದಲ್ಲಿ ಸಾಕಷ್ಟು ಇಂತಹ ರಕ್ತದಾನದ ಶಿಬಿರಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ನಿಂದ ಪ್ರತಿವರ್ಷವೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು.

    ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ರೆಡ್ ಕ್ರಾಸ್ ನ ಖಜಾಂಚಿಯಾದ ಸೀತಾರಾಮ್ ಶೆಟ್ಟಿ ಹಾಗೂ ವೈದ್ಯಾಧಿಕಾರಿಯಾದ ಡಾಕ್ಟರ್ ಅಭಿನಂದನ್ ಉಪಸ್ಥಿತರಿದ್ದರು.

    ಯೋಜನಾಧಿಕಾರಿಯಾದ ಗಿರೀಶ್ ಎಂ ಎನ್ ಸ್ವಾಗತಿಸಿ ಸಂತೋಷ್ ಕಾಂಚನ್ ಕೆಕೆ ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆಗೈದರು.

  • ಸೌಡ :ಪಿಯುಸಿ ವರಗಿನ ಶಿಕ್ಷಣ ಉಚಿತವಾದಾಗ ಸಮರ್ಥ ಭಾರತ ನಿರ್ಮಾಣ ಸಾಧ್ಯ – ಕಿಮ್ಮನೆ

    ಸೌಡ :ಪಿಯುಸಿ ವರಗಿನ ಶಿಕ್ಷಣ ಉಚಿತವಾದಾಗ ಸಮರ್ಥ ಭಾರತ ನಿರ್ಮಾಣ ಸಾಧ್ಯ – ಕಿಮ್ಮನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ದೇಶದಲ್ಲಿ ಪಿಯುಸಿವರೆಗೆ ಶಿಕ್ಷಣವನ್ನ ಉಚಿತ ಶಿಕ್ಷಣವೆಂದು ಸರ್ಕಾರ ಘೋಷಿಸಿ ಯಾವುದೇ ಖಾಸಗಿ ಶಾಲೆಗಳಿಲ್ಲದೆ ಕೇವಲ ಸರ್ಕಾರ ಶಾಲೆಗಳನ್ನ ಮಾತ್ರ ಅವಕಾಶ ನೀಡಿದಾಗ ಸಮರ್ಥ ಭಾರತದ ನಿರ್ಮಾಣ ಸಾಧ್ಯ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

    ಅವರು ಕುಂದಾಪುರ ತಾಲೂಕಿನ ಸೌದದಲ್ಲಿ ಶನಿವಾರ ನಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಧುರ ಯುವಕ ಮಂಡಲ ಸೌಧ ಇದರ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿ ಸಾಧನೆಗೈದಿರುವ ಹುಟ್ಟೂರಿನ ಅಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು.

    ತಾನು ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಣದ ಬಗ್ಗೆ ಪ್ರಥಮ ಆದ್ಯತೆಯನ್ನು ನೀಡಿದ್ದೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಕವಾಗಿ ಮಾದರಿ ಶಾಲೆಗಳನ್ನ ರೂಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದೆ ಶಿಕ್ಷಣ ಎನ್ನುವುದು ಪ್ರತಿ ಮಗುವಿನ ಹಕ್ಕು ಆಗಿರುವುದರಿಂದ ಒಂದನೇ ತರಗತಿಯಿಂದ ಪಿಯುಸಿ ಅಂದರೆ 18ನೇ ವಯಸ್ಸಿನವರೆಗಿನ ಶಿಕ್ಷಣವನ್ನು ಉಚಿತಗೊಳಿಸಿದಾಗ ಪ್ರತಿಯೊಬ್ಬರು ಮೌಲ್ಯಯುತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು ಈ ನಿಟ್ಟಿನಲ್ಲಿ ಇಂದಿಗೂ ನಾನು ಉಚಿತ ಮತ್ತು ಮೌಲ್ಯಯುತ ಶಿಕ್ಷಣದ ಹೋರಾಟಕ್ಕೆ ಬದ್ಧನಿದ್ದೇನೆ ಎಂದರು.

    ನಾವು ವೈಜ್ಞಾನಿಕವಾಗಿ ಹವಾಮಾನ ವಿಚಾರದಲ್ಲಿ ಹಿಂದುಳಿದಿದ್ದೇವೆ ಎಂದ ಅವರು ಅತಿ ಮುಂದುವರಿದ ದೇಶಗಳಾದ ಜಪಾನ್ ಮೊದಲಾದ ದೇಶಗಳಲ್ಲಿಯೂ ಹವಾಮಾನ ಮುನ್ಸೂಚನೆ ಪಡೆಯುವಲ್ಲಿ ವಿಫಲವಾಗಿದ್ದೇವೆ ಹಲವು ಬಾರಿ ತೀವ್ರ ಭೂಕಂಪ ಬಿರುಗಾಳಿ ಚಂಡಮಾರುತಗಳಿಗೆ ವೈಜ್ಞಾನಿಕ ಉತ್ತರ ಸಿಗದೇ ಕೊಚ್ಚಿಕೊಂಡು ಹೋಗಿರುವುದನ್ನ ಕಂಡಿದ್ದೇವೆ. ಈ ನಿಟ್ಟಿನಲ್ಲಿ ನಾವು ಸಾಕಷ್ಟು ಅಧ್ಯಯನಗಳನ್ನು ಮಾಡಬೇಕಿದೆ ಎಂದರು.

