Category: ಸುದ್ದಿ

  • ಕುಂದಾಪುರ: ಇಂಗ್ಲೀಷ್ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪೋಷಕರಿಂದ ಪ್ರತಿಭಟನೆ

    ಕುಂದಾಪುರ: ಇಂಗ್ಲೀಷ್ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪೋಷಕರಿಂದ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಸ.ಹಿ.ಪ್ರಾ. ಶಾಲೆಯ ಇಂಗ್ಲೀಷ್ ಶಿಕ್ಷಕರು ಹೆಚ್ಚುವರಿಯಾಗಿದ್ದು ಇವರ ವರ್ಗಾವಣೆಗೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜೂನ್ 21ರ ಬುಧವಾರ ಇಂಗ್ಲಿಷ್ ಶಿಕ್ಷಕರ‌ ವರ್ಗಾವಣೆ ವಿರೋಧಿಸಿ ಪ್ರತಿಭಟನೆಯೂ ನಡೆಯಿತು.

    ತೊಂಬಟ್ಟು ಶಾಲೆಯಲ್ಲಿ 1ರಿಂದ 8ನೇ ತರಗತಿಗಳಿದ್ದು ಮುಖ್ಯ ಶಿಕ್ಷಕರು ಸೇರಿ 4ಜನ ಶಿಕ್ಷಕರ ಹುದ್ದೆಗಳು ಮಂಜೂರಾಗಿತ್ತು. ಆದರೆ ಸುಮಾರು 4-5 ವರ್ಷಗಳಿಂದ ಮುಖ್ಯ ಶಿಕ್ಷಕರೇ ಇಲ್ಲ. ಅಲ್ಲದೇ ಇರುವ ಮೂರು ಸಹ ಶಿಕ್ಷಕರ ಪೈಕಿ ಇಂಗ್ಲೀಷ್ ಶಿಕ್ಷಕರನ್ನು ವರ್ಗಾಯಿಸುವುದು ಸರಿಯಲ್ಲ ಎಂದು ಪೋಷಕರು ಆಗ್ರಹಿಸಿದ್ದಾರೆ.

    ಈ ಹಿಂದೆ ಈ ಶಾಲೆಯಲ್ಲಿ 80-90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಶಿಕ್ಷಕರ ಕೊರತೆಯಿಂದ ಮಕ್ಕಳ ಸಂಖ್ಯೆ ಕುಸಿದಿದೆ ಎಂದಿರುವ ಪೋಷಕರು, ತೊಂಬಟ್ಟು ತಾಲೂಕು ಕೇಂದ್ರದಿಂದ 50 ಕಿ.ಮೀಗೂ ಹೆಚ್ಚು ದೂರದಲ್ಲಿದ್ದು ಮೂಲ ಸೌಲಭ್ಯ ವಂಚಿತ ಕುಗ್ರಾಮವಾಗಿದೆ. ಕೃಷಿಯೇ ಪ್ರಧಾಬವಾಗಿರುವ ಇಲ್ಲಿನ ಜನರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಜಾಗತೀಕ ಪೈಪೋಟಿಗೆ ಅಗತ್ಯವಾಗಿರುವ ಇಂಗ್ಲೀಷ್ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಬಾರದು ಮತ್ತು ಖಾಲಿ ಇರುವ ಮುಖ್ಯ ಶಿಕ್ಷಕ ಹುದ್ದೆಯನ್ನು ಭರ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಉಡುಪಿ ಡಿಡಿಪಿಐಯವರಿಗೆ ಈ ಬಗ್ಗ ಮನವಿ ಸಲ್ಲಿಸಲಾಯಿತು.

