ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ :ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ( ರಿ.) ಇವರ ಆಶ್ರಯದಲ್ಲಿ ಮೊಳಹಳ್ಳಿ ಆರೋಗ್ಯ ಕೇಂದ್ರದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟ್ರಸ್ಟ್ ನ ನಿರ್ದೇಶಕರಾದ ಮಹೇಶ್ ಹೆಗ್ಡೆ ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆಯನ್ನು ಈಡೇರಿಸಲು ಇಂತಹ ರಕ್ತದಾನ ಶಿಬಿರಗಳ ಮೂಲಕ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಚೇರ್ಮನ್ ಜಯಕರ ಶೆಟ್ಟಿ ರಕ್ತದಾನ ಮಾಡುವುದರಿಂದ ದೇಹಕ್ಕೆ ಯಾವೆಲ್ಲ ಲಾಭಗಳಿವೆ ಎಂಬುದನ್ನು ಜನರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರವರ್ತಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲ. ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿಂದಾಗಿ ಅದೆಷ್ಟೋ ಜನರ ಚಿಕಿತ್ಸೆ ವಿಫಲವಾಗಿದ್ದು ಇಂತಹ ಕೊರತೆಯನ್ನು ನೀಗಿಸುವ ಸಲುವಾಗಿ ಸಮಾಜದಲ್ಲಿ ಸಾಕಷ್ಟು ಇಂತಹ ರಕ್ತದಾನದ ಶಿಬಿರಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ನಿಂದ ಪ್ರತಿವರ್ಷವೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಹೆಗ್ಡೆ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ರೆಡ್ ಕ್ರಾಸ್ ನ ಖಜಾಂಚಿಯಾದ ಸೀತಾರಾಮ್ ಶೆಟ್ಟಿ ಹಾಗೂ ವೈದ್ಯಾಧಿಕಾರಿಯಾದ ಡಾಕ್ಟರ್ ಅಭಿನಂದನ್ ಉಪಸ್ಥಿತರಿದ್ದರು.
ಯೋಜನಾಧಿಕಾರಿಯಾದ ಗಿರೀಶ್ ಎಂ ಎನ್ ಸ್ವಾಗತಿಸಿ ಸಂತೋಷ್ ಕಾಂಚನ್ ಕೆಕೆ ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆಗೈದರು.