    ಇದೇ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಸಹ ನಿರ್ದೇಶಕರಾಗಿದ್ದ ಹೆಚ್. ದಿವಾಕರ ಶೆಟ್ಟಿ ಸೌಡ ಹಾಗೂ ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞ ಸದಾನಂದ ಅಡಿಗ ಹೆರಡೆಜೆಡ್ಡು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಇದೇ ಸಂದರ್ಭ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

    ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್ ಆರ್ , ಸೌದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಣಿ ಆರ್ ಅಡಿಗ, ಅಧ್ಯಕ್ಷ ಎಸ್ ಉದಯ್ ಐತಾಳ್ ಉಪಸ್ಥಿತರಿದ್ದರು.

    ವಿಘ್ನೇಶ್ವರ ಐತಾಳ್ ಸ್ವಾಗತಿಸಿದರು. ಮಧುರ ಯುವಕ ಮಂಡಲದ ಗೌರವಾಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಂಜಿತ್ ಸೌಡ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

  • ಹೆಮ್ಮಾಡಿ :ಪಿ.ಯು.ಸಿ.ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶೋಭಿತ್ ಅವರಿಗೆ ಪ್ರೋತ್ಸಾಹ ಧನ ವಿತರಣೆ

    ಹೆಮ್ಮಾಡಿ :ಪಿ.ಯು.ಸಿ.ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶೋಭಿತ್ ಅವರಿಗೆ ಪ್ರೋತ್ಸಾಹ ಧನ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪ್ರಥಮ ಪಿ.ಯು.ಸಿ.ವ್ಯಾಸಾಂಗ ಮಾಡುತ್ತಿರುವ ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಜನ್ಸಾಲೆಯ ಶೋಭಿತ್ ತೀರ ಬಡತನ ಕುಟುಂಬದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹೆಮ್ಮಾಡಿಯ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ವತಿಯಿಂದ ಟ್ರಸ್ಟ್‌ ನ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು ಹಾಗೂ ವಿದ್ಯಾರ್ಥಿಯ ಪಿ.ಯು.ಸಿ ವ್ಯಾಸಂಗದ ಕುರಿತು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

  • ಕುಂದಾಪುರದ ಉದ್ಯಮಿ “ಅಜಂತಾ ಪ್ರಿಂಟರ್ಸ್” ಮಾಲಕ ಎ. ಅನಂತಕೃಷ್ಣ ನಿಧನ

    ಕುಂದಾಪುರದ ಉದ್ಯಮಿ “ಅಜಂತಾ ಪ್ರಿಂಟರ್ಸ್” ಮಾಲಕ ಎ. ಅನಂತಕೃಷ್ಣ ನಿಧನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕುಂದಾಪುರದ ಉದ್ಯಮಿ, “ಅಜಂತಾ ಪ್ರಿಂಟರ್ಸ್” ಮಾಲಕರಾದ ಸಾಮಾಜಿಕ ಧುರೀಣ ಎ. ಅನಂತಕೃಷ್ಣ ಕೊಡ್ಡಿಯವರು (72) ದಿನಾಂಕ 17 ರಂದು ಶನಿವಾರ ಬೆಳಿಗ್ಗೆ ನಿಧನರಾದರು.

    ಹಿರಿಯ ಸಮಾಜ ಸೇವಕರಾಗಿದ್ದು, ಕುಂದಾಪುರದ ಲಯನ್ಸ್‌ ಕ್ಲಬ್, ಬೋರ್ಡ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ಮುಂತಾದ ಸಂಘಟನೆಗಳಲ್ಲಿ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ಕುಂದಾಪುರ ತಾಲೂಕು ಬಿಜೆಪಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ಈಗ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಕ್ರೀಯಾಶೀಲರಾಗಿದ್ದರು. ತಮ್ಮ ನೇರ ನುಡಿ, ಮಾನವೀಯ ಸಾತ್ವಿಕ ಗುಣಗಳಿಂದ ಸಮಾಜದಲ್ಲಿ ಗೌರವಕ್ಕೆ ಪಾತ್ರರಾದವರು. ಇವರು ಪತ್ನಿ ಓರ್ವ ಪುತ್ರನನ್ನು ಅಗಲಿದ್ದಾರೆ.

    ಇವರು ಮಾಜಿ ಶಾಸಕ, ಅಮಾಸೆಬೈಲು ದಿ. ಎ.ಜಿ.ಕೊಡ್ಲಿಯವರ ಸಹೋದರ ಹಾಗೂ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಲಿಯವರ ಚಿಕ್ಕಪ್ಪ. ಹಲವಾರು ಮಂದಿ ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಅಮಾಸೆಬೈಲು, ಮಚ್ಚಟ್ಟು ಮೂಲ ಗೃಹದಲ್ಲಿ ನೆರವೇರಿಸಲಾಯಿತು.

  • ಫೆ.21 ರಂದು ಕಜ್ಕೆಯಲ್ಲಿ ಶ್ರೀ ಅನ್ನಪೂರ್ಣೆಶ್ವರಿಯ ಶಿಲಾಮಯ ದೇವಸ್ಥಾನ ಲೋಕಾರ್ಪಣೆ

    ಫೆ.21 ರಂದು ಕಜ್ಕೆಯಲ್ಲಿ ಶ್ರೀ ಅನ್ನಪೂರ್ಣೆಶ್ವರಿಯ ಶಿಲಾಮಯ ದೇವಸ್ಥಾನ ಲೋಕಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕಜ್ಕೆ : ಕಾನನದ ನಡುವಿನ ಸುಂದರ ರಮಣೀಯ ಪುಣ್ಯಭೂಮಿ ಕಜ್ಕೆಯಲ್ಲಿ ಶ್ರೀ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರ ನೇತ್ರತ್ವದಲ್ಲಿ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾಮಯ ದೇಗುಲ ನಿರ್ಮಾಣಗೊಂಡಿದ್ದು ಇದೇ ೨೧ರಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಸ್ಥಾನದ ಲೋಕಾರ್ಪಣೆಯ ಕಾರ್ಯ ನೆರವೇರಲಿದೆ.

    ಅರಣ್ಯದಲ್ಲಿ ಸುತ್ತುವರಿದಿರುವ ಕಜ್ಕೆಯಲ್ಲಿ ಆದಿಶಂಕರಾಚಾರ್ಯರು ಕಾಲ್ನಡಿಗೆಯಲ್ಲಿ ಕೊಲ್ಲೂರಿಗೆ ಸಂಚರಿಸುವಾಗ ಮಧ್ಯಾಹ್ನದ ಹೊತ್ತು ಇಲ್ಲಿ ಭಿಕ್ಷೆ ಪಡೆದಿದ್ದರು. ಸಹಸ್ರಾರು ವರ್ಷಗಳಿಂದ ಸಾನಿಧ್ಯ ಭೂಗತವಾಗಿದ್ದು ಜಾಗವು ಖಾಸಗಿಯವರಲ್ಲಿ ಇತ್ತು. ಇದೀಗ ಕಜ್ಕೆಯವರಾದ ಕೃಷ್ಣಯ್ಯ ಶೆಟ್ಟಿಯವರು ಮತ್ತು ಶ್ರೀಧರ ಕಾಮತ್‌ ಎಂಬವರು ದೇವಸ್ಥಾನ ನಿರ್ಮಾಣಕ್ಕೆ ೨ ಎಕರೆ ಜಾಗವನ್ನು ದಾನವಾಗಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮದ ಕಜ್ಕೆಯಲ್ಲಿ ಸುಮಾರು ೫ ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರ ಭವ್ಯ ದೇವಸ್ಥಾನ ನಿರ್ಮಾಣಗೊಂಡಿದೆ. ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠ ಅರೇಮಾದನಹಳ್ಳಿ ಅರಕಲಗೂಡು ಹಾಸನದ ಶಾಖಾ ಮಠವು ಕಜ್ಕೆಯಲ್ಲಿ ನಿರ್ಮಾಣಗೊಂಡಿದ್ದು ಶ್ರೀ ವಿಶ್ವಕರ್ಮ ಜಗದ್ಗುರು ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರು ಭಕ್ತರನ್ನು ಹರಸುತ್ತಿದ್ದಾರೆ. ಶ್ರೀಮಠದ ಪಕ್ಕದಲ್ಲೇ ಶ್ರೀ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ದೇವಸ್ಥಾನವು ಸರ್ವರ ಸಹಕಾರದೊಂದಿಗೆ ನಿರ್ಮಾಣಗೊಂಡಿದೆ. ಶ್ರೀ ಅನ್ನಪೂರ್ಣೇಶ್ವರಿಯ ಜೊತೆಗೆ ಶ್ರೀಗಣಪತಿ ದೇವರು, ಶ್ರೀ ಆದಿಶಂಕರಾಚಾರ್ಯರು ಶಿಲಾ ಬಿಂಬ ಪ್ರತಿಷ್ಠೆ ಹಾಗೂ ನಾಗದೇವರ ಸನ್ನಿಧಿಯ ಪ್ರತಿಷ್ಠೆಯು ಫೆಬ್ರವರಿ ೨೧ರಂದು ನೆರವೇರಲಿದೆ. ೧೮ರಂದು ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. ಫೆಬ್ರವರಿ ೧೩ ರಿಂದ ಆರಂಭಗೊಂಡು ೨೧ರ ತನಕ ಶಿಲಾ ಬಿಂಬ ಪ್ರತಿಷ್ಠೆ ಮತ್ತು ಮಹಾ ಕುಂಭಾಭಿಷೇಕವು ನಡೆಯಲಿದೆ. ನಾಡಿನ ವಿವಿಧ ಶ್ರೀಗುರುಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು ಪುಣ್ಯಕಾರ್ಯದಲ್ಲಿ ಭಾಗಯಾಗಲಿದ್ದಾರೆ. ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರ ಅಧ್ಯಕ್ಷತೆಯ ಶ್ರೀ ದೇವಸ್ಥಾನ ನಿರ್ಮಾಣ ಸಮಿತಿ ಮತ್ತು ಮಹಾಕುಂಭಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಹೆಬ್ರಿ ಮಠದಬೆಟ್ಟು ರಾಜೇಶ ಆಚಾರ್ಯ, ಸ್ವಾಗತ ಸಮಿತಿ ಅಧ್ಯಕ್ಷ ಕಜ್ಕೆ ಕಾಶೀನಾಥ ಶೆಣೈ, ದೇವಸ್ಥಾನ ನಿರ್ಮಾಣ ಮತ್ತು ಮಹಾಕುಂಭಾಭಿಷೇಕ ಸಮಿತಿಯ ಸರ್ವ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಸಂಘಸಂಸ್ಥೆಗಳ ಸರ್ವ ಸದಸ್ಯರು ಸೇರಿ ಸರ್ವರೂ ಶ್ರಮಿಸುತ್ತಿದ್ದಾರೆ. ನಿರಂತರವಾಗಿ ಸ್ಥಳೀಯ ಮತ್ತು ಮಂಗಳೂರು, ಕೊಪ್ಪ ಶೃಂಗೇರಿ ಸಹಿತ ವಿವಿದೆಡೆಯ ಭಕ್ತ ಸಮೂಹದಿಂದ ಕರಸೇವೆಯೂ ನಡೆಯುತ್ತಿದೆ.

    ಖ್ಯಾತ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಅವರಿಂದ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾ ವಿಗ್ರಹ ರಚನೆ. : ಆನಂದ ಆಚಾರ್ಯ ಸುರತ್ಕಲ್‌ ವಾಸ್ತುಶಿಲ್ಪಿಯಾಗಿ ದೇವಸ್ಥಾನದಲ್ಲಿ ಸೇವೆಸಲ್ಲಿಸಿದ್ದಾರೆ. ಶಿಲಾ ಶಿಲ್ಪಿಯಾಗಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ, ಕಾಷ್ಠ ಶಿಲ್ಪಿಯಾಗಿ ಬಂಡಿಮಠ ಶ್ರೀಧರ ಆಚಾರ್ಯ ದೇವಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ದೇವರ ಮೂರ್ತಿ ರಚಿಸಿದ ಶಿಲ್ಪಿ ಮೈಸೂರಿನ ಅರುಣ್‌ ಯೋಗಿರಾಜ್‌ ಮಹಾಮಾತೆ ಶ್ರೀ ಅನ್ನಪೂರ್ಣೇಶ್ವರಿಯ ಶಿಲಾ ವಿಗ್ರಹವನ್ನು ರಚಿಸಿದ್ದಾರೆ. ಶ್ರೀಗಣಪತಿ ದೇವರ ವಿಗ್ರಹವನ್ನು ಪ್ರಕಾಶ ಆಚಾರ್ಯ ಮೈಸೂರು ಮತ್ತು ಆದಿಶಂಕಾರಾಚಾರ್ಯರ ವಿಗ್ರಹವನ್ನು ಶಿಲ್ಪಿ ಕಾರ್ಕಳ ಅತ್ತೂರಿನ ರಾಮಚಂದ್ರ ಆಚಾರ್ಯ ರಚಿಸಿದ್ದಾರೆ.

    ಅಂದು ಆದಿಶಂಕರಾಚಾರ್ಯರು ಕಾಲಿಟ್ಟ ಕಜ್ಕೆ ಈಗ ಶ್ರೀ ಅನ್ನಪೂರ್ಣೇಶ್ವರಿಯ ಪುಣ್ಯ ಕ್ಷೇತ್ರವಾಗಿದೆ. ಸಹಸ್ರಾರು ವರ್ಷಗಳಿಂದ ಭೂಗತವಾಗಿದ್ದ ಕ್ಷೇತ್ರಕ್ಕೆ ಮರುಚೈತನ್ಯ ನೀಡುವ ಸುಯೋಗ ನನ್ನ ಪಾಲಿಗೆ ಒದಗಿ ಬಂದಿದೆ. ಕಜ್ಕೆಯ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್‌ ಅವರು ತಮ್ಮ ಅಮೂಲ್ಯವಾದ ೨ ಎಕರೆ ಜಮೀನನ್ನು ದೇಗುಲಕ್ಕಾಗಿ ದಾನ ನೀಡಿದ್ದಾರೆ. ನಮ್ಮ ಶ್ರೀಮಠದ ಶಾಖಾ ಮಠ ಕೂಡ ಇಲ್ಲಿ ಕಾರ್ಯಚರಿಸುತ್ತಿದೆ. ಭಕ್ತಾದಿಗಳ ಸಹಕಾರದಿಂದ ಭವ್ಯ ದೇಗುಲ ನಿರ್ಮಾಣಗೊಂಡಿದೆ. ದಟ್ಟ ಅರಣ್ಯದ ನಡುವೆ ಈಗ ದೇವಿಭೂಮಿ ನಿರ್ಮಾಣ ಗೊಂಡು ಕಜ್ಕೆ ಶ್ರೀಕ್ಷೇತ್ರವಾಗಿದೆ. ಎಲ್ಲಾ ಕಾರ್ಯವೂ ಸುಗಮವಾಗಿ ನಡೆಯುತ್ತಿರುವುದು ಕಂಡು ಸಂತಸವಾಗಿದೆ. – ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ.

    ಸುತ್ತಲೂ ಅರಣ್ಯದಿಂದ ಸುತ್ತುವರಿದಿರುವ ಕಜ್ಕೆಯ ಶ್ರೀದೇವಿಯ ನೆಲೆಯನ್ನು ಗುರುತಿಸಿ ಇಂದು ಭವ್ಯ ದೇಗುಲ ನಿರ್ಮಾಣವಾಗಲು ಕಾರಣರಾದವರು ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳವರು. ದೇವಸ್ಥಾನ ನಿರ್ಮಾಣ ಸಮಿತಿಯ ಜೊತೆಗೆ ಭಕ್ತ ವೃಂದದ ಪರಿಶ್ರಮದಿಂದ ಭವ್ಯ ಕ್ಷೇತ್ರವು ನಿರ್ಮಾಣಗೋಂಡಿದೆ. – ಕೃಷ್ಣಯ್ಯ ಶೆಟ್ಟಿ, ಶ್ರೀಧರ ಕಾಮತ್‌ , ಸ್ಥಳ ದಾನಿಗಳು.

  • ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಭಾವಳಿಯಲ್ಲಿ ಕೆಳದಿ ಚಿಕ್ಕ ಸಂಕಣ್ಣನಾಯಕನ ಕಾಲದ ಶಾಸನ ಪತ್ತೆ

    ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಭಾವಳಿಯಲ್ಲಿ ಕೆಳದಿ ಚಿಕ್ಕ ಸಂಕಣ್ಣನಾಯಕನ ಕಾಲದ ಶಾಸನ ಪತ್ತೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಕರ್ನಾಟಕದ ಕರಾವಳಿಯ ಪ್ರಸಿದ್ಧ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಬಸ್ರೂರುರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇರುವ ಪುರಾತನ ಕಂಚಿನ ಪ್ರಭಾವಳಿಯಲ್ಲಿ ಶಾಸನ ಇರುವುದು ಕಂಡು ಬಂದಿದೆ. ಪ್ರಭಾವಳಿಯ ಹಿಂಭಾಗದಲ್ಲಿ ಮೇಲೆ ಹಾಗೂ ಕೆಳಭಾಗದಲ್ಲಿ ಶಾಸನ ಇರುವುದು ಕಾಣುತ್ತದೆ. ಇನ್ನೂ ಶಾಸನಗಳಲ್ಲಿ ಈ ಮಹಾಲಿಂಗೇಶ್ವರ ಸನ್ನಿಧಿಯನ್ನು ನಖರೇಶ್ವರ ಎಂದು ಸಂಭೋದಿಸಿರುವುದನ್ನು ನಾವು ಇಲ್ಲಿ ಸ್ಮರಿಸಿ ಬೇಕಾಗುತ್ತದೆ. ಬಸರೂರಿನ ನಖರಾ ವ್ಯಾಪಾರಿ ಸಂಘ ಬಸರೂರು ಪಟ್ಟಣ ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿರುತ್ತವೆ . (ಕೆಳದಿ ಸಾಮ್ರಾಜ್ಯ, ಅಜಯ್ ಕುಮಾರ್ ಶರ್ಮಾ, 2023, ಪುಟ ಸಂಖ್ಯೆ 174).

    ಪ್ರಭಾವಳಿಯಲ್ಲಿ ಇರುವ ಶಾಸನದ ಪಾಠ

    (1) ಒ ಸ್ವಸ್ತಿ ಶ್ರಿಶಕವರುಷ ೧೪೮೨ ಸಿಧಾರ್ಥ ಸಂ ಸದಾಶಿವರಾಯನಾಯಕರೂ ತುಳುರಾಜ್ಯವನಾಳಿ

    (2) ಬಸರೂರ ಪಡುವ ಕೆರಿಯ ಹಾಲರ ಧಂರ್ಮದಲಿ ಪಾಲಿಸಿಕೊಂಡಲಿ ಪಡುವ ಕೆರಿ ಹಾಲರು ಸೆಟ್ಟಿಕಾರರು

    (3) ದೆವರ ಪಿಠ ಪ್ರಬಾಳೆ ಮೂರ್ತಿಗೆ ಹಾಕಿದ ಅಸರಬಿಚಿನ್ನ ವರಹ ತೂಕ ೫೦೦ ಬೆಂಮ್ಮರ

    (4) ಶಂಕರಲಿಂಗಸೆಟ್ಡಿ ಅದ್ಯಕ್ಷ ಐಡಗೆ ದೆವಾಲ್ಯದ ಆ ರಮಾಚಾರಿ ಕೆಲಸ

    ಶಾಸನದ ಸಾರಾಂಶ:- ಸ್ವಸ್ತಿ ಶ್ರೀ ಶಕವರ್ಷ ೧೪೮೨ರ ಸಿದ್ದಾರ್ಥೀ ಸಂವತ್ಸರದಲ್ಲಿ ಅಂದರೆ ಇಂದಿನ‌ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 1559-1560ರಲ್ಲಿ ಸದಾಶಿವ ನಾಯಕರು ತುಳುರಾಜ್ಯವನ್ನು ಆಳುತ್ತಿರುವಾಗ, ಬಸರೂರಿನ‌ ಪಡುವ ಕೇರಿಯ (ಪಶ್ಚಿಮ ದಿಕ್ಕಿನಲ್ಲಿ ಇರುವ ಕೇರಿ) ಹಾಲರು ಧರ್ಮವನ್ನು ಪಾಲಿಸಿಕೊಂಡು ಬಂದಿದ್ದು, ಪಡುವ ಕೇರಿ ಹಾಲರು ಸೆಟ್ಟಿಕಾರರು (ವ್ಯಾಪಾರಸ್ಥರು) ದೇವರ ಪೀಠ, ಪ್ರಭಾವಳಿ ಮತ್ತು ಮೂರ್ತಿಯನ್ನು (ಉತ್ಸವ ಮೂರ್ತಿ) ಮಾಡಿಸಲು ನೀಡಿದ ಚಿನ್ನದ ವರಾಹಗಳ ತೂಕ ೫೦೦. ಇನ್ನೂ ಈ ಕೆಲಸವನ್ನು ರಾಮಾಚಾರಿ ಎಂಬುವನು ಮಾಡಿದರೆ ಅಂದು ದೇವಾಲಯದ ಅಧ್ಯಕ್ಷರ ಸ್ಥಾನದಲ್ಲಿ ಇದ್ದದ್ದು ಬೆಂಮ್ಮರದ ಶಂಕರಲಿಂಗ ಸೆಟ್ಟಿ.

    ಈ ಶಾಸನದಲ್ಲಿ ಪ್ರಸ್ತಾಪ ಆಗಿರುವ ಕಾಲಮಾನ ೧೫೫೯-೧೫೬೦ ಮತ್ತು ಅಂದು ತುಳುರಾಜ್ಯವನ್ನು ಆಳುತ್ತಿದ್ದಿದ್ದು ಸದಾಶಿವ ನಾಯಕರು. ಇನ್ನೂ ಕೆಳದಿಯ ಇತಿಹಾಸವನ್ನು ಹೇಳಲು ಇರುವ ಎರಡು ಪ್ರಮುಖ ಕೃತಿಗಳಾದ ಶ್ರೀ ಶಿವತತ್ವರತ್ನಾಕರ ಮತ್ತು ಕೆಳದಿನೃಪವಿಜಯಂ ಅನ್ನು ಗಣನೆಗೆ ತೆಗೆದುಕೊಂಡರೆ ಶ್ರೀ ಸದಾಶಿವ ನಾಯಕರು ಆಳ್ವಿಕೆ ಮಾಡಿದ ಕಾಲಘಟ್ಟ 1513 ರಿಂದ 1545. ಇನ್ನೂ ಶಾಸನದಲ್ಲಿ ಉಲ್ಲೇಖಿಸಿರುವ ಕಾಲಘಟ್ಟದಲ್ಲಿ ಅಂದರೆ 1559-1560ರಲ್ಲಿ ಚಿಕ್ಕಸಂಕಣ್ಣ ನಾಯಕರು ತುಳುರಾಜ್ಯದ ಮೇಲೆ ಆಳ್ವಿಕೆಯನ್ನು ಮಾಡುತ್ತಿರುತ್ತಾರೆ. ಇನ್ನೂ ನಮಗೆ ಕರಾವಳಿ ಮತ್ತು ಮಲೆನಾಡಿನ ಕೆಲವು ಕಡೆ ಸಿಕ್ಕ ಶಾಸನಗಳನ್ನು ಗಮನಿಸಿದಾಗ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ನಾಯಕರ ಆಳ್ವಿಕೆಯ ಕಾಲದಲ್ಲಿ ಅವರ ತಂದೆಯಾದ ಸದಾಶಿವ ನಾಯಕರ ಹೆಸರು ಶಾಸನಗಳಲ್ಲಿ ಕಂಡುಬರುತ್ತದೆ.

    ಕೆಳದಿಯ ಸದಾಶಿವ ನಾಯಕರು ಕರ್ಣಾಟ (ವಿಜಯನಗರ) ಸಾಮ್ರಾಜ್ಯದ ಹಲವಾರು ಯುದ್ಧಗಳಲ್ಲಿ ತೋರಿಸಿದ ಅಪ್ರತಿಮ ಸಾಹಸದಿಂದಾಗಿ ಅವರಿಗೆ ಆರಗದ ರಾಜ್ಯಪಾಲರ ಹುದ್ದೆಯ ಜೊತೆಗೆ ನಾಯಕ ಎಂಬ ಪಟ್ಟವನ್ನು ರಾಯರು ಕರುಣಿಸುತ್ತಾರೆ. ಈ ಹುದ್ದೆಯ ಪ್ರಯುಕ್ತ ಸದಾಶಿವ ನಾಯಕರು ಆರಗ ೧೮ ಕಂಪಣ, ಚಂದ್ರಗುತ್ತಿ ೧೮ ಕಂಪಣ, ತುಳು ರಾಜ್ಯ, ಬಾರಕೂರು, ಮಂಗಳೂರು ರಾಜ್ಯಗಳ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಕರಾವಳಿಯ ಅರಸರು ಮತ್ತು ಕರ್ಣಾಟ ಸಾಮ್ರಾಜ್ಯದ ಮಧ್ಯೆ ಕೊಂಡಿಯಾಗಿ ಸದಾಶಿವ ನಾಯಕರು ಕಾರ್ಯವನ್ನು ನಿರ್ವಹಿಸುತ್ತಾರೆ. ಸದಾಶಿವ ನಾಯಕರು ತಮ್ಮ ಕಾರ್ಯದಲ್ಲಿ ತೋರಿದ ನಿಷ್ಠೆಯಿಂದ ಅವರಿಗೆ ದೊರೆತ ರಾಜ್ಯಪಾಲರ ಹುದ್ದೆ ಮತ್ತು ನಾಯಕ ಪಟ್ಟ ಕೆಳದಿ ರಾಜಮನೆತನವು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಹೋಗಲು ಹಂಪೆಯ ರಾಯರು ಕರುಣಿಸುತ್ತಾರೆ. ಸದಾಶಿವ ನಾಯಕರು ಕರಾವಳಿಯ ಉದ್ದಕ್ಕೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮುಖಾಂತರ ಅಲ್ಲಿಯ ಜನಸ್ತೋಮರ ಎದೆಯಲ್ಲಿ ಶಾಶ್ವತವಾಗಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಾರೆ. ಸದಾಶಿವ ನಾಯಕರು ತಮ್ಮ ಆಳ್ವಿಕೆಯ ಕಾಲದಲ್ಲಿ ಕರಾವಳಿಯ ಸಪ್ತ ಮುಕ್ತಿ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿ ಅಲ್ಲಿರುವ ದೇವಾಲಯಗಳಿಗೆ ಸಾಕಷ್ಟು ದಾನಧರ್ಮವನ್ನು ಮಾಡುತ್ತಾರೆ. ತಮ್ಮ ತಂದೆ ಚೌಡಪ್ಪ ಮತ್ತು ತಾಯಿ ತಿರುಮಮ್ಮ ಅವರಿಗೆ ಕೈಲಾಸ ಪ್ರಾಪ್ತಿ ಆಗಲೆಂದು ಶಂಕರನಾರಾಯಣ ಕ್ಷೇತ್ರದಲ್ಲಿ ವಿರೂಪಾಕ್ಷ ದೇವರ ಹೆಸರಿನಲ್ಲಿ ಮಠವನ್ನು ಸ್ಥಾಪಿಸುತ್ತಾರೆ. ಶಂಕರನಾರಾಯಣ ದೇವರ ಪರಮಭಕ್ತಾರದ ಸದಾಶಿವ ನಾಯಕರು ತಮ್ಮ ಇಬ್ಬರೂ ಮಕ್ಕಳಿಗೆ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ಎಂದು ನಾಮಕರಣ ಮಾಡುತ್ತಾರೆ. ಇಲ್ಲಿ ಸಂಕಣ್ಣ ಎಂಬುವುದು ಶಂಕರಣ್ಣ ಎಂಬುದರ ರೂಪಾಂತರ. ಮೇಲ್ಕಂಡ ಎಲ್ಲಾ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಶಾಸನಗಳಲ್ಲಿ ಕಂಡುಬರುವ ಸದಾಶಿವ ನಾಯಕರ ಹೆಸರನ್ನು (1545ರ ನಂತರದಲ್ಲಿ) ನೋಡಿದಾಗ ನಮಗೆ ತಿಳಿದುಬರುವ ವಿಷಯ ಏನೆಂದರೆ ಸದಾಶಿವ ನಾಯಕರ ಮಕ್ಕಳಾದ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ನಾಯಕರು ತಮ್ಮ ಆಡಳಿತಾವಧಿಯಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಶಾಸನಗಳನ್ನು ಬರೆಸಿರುವುದು ಕಂಡುಬರುತ್ತದೆ. ಇದಕ್ಕೆ ಮೂರು ಅರ್ಥವನ್ನು ನಾವು ಕಲ್ಪಿಸ ಬಹುದು
    (೧) ಸದಾಶಿವ ನಾಯಕರಿಗೆ ಕರಾವಳಿಯಲ್ಲಿ ಇದ್ದ ವರ್ಚಸ್ಸನ್ನು ಉಪಯೋಗಿಸಿ ಅದನ್ನು ಮುಂದುವರಿಸಿಕೊಂಡು ಹೋಗಲು ಅವರ ‌ಮರಣಾಂತರವು ಅವರ ಹೆಸರಿನಲ್ಲಿ ಶಾಸನಗಳನ್ನು ಬರೆಯಲಾಗಿದೆ.
    (೨) ತಮ್ಮ ತಂದೆಯ ಗೌರವಾರ್ಥ ದೊಡ್ಡ ಮತ್ತು‌ ಚಿಕ್ಕ ಸಂಕಣ್ಣ ನಾಯಕರು ಶಾಸನಗಳಲ್ಲಿ ತಮ್ಮ ತಂದೆಯ ಹೆಸರನ್ನು ಬರೆಸಿರ ಬಹುದು.
    (೩) ಕರಾವಳಿ ಪ್ರದೇಶದಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ದೊಡ್ಡ ಮತ್ತು‌ ಚಿಕ್ಕ ಸಂಕಣ್ಣ ನಾಯಕರು ಆಡಳಿತವನ್ನು ಮುಂದುವರಿಸಿಕೊಂಡು ಹೋಗಿರ ಬಹುದು.

    ಒಟ್ಟಾರೆ ಹೇಳುವುದಾದರೆ ಬಸರೂರಿನ ಈ ಪ್ರಭಾವಳಿ ಶಾಸನ ಹೊಸ ಅಧ್ಯಯನಕ್ಕೆ ಸಾಕಷ್ಟು ಅವಕಾಶವನ್ನು‌ ನೀಡಿದೆ. ಐತಿಹಾಸಿಕ ತಾಳಿಕೋಟೆ ಯುದ್ಧದ (1565) ತರುವಾಯ ಕೆಳದಿಯ ಹಿರಿಯ ವೆಂಕಟಪ್ಪ ನಾಯಕರ ಕಾಲಘಟ್ಟದಲ್ಲಿ ದಕ್ಷಿಣ ಗೋವೆಯಿಂದ ಕೇರಳದ ನೀಲೇಶ್ವರದ ವರೆಗೂ ಕೆಳದಿ ಸಾಮ್ರಾಜ್ಯದ ಪಶ್ಚಿಮದ ಗಡಿಯಾಗಿ ಮಾರ್ಪಾಡಾಗುತ್ತದೆ. ಹಿರಿಯ ವೆಂಕಟಪ್ಪ ನಾಯಕರಿಂದ ಪ್ರಾರಂಭಗೊಂಡು ಕೊನೆಯ ಕೆಳದಿಯ ರಾಣಿ ವೀರಮ್ಮಾಜಿಯವರೆಗು ಕೆಳದಿಯ ಅರಸರು ಕರಾವಳಿಯಲ್ಲಿ ತಮ್ಮ ಹೆಸರಿನಲ್ಲಿಯೇ ಶಾಸನಗಳನ್ನು ಬರೆಸುತ್ತಾರೆ.

    ಶಾಸನ ವನ್ನು ಪ್ರದೀಪ ಕುಮಾರ್ ಬಸ್ರೂರು ಜಿಲ್ಲಾ ಸಂಚಾಲಕರು ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಇವರು ದೇವಸ್ಥಾನ ದ ಆಡಳಿತ ಧಮ೯ದಶಿ೯ ಬಿ ಅಪ್ಪಣ್ಣ ಹೆಗ್ಡೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮಹೇಶ್ ಮೆಂಡನ್ ಸಹಕಾರ ದಲ್ಲಿ ಪತ್ತೆ ಹಚ್ಚಿದ್ದು,ಇವರಿಗೆ ಅಧ್ಯಯನ ಕ್ಕೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ರಾಜ್ಯ ಸದಸ್ಯರು ಅಜಯ್ ಕುಮಾರ ಶಮಾ೯ ಶಿವಮೊಗ್ಗ ಹಾಗೂ ಶ್ರೀಪತಿ ಆಚಾಯ೯ ಮಂಗಳೂರು ಇವರು ಸಹಕರಿಸಿದ್ದಾರೆ.