  • ಉತ್ತಮ ದೈಹಿಕ, ಮಾನಸಿಕ, ಆರೋಗ್ಯಕ್ಕೆ ಯೋಗಾಭ್ಯಾಸ ಒಳಿತು: ಶಾಸಕ ಯಶ್‌ಪಾಲ್ ಸುವರ್ಣ

    ಉತ್ತಮ ದೈಹಿಕ, ಮಾನಸಿಕ, ಆರೋಗ್ಯಕ್ಕೆ ಯೋಗಾಭ್ಯಾಸ ಒಳಿತು: ಶಾಸಕ ಯಶ್‌ಪಾಲ್ ಸುವರ್ಣ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಯೋಗಾಭ್ಯಾಸದಿಂದ ಮನುಷ್ಯನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಮಾಡಬೇಕೆಂದು ಶಾಸಕ ಯಶ್‌ಪಾಲ್ ಸುವರ್ಣ ಕರೆ ನೀಡಿದರು..

    ಅವರು ಇಂದು ನಗರದ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇವರ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

    ಯೋಗಾಭ್ಯಾಸವು ಅನಾರೋಗ್ಯ ಹಾಗೂ ಹೆಚ್ಚಿನ ದೈಹಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಯೋಗಾಭ್ಯಾಸವು ವಿಶ್ವದಲ್ಲಿಯೇ ಹೆಚ್ಚಿನ ಮಹತ್ವ ಪಡೆದಿದ್ದು, ಅನೇಕ ದೇಶಗಳಲ್ಲಿ ಜನರು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ನಾವು ಕಾಣಬಹುದಾಗಿದೆ ಎಂದರು.

    ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಮಾತನಾಡಿ, ಸದೃಢ ಆರೋಗ್ಯಕ್ಕೆ ಯೋಗ ತುಂಬಾ ಸಹಕಾರಿಯಾಗಿದೆ. ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಯೋಗಾಭ್ಯಾಸದ ಬಗ್ಗೆ ಇತ್ತು. ಆದರೆ ಆಧುನಿಕ ಜೀವನ ಶೈಲಿಯಿಂದಾಗಿ ಯೋಗಾಭ್ಯಾಸ ಕುಂಠಿತವಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಮಹತ್ವವನ್ನು ಅರಿತು ಜನರು, ಯೋಗಾಭ್ಯಾಸಕ್ಕೆ ಒತ್ತು ಕೊಡುತ್ತಿರುವುದು ಒಂದು ಉತ್ತಮ ಕಾರ್ಯ. ಪ್ರತಿನಿತ್ಯ ಇದರ ಅಭ್ಯಾಸ ಮಾಡುವುದು ಒಳಿತು ಎಂದರು.
    ಜಿಲ್ಲೆಯಲ್ಲಿ ಅನೇಕ ಸಂಘ-ಸಂಸ್ಥೆಗಳು ಜನರಿಗೆ ಉತ್ತಮ ಯೋಗಾಭ್ಯಾಸದ ಶಿಬಿರಗಳನ್ನು ನಡೆಸುವುದರೊಂದಿಗೆ ಹೆಚ್ಚಿನ ಜನರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಒಂದು ಅಭಿನಂದನಾರ್ಹ ಕಾರ್ಯ ಎಂದರು.

    ಸಭಾ ಕಾರ್ಯಕ್ರಮಕ್ಕೂ ಮುನ್ನ ಸುಮಾರು 45 ನಿಮಿಷಗಳ ಯೋಗದ ಪ್ರಾತ್ಯಕ್ಷಿಕೆ ನಡೆಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ್, ಜಿಲ್ಲಾ ಸರ್ಜನ್ ಡಾ. ಸುದೇಶ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಕುಂದಾಪುರ :ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಂದಾಪುರ – ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ‘ವಸುದೈವ ಕುಟುಂಬಕಂ’

    ಕುಂದಾಪುರ :ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಕುಂದಾಪುರ – ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ‘ವಸುದೈವ ಕುಟುಂಬಕಂ’

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕುಂದಾಪುರ ಇಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ವಸುದೈವ ಕುಟುಂಬಕಂ ಆಚರಿಸಲಾಯಿತು.

    ಕುಂದಾಪುರದ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿಲ್ಪಾ ಅವರು ಮಾತನಾಡಿ ಯೋಗಭ್ಯಾಸದಲ್ಲಿ ಬರುವ ಉಸಿರಾಟ ಮತ್ತು ಸಮತೋಲನ ಆಸನಗಳು ಮೆದುಳಿನ ಎಲ್ಲಾ ಕಡೆಗಳಲ್ಲೂ ಸಮತೋಲನ ಕಾಪಾಡುತ್ತದೆ. ಇಂದು ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ವಸುದೈವ ಕುಟುಂಬಕಂ ಎಂಬ ವಿಷಯದ ಮೇಲೆ ಒಗ್ಗಟ್ಟಾಗಿ ಯೋಗ ಮಾಡುತ್ತಿದ್ದಾರೆ ಎಂದು ವಸುದೈವ ಕುಟುಂಬಕಂ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

    ನಂತರ ವಿವಿಧ ಯೋಗ ಅಭ್ಯಾಸಗಳನ್ನ ವಿದ್ಯಾರ್ಥಿಗಳಿಗೆ ಮಾಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ರವೀಂದ್ರ ನಾಯಕ್ ಇವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಕಿರಣ ಹೆಗ್ಡೆಯವರು ವಿದ್ಯಾರ್ಥಿಗಳಿಗೆ ಯೋಗ ದಿನದ ಮಹತ್ವವನ್ನು ತಿಳಿಸುತ್ತಾ ಯೋಗವು ನಮ್ಮಲ್ಲಿರುವ ಭಾವವನ್ನು ಬಲಪಡಿಸುತ್ತದೆ ಆಂತರಿಕ ದೃಷ್ಟಿಯನ್ನು ವಿಸ್ತರಿಸುತ್ತದೆ. ಸಹಜೀವಿಗಳ ಜೊತೆ ಐಕ್ಯತೆ ಮತ್ತು ಪ್ರೀತಿಯನ್ನು ಬೆಳೆಸುತ್ತದೆ ಎಂದರು ದೈಹಿಕ ಶಿಕ್ಷಣ ಶಿಕ್ಷಕರಾದ ಉದಯ ಮಡಿವಾಳ ಎಂ ಕಾರ್ಯಕ್ರಮವನ್ನು ಸಂಘಟಿಸಿದ್ದರು.

  • ಕುಂದಾಪುರ :ಅಶೋಕ್ ಜೋಗಿಯವರಿಗೆ ಪಿಎಚ್ ಡಿ ಪದವಿ

    ಕುಂದಾಪುರ :ಅಶೋಕ್ ಜೋಗಿಯವರಿಗೆ ಪಿಎಚ್ ಡಿ ಪದವಿ

    ಕುಂದಾಪುರ ಮಿರರ್ ಸುದ್ದಿ…
    ಕೋಟೇಶ್ವರ: ಭತ್ತ ಬೆಳೆಯ ಆರ್ಥಿಕ ವಿಶ್ಲೇಷಣೆ ಕರ್ನಾಟಕ ರಾಜ್ಯದಲ್ಲಿ ಒಂದು ತುಲನಾತ್ಮಕ ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯವು ಅಶೋಕ್ ಜೋಗಿ ಅವರಿಗೆ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.ಇವರು ಎಂಬಿಎ ಮತ್ತು ಎಂ.ಫಿಲ್ ಸ್ನಾತಕೋತ್ತರ ಪದವಿ ಪಡೆದಿದ್ದು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಪ್ರಸ್ತುತ ಇವರು ಬ್ಯಾರಿಸ್ ಸಮೂಹ ಸಂಸ್ಥೆಯಲ್ಲಿ ವಾಣಿಜ್ಯ ಮತ್ತು ವ್ಯವಹಾರ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಲ್ಲಮಂಡ್ಕೂರು ಲಕ್ಷ್ಮಣ ಜೋಗಿ ಮತ್ತು ಲಕ್ಷ್ಮೀ ಜೋಗಿ ಅವರ ಪುತ್ರರಾಗಿದ್ದಾರೆ.

  • ತೆಕ್ಕಟ್ಟೆ- ಸ್ವಸಹಾಯ ಸಂಘ ಉದ್ಘಾಟನೆ

    ತೆಕ್ಕಟ್ಟೆ- ಸ್ವಸಹಾಯ ಸಂಘ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುಂದಾಪುರ, ತಾಲೂಕಿನ ತೆಕ್ಕಟ್ಟೆ ವಲಯ ಕಾರ್ಯ ಕ್ಷೇತ್ರದ ತೆಕ್ಕಟ್ಟೆ ಬಿ ಒಕ್ಕೂಟದಲ್ಲಿ ನೂತನವಾಗಿ ಮಾಣಿಕ್ಯ ಸ್ವಸಹಾಯ ಸಂಘ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಮಂಜುನಾಥ್ ದೀಪ ಬೆಳಗಿಸುವ ಮೂಲಕ ಮಾಣಿಕ್ಯ ಸಂಘವನ್ನು ಉದ್ಘಾಟಿಸಿದರು. ವಲಯದ ಮೇಲ್ವಿಚಾರಕರಾದ ರಾಧಿಕಾ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಸೇವಾ ಪ್ರತಿನಿಧಿಯಾದ ಸಾರಿಕಾ ವಿದ್ಯಾಶ್ರೀ ಅಮೃತ, ಸಂಘದ ಪ್ರಮುಖರಾದ ವಿಘ್ನೇಶ್ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

  • ಕುಂದಾಪುರ :ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಶಾಲಾಸಂಘಗಳ ಪಾತ್ರ ಮಹತ್ತರವಾದುದು – ಜಯಶೀಲ ಶೆಟ್ಟಿ

    ಕುಂದಾಪುರ :ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಶಾಲಾಸಂಘಗಳ ಪಾತ್ರ ಮಹತ್ತರವಾದುದು – ಜಯಶೀಲ ಶೆಟ್ಟಿ

    ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಶಿಕ್ಷಣವೆನ್ನುವುದು ಪ್ರಾಯೋಗಿಕ ಮತ್ತು ಅನುಭವಾತ್ಮಕವಾಗಬೇಕು, ಇದರಿಂದ ಮೌಲ್ಯಾದರ್ಶಗಳು ಮತ್ತು ವರ್ತನೆ ಬದಲಾವಣೆಯ ಅನ್ವಯ ಸಾಧ್ಯವಾಗುತ್ತದೆ. ಶಾಲಾ ಕಾಲೇಜುಗಳಲ್ಲಿರುವ ವಿವಿಧ ವಿಷಯವಾರು ಸಂಘಗಳ ಸಾಂಘಿಕ ಸಹಪಠ್ಯ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಹುದುಗಿದ ಸೃಜನಶೀಲತೆ ಹೊರಹೊಮ್ಮುತ್ತದೆ, ಉನ್ನತ ವ್ಯಕ್ತಿತ್ವ ರೂಪುಗೊಳ್ಳುತ್ತದೆ, ತನ್ಮೂಲಕ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ವಿವಿಧ ಸಂಘಗಳ ಪಾತ್ರ ಮಹತ್ತರವಾದುದು ಎಂದು ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಸ್ಮಾರಕ ಕನ್ನಡ ಪ್ರೌಢಶಾಲಾ ಮುಖ್ಯಸ್ಥರಾದ ಜಯಶೀಲ ಶೆಟ್ಟಿ ಹೇಳಿದರು. ಅವರು ಬ್ಯಾರೀಸ್ ಬಿ.ಎಡ್ ಕಾಲೇಜಿನಲ್ಲಿ ಆಯೋಜಿಸಲಾದ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು.

    ಪ್ರಾಧ್ಯಾಪಕರಾದ ಅನಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಿರಿಯ ಪ್ರಾಧ್ಯಾಪಕರಾದ ಪ್ರವೀಣ್ ಕುಮಾರ್ ಕೆ.ಪಿ ವಿವಿಧ ಸಂಘಗಳ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಪ್ರಾಧ್ಯಾಪಕರಾದ ಅಜಿತ್ ಕಾಮತ್ ಸಂಘಗಳ ಪರಿಚಯಾತ್ಮಕ ಕಾರ್ಯಕ್ರಮ ನಡೆಸಿಕೊಟ್ಟರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು,

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸುರೇಶ್ ಶೆಟ್ಟಿ, ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು, ಪ್ರಾಧ್ಯಾಪಕರಾದ ವೆಂಕಟೇಶ್ ಎಸ್ ಸ್ವಾಗತಿಸಿದರು, ಶಂಶಾದ್ ವಂದಿಸಿದರು, ಬಿ.ಎಡ್ ಪ್ರಶಿಕ್ಷಣಾರ್ಥಿ ಸುಧಾ ನಿರೂಪಿಸಿದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ನಿರ್ಮಲ ನಗರ ಅಭಿಯಾನ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ನಿರ್ಮಲ ನಗರ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಐಸಿರಿ ಫೌಂಡೇಶನ್ ಮತ್ತು ಶ್ರೀ ಕುಂತಿಅಮ್ಮ ಸೇವಾ ಬಳಗ, ತಲ್ಲೂರು ಇವರ ಸಹಭಾಗಿತ್ವದಲ್ಲಿ ನಡೆದ ನಿರ್ಮಲ ನಗರ ಅಭಿಯಾನ ಕಾರ್ಯಕ್ರಮಕ್ಕೆ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಭೀಮವ್ವ ಚಾಲನೆ ನೀಡಿದರು.

    ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಶ್ರೀ ಕುಂತಿಅಮ್ಮ ಸೇವಾ ಬಳಗದ ಸದಸ್ಯರು ಸೇರಿ ಮಹಾಲಿಂಗೇಶ್ವರ ದೇವಸ್ಥಾನದಿಂದ ತಲ್ಲೂರು ಪೇಟೆಯ ಮೂಲಕ ಶ್ರೀ ಕುಂತಿಅಮ್ಮ ದೇವಸ್ಥಾನದವರೆಗೆ ಸ್ವಚ್ಛತೆ ಕೈಗೊಂಡರು.

    ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಿರೀಶ್ ನಾಯಕ್, ಕುಂತಿಅಮ್ಮ ಸೇವಾ ಬಳಗದ ಅಧ್ಯಕ್ಷ ಪ್ರಶಾಂತ್, ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಉಪಸ್ಥತರಿದ್ದರು.

  • ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿ ಹರೀಶ್ ಆರ್. ಅಧಿಕಾರ ಸ್ವೀಕಾರ

    ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿ ಹರೀಶ್ ಆರ್. ಅಧಿಕಾರ ಸ್ವೀಕಾರ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ : ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿ ಹರೀಶ ಆರ್. ಸೋಮವಾರ ಅಧಿಕಾರ ಸ್ವೀಕರಿಸಿದರು.

    ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿದ್ದ ವಿನಯ್ ಕೊರ್ಲಹಳ್ಳಿ ಅವರು ಹರೀಶ್ ಆರ್. ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ವಿನಯ್ ಕೊರ್ಲಹಳ್ಳಿ ಕುಂದಾಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಕಡೂರು ಸಂಚಾರ ಠಾಣೆಯ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್ ಆರ್. ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.

  • ಕೋಟ ಮಣೂರು ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಸೀಯಾಳಾಭಿಷೇಕ

    ಕೋಟ ಮಣೂರು ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಸೀಯಾಳಾಭಿಷೇಕ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಮಣೂರು ಶ್ರೀ ಹೇರಂಬ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಳೆ ಬೆಳೆಗಾಗಿ ಪ್ರಾರ್ಥಿಸಿ ಸೀಯಾಳಾಭಿಷೇಕ ಕಾರ್ಯಕ್ರಮ ಸಕಲ ಧಾರ್ಮಿಕ ಕಾರ್ಯದ ನಡುವೆ ನೆರವೆರಿತು.

    ಪೂರ್ವಾಹ್ನ 8.ಗ ಆರಂಭಗೊಂಡ ