Category: ಸುದ್ದಿ

  • ಕುಂದಾಪುರ :ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯಿಂದ 41ಸಾವಿರ ಸಮವಸ್ತ್ರ ವಿತರಣೆ

    ಕುಂದಾಪುರ :ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯಿಂದ 41ಸಾವಿರ ಸಮವಸ್ತ್ರ ವಿತರಣೆ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ :ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿ ರಿ., ಬೆಂಗಳೂರು ಇವರು ಉಡುಪಿ ಜಿಲ್ಲೆಯ ೩೨೫ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಕೊಡುಗೆಯಾಗಿ ೪೧,೦೦೦ ಜೊತೆ ಶಾಲಾ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜುಲೈ ೮ ಶನಿವಾರ ಕುಂದಾಪುರ ಅಂಕದಕಟ್ಟೆಯ ಸಹನಾ ಕನ್ವನ್ಷನ್ ಸೆಂಟರ್‌ನಲ್ಲಿ ನಡೆಯಿತು.

    ಮಾಜಿ ಸಚಿವರು ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಘಾಟನಾ ಮಾತುಗಳನ್ನಾಡಿದ ಸುನಿಲ್ ಕುಮಾರ್ ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಈ ವರ್ಷವೂ ಉಡುಪಿ ಜಿಲ್ಲೆಯ 41 ಸಾವಿರ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಗುತ್ತಿದೆ. ಕಳೆದ ವರ್ಷ 30ಸಾವಿರ ಸಮವಸ್ತ್ರ ವಿತರಿಸಲಾಗಿತ್ತು. ಇಷ್ಟು ದೊಡ್ಡ ಸಂಖ್ಯೆಯ ದೊಡ್ಡ ಮೊತ್ತದ ದಾನ ಮಾಡುವ ಮನಸ್ಥಿತಿ ಹಾಗೂ ಶಕ್ತಿ ಇರುವವರು ಬಹಳ ವಿರಳ. ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿಯವರು ಸಮಾಜದ ಎಲ್ಲಾ ಮಜಲುಗಳನ್ನೂ ಅರಿತವರು. ಅವರ ಶಿಕ್ಷಣ, ಸಮಾಜಮುಖಿ ಚಿಂತನೆಗಳು ಮತ್ತು ಪ್ರಕೃತಿಯ ಬಗೆಗಿನ ಕಾಳಜಿ ಈಗಿನ ಯುವ ಸಮುದಾಯಕ್ಕೆ ಬಹಳಷ್ಟು ಪ್ರೇರಕ ಎಂದು ಹೇಳಿದರು.

    ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

    ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.

    ಉಡುಪಿ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣ, ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಜಿಲ್ಲಾ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೇಕಾರ್ ಅವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಸೊಸೈಟಿಯ ಅಧ್ಯಕ್ಷರಾದ ಹೆಚ್.ಎಸ್.ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ. ಕಾರ್ಯದರ್ಶಿ ಡಾ.ಸುಮನಾ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.

    ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಕುಮಾರ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟ್ ನ ಕೋಶಾಧಿಕಾರಿ ರಾಜೀವ ಶೆಟ್ಟಿ ವಂದಿಸಿದರು.

  • ಕುಂದಾಪುರ :ಸೌಕೂರು, ಮಾವಿನಗುಳಿ ಶಾಲೆಗೆ ಉಚಿತ ಬ್ಯಾಗ್ ವಿತರಣೆ

    ಕುಂದಾಪುರ :ಸೌಕೂರು, ಮಾವಿನಗುಳಿ ಶಾಲೆಗೆ ಉಚಿತ ಬ್ಯಾಗ್ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರು ತಾಲೂಕಿನ ಗುಲ್ವಾಡಿ ಗ್ರಾಮದ ಸೌಕೂರು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮಾವಿನಗುಳಿ ಶಾಲೆಗೆ ಸುಚಿತ್ ಶೆಟ್ಟಿ ಕೌನ್ಜೂರು ಇವರು ಉಚಿತವಾಗಿ ನೀಡಿದ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು. ಗುಲ್ವಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಶೆಟ್ಟಿ ಗುಲ್ವಾಡಿ, ಎಸ್ಡಿಎಂಸಿ ಅಧ್ಯಕ್ಷರಾದ ಭಾಸ್ಕರ್ ಭಂಡಾರಿ, ನಿತೇಶ್ ಗುಲ್ವಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ನಮ್ರತಾ ಭಟ್ ಹಾಗೂ ಮಂಜುಳಾ ಪೂಜಾರಿಯವರು ಮಕ್ಕಳಿಗೆ ಬ್ಯಾಗುಗಳನ್ನು ಹಸ್ತಾಂತರಿಸಿದರು. ಇದೇ ಸಂದರ್ಭ ಬ್ಯಾಗ್ ನೀಡಿದ ದಾನಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮಕ್ಕಳ ಪೋಷಕರು ಕೃತಜ್ಞತೆ ಸಲ್ಲಿಸಿದರು

  • ಉಡುಪಿ :ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಉಡುಪಿ :ಕಡಲ ಕೊರೆತ ತಡೆಗೆ ಶಾಶ್ವತ ಪರಿಹಾರ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಕಡಲ ಕೊರೆತ ತಡೆಗೆ ತಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

    ಅವರು ಇಂದು ಪಡುಬಿದ್ರೆಯ ಕಾಡಿ ಪಟ್ಣದಲ್ಲಿ , ಸಮುದ್ರ ಕೊರೆತ ಪ್ರದೇಶ ವೀಕ್ಷಿಸಿ ಮಾತನಾಡಿದರು .

    ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರ ಕೊರೆತ ಸಂಭವಿಸುತ್ತಿರುವುದು ಸಾಮಾನ್ಯವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದರು.

    ಜಿಲ್ಲೆಯಲ್ಲಿ ಈ ಬಾರಿ ತಡವಾಗಿ ಮಳೆ ಆರಂಭಗೊಂಡಿದ್ದರು ಸಹ ಪ್ರಾಕೃತಿಕ ವಿಕೋಪದಿಂದ ಇದುವರೆಗೆ ಏಳು ಮಂದಿ ಮೃತಪಟ್ಟಿದ್ದು ಇವರ ಕುಟುಂಬದವರಿಗೆ ತಲಾ ರೂ. ಐದು ಲಕ್ಷಗಳ ಪರಿಹಾರವನ್ನು ವಿತರಿಸಲಾಗಿದೆ ಜಿಲ್ಲೆಯಲ್ಲಿ ಮಳೆಯಿಂದ ಜೀವ ಹಾನಿ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಮಳೆಯಿಂದ ಮಾನವ ಜೀವ ಹಾನಿ,ಮನೆ ಹಾನಿ, ಜಾನುವಾರು ಹಾನಿಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಜಿಲ್ಲೆಯಲ್ಲಿ ಕಾಲು ಸಂಕ ಗಳ ನಿರ್ಮಾಣ ಮತ್ತು ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

    ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಪ್ರಸನ್ನ ಹೆಚ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಹಾಲು ಲೀಟರ್‍ಗೆ ರೂ.40 ನೀಡುವಂತೆ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಮುಖ್ಯಮಂತ್ರಿಗಳಿಗೆ ಮನವಿ

    ಕುಂದಾಪುರ :ಹಾಲು ಲೀಟರ್‍ಗೆ ರೂ.40 ನೀಡುವಂತೆ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಮುಖ್ಯಮಂತ್ರಿಗಳಿಗೆ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೈನುಗಾರಿಕೆಯನ್ನು ನಂಬಿಕೊಂಡ ಹೈನುಗಾರರು ಇದರಿಂದ ಸಂಕಷ್ಟಕ್ಕಿಡಾಗಿದ್ದಾರೆ. ಹೈನೋದ್ಯಮಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ 25ರಿಂದ 40% ಹೆಚ್ಚಳವಾಗುತ್ತಿರುವುದರಿಂದ ಹೈನುಗಾರರು ಹಾಲು ಉದ್ಯಮದಿಂದ ವಿಮುಖರಾಗುವ ಹಂತಕ್ಕೆ ಬಂದಿದ್ದು, ಕೂಡಲೇ ಸರ್ಕಾರ ಪೋತ್ಸಾಹಧನವಲ್ಲದೆ, ಪ್ರತೀ ಲೀಟರ್ ಹಾಲಿಗೆ 40 ರೂ. ನೀಡಬೇಕು ಎಂದು ದ.ಕ ಹಾಲು ಒಕ್ಕೂಟದ ಮಾಜಿ ನಿರ್ದೇಶಕರು, ಉಡುಪಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
    ಸರ್ಕಾರ ತಕ್ಷಣ ಹೈನುಗಾರರ ವಿಷಯದಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಕರ್ನಾಟಕದ ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದು ಅಮುಲ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆ. ಹಾಗಾಗಿ ಸರ್ಕಾರ ಕರ್ನಾಟಕದ ಹೈನುಗಾರರ ಹಿತಾಸಕ್ತಿಯಿಂದ ಹಾಲಿನ ದರವನ್ನು ಹೆಚ್ಚು ಮಾಡುವುದರ ಮೂಲಕ ಹೈನುಗಾರರನ್ನು, ನಂದಿನಿಯನ್ನು ಉಳಿಸಿಕೊಳ್ಳಬೇಕೆಂದು ಸಬ್ಲಾಡಿ ಎನ್.ಮಂಜಯ್ಯ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

  • ಕುಂದಾಪುರ :ಸನತ್ ರತ್ನಾಕರ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

    ಕುಂದಾಪುರ :ಸನತ್ ರತ್ನಾಕರ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಸನತ್ ಆರ್. ಶೆಟ್ಟಿ, ತೇರ್ಗಡೆಯಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಕೋಟ ಮೂಡುಗಿಳಿಯಾರು ಬಡಾಮನೆ ರತ್ನಾಕರ ಜಿ. ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ. ಸತನ್ ಶೆಟ್ಟಿಯವರ ಇಬ್ಬರು ಹಿರಿಯ ಸಹೋದರರು ವೈದ್ಯರಾಗಿದ್ದು, ಕೊರೊನಾ ಸಂದರ್ಭ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರಿಂದ ಪ್ರಶಂಸಗೆ ಪಾತ್ರರಾಗಿದ್ದಾರೆ. ರತ್ನಾಕರ ಜಿ. ಶೆಟ್ಟಿಯವರು ಬಂಟರ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿಯಲ್ಲೂ, ಮಾತೃಭೂಮಿ ಕೋ ಆಪ್ ಕ್ರೆಡಿಟ್ ಸೊಸೈಯಲ್ಲಿ  ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡೊಂಬಿವಲಿ ಅಯ್ಯಪ್ಪ ಮಂದಿರದ ಹ ಸ್ಥಾಪಕ ಸದಸ್ಯ, ಜೀರ್ಣೋದ್ಧಾರ ಸಮತಿಯ ಅಧ್ಯಕ್ಷ, ವರ್ತಕನಗರ ಕನ್ನಡ  ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಥಾಣೆ ಬಂಟರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ, ಹಲವಾರು ಸಂಘ ,ಹುಟ್ಟೂರ ಸಂಘಸಂಸ್ಥೆಗಳಲ್ಲೂ ಗುರುತಿಸಿಕೊಂಡಿರುತ್ತಾರೆ.

  • ಬೈಂದೂರು : ಚಿತ್ತೂರು ಸರ್ಕಾರಿ ಶಾಲೆಯ ವಠಾರದಲ್ಲಿ ವನಮಹೋತ್ಸವ

    ಬೈಂದೂರು : ಚಿತ್ತೂರು ಸರ್ಕಾರಿ ಶಾಲೆಯ ವಠಾರದಲ್ಲಿ ವನಮಹೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು : ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

    ಅರಣ್ಯ ಇಲಾಖೆ ಕುಂದಾಪುರ ವಲಯದ ವಂಡ್ಸೆ ಘಟಕದ ನೇತೃತ್ವದಲ್ಲಿ ಸಸಿ ವಿತರಿಸುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಪೂಜಾರಿ ಉದ್ಘಾಟಿಸಿದರು.

    ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಉಪ ವಲಯ ಅರಣ್ಯಾಧಿಕಾರಿ ಆನಂದ ಬಳೆಗಾರ, ಗಸ್ತು ಅರಣ್ಯ ಪಾಲಕರಾದ ಮಂಜುನಾಥ ಗಾಣಿಗ, ರಾಘವೇಂದ್ರ ಮತ್ತು ಸಂಘ-ಸಂಸ್ಥೆಯ ವಿವಿಧ ಪದಾಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು.

  • ಕೋಟ :ಸಿ.ಎ ಅಂತಿಮ ಪರೀಕ್ಷೆಯಲ್ಲಿ ಸಚಿನ್ ಶೆಟ್ಟಿ ತೇರ್ಗಡೆ

    ಕೋಟ :ಸಿ.ಎ ಅಂತಿಮ ಪರೀಕ್ಷೆಯಲ್ಲಿ ಸಚಿನ್ ಶೆಟ್ಟಿ ತೇರ್ಗಡೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಐ.ಸಿ.ಎ.ಐ ನಡೆಸಿದ ಈ ಬಾರಿಯ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶವಾದ ಬೇಳೂರಿನ ನಿವಾಸಿ ಸಚಿನ್ ಶೆಟ್ಟಿ ತೇರ್ಗಡೆಯಾಗಿದ್ದಾರೆ. ಸಿ.ಎ ವಿದ್ಯಾಭ್ಯಾಸದ ಪ್ರತಿಯೊಂದು ಹಂತಕ್ಕೂ ಯಾವುದೇ ತರಬೇತಿ ಪಡೆಯದೆ ತನ್ನ ಬಡತನದ ನಡುವೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ . ಕೋಟದ ವಿವೇಕ ಪದವಿ ಪೂರ್ವ ಕಾಲೇಜು ,ಬ್ರಹ್ಮಾವರ ಬಿ. ಡಿ ಶೆಟ್ಟಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಇವರು ಬೇಳೂರಿನ ಉಷಾ ಉದಯ ಕುಮಾರ ಶೆಟ್ಟಿಯವರ ಪುತ್ರ.

  • ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ ನೂತನ ಅಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಕೊಮೆ, ಅಚ್ಲಾಡಿ ಆಯ್ಕೆ

    ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ ನೂತನ ಅಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಕೊಮೆ, ಅಚ್ಲಾಡಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನೂತನ ಅಧ್ಯಕ್ಷರಾಗಿ ಸುರೇಂದ್ರ ಶೆಟ್ಟಿ ಕೊಮೆ, ಅಚ್ಲಾಡಿ ಇವರು ಆಯ್ಕೆಯಾದರು. ಇವರು ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘ ಶಿರಿಯಾರ ಇದರ ನಿರ್ದೇಶಕರಾಗಿ, ವಾಸುದೇವ ಮೋಟಾರ್ಸ್ ಇದರ ಮಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ನೂತನ ಕಾರ್ಯದರ್ಶಿಯಾಗಿ ಮಧುವನ ಯುವಕ ಮಂಡಲದ ಕೋಶಾಧಿಕಾರಿ ಮಹೇಂದ್ರ ಆಚಾರ್ ಮದುವನ ಮತ್ತು ನೂತನ ಕೋಶಾಧಿಕಾರಿಯಾಗಿ ವಸಂತ್.ವಿ.ಶೆಟ್ಟಿ ಸೂರಿಬೆಟ್ಟು, ಅಚ್ಲಾಡಿ ಇವರು ಆಯ್ಕೆಯಾಗಿದ್ದಾರೆ.

    ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಪ್ರಥಮ ಉಪಾಧ್ಯಕ್ಷರಾಗಿ ಬಿ.ಬಿ ಪ್ರವೀಣ್ ಹೆಗ್ಡೆ ಉಪ್ಲಾಡಿ-ಬನ್ನಾಡಿ, ಮೆಂಬರ್‍ಶಿಪ್ ಕಮಿಟಿ ಚೇರ್ಮನ್ ರಾಜಾರಾಮ್ ಶೆಟ್ಟಿ ಕಲ್‍ಕಟ್ಟೆ, ಸರ್ವೀಸ್ ಕಮಿಟಿ ಚೇರ್ಮನ್ ಅಜಿತ್ ಶೆಟ್ಟಿ ಕೊತ್ತಾಡಿ, ಎಲ್.ಸಿ.ಐ.ಎಫ್. ಚೇರ್ಮನ್ ಶ್ರೀಧರ್ ಆರ್ ಶೆಟ್ಟಿ ಉಪ್ಲಾಡಿ, ಕ್ಲಬ್ ಅಡ್ಮಿನಿಸ್ಟ್ರೇಟರ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಕ್ಲಬ್ ಮಾರ್ಕೇಟಿಂಗ್ & ಕಮ್ಯುನಿಕೇಶನ್ ಚೈರ್‍ಪರ್ಸನ್ ಬನ್ನಾಡಿ ಶರತ್ ಶೆಟ್ಟಿ, ಟೈಲ್ ಟ್ವಿಸ್ಟರ್ ಸುಧಾಕರ್ ಶೆಟ್ಟಿ ಅಚ್ಲಾಡಿ ಹಾಗೂ ಲಯನ್ ಟ್ಯಾಮರ್ ಸೂರ್ಯಕಾಂತ್ ಶೆಟ್ಟಿ ಬನ್ನಾಡಿ ಆಯ್ಕೆಯಾದರು.

    ಬೋರ್ಡ್ ಆಫ್ ಡೈರೆಕ್ಟರ್ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ, ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಯಾಳಕ್ಲು ಚಂದ್ರಶೇಖರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ, ಉಪ್ಲಾಡಿ ಸುಗುಣಾಕರ ಶೆಟ್ಟಿ, ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ, ಬನ್ನಾಡಿ ಪ್ರಭಾಕರ ಶೆಟ್ಟಿ ಮತ್ತು ರಾಜೀವ್ ಶೆಟ್ಟಿ ಅಚ್ಲಾಡಿ ಆಯ್ಕೆಯಾಗಿರುತ್ತಾರೆ ಎಂದು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಸ್ಥಾಪಕ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

     

  • ಉಡುಪಿ‌: ನಾಳೆ(ಜು.7) ಜಿಲ್ಲೆಯಲ್ಲಿ ಶಾಲೆ ಮತ್ತು ಪಿಯು ಕಾಲೇಜಿಗೆ ರಜೆ ಘೋಷಣೆ

    ಉಡುಪಿ‌: ನಾಳೆ(ಜು.7) ಜಿಲ್ಲೆಯಲ್ಲಿ ಶಾಲೆ ಮತ್ತು ಪಿಯು ಕಾಲೇಜಿಗೆ ರಜೆ ಘೋಷಣೆ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ: ಜಿಲ್ಲೆಯಲ್ಲಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜು.7 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.

    ನಾಳೆ ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲೆಗಳಿಂದ ಹಿಡಿದು ಪದವಿ ಪೂರ್ವ ಕಾಲೇಜುಗಳ ತನಕ ರಜೆ ಘೋಷಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಆದೇಶ ಹೊರಡಿಸಿದ್ದಾರೆ.

  • ಪಂಚವರ್ಣದ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 27ನೇ ಸಾಧಕ ಶಕ್ತಿಯಾಗಿ ಪಾಂಡೇಶ್ವರ ಮೊಹನ್ ಪೂಜಾರಿ ಆಯ್ಕೆ

    ಪಂಚವರ್ಣದ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 27ನೇ ಸಾಧಕ ಶಕ್ತಿಯಾಗಿ ಪಾಂಡೇಶ್ವರ ಮೊಹನ್ ಪೂಜಾರಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಕೋಟ ಹೋಬಳಿ ವ್ಯಾಪ್ತಿಯಲ್ಲಿ ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 27ರ ಸಂಭ್ರಮ ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಬರುವ ಜು.9ರ ಬೆಳಿಗ್ಗೆ 10.ಗ ನಡೆಯಲಿದೆ.

    ಈ ಬಾರಿ ಸಾಸ್ತಾನದ ಸಾಂಪ್ರಾದಾಯಿಕ ಕೃಷಿ ಕಾಯಕ ಜೀವಿ ಪಾಂಡೇಶ್ವರ ಮೂಡಹಡು ಮೋಹನ್ ಪೂಜಾರಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಗುವುದು ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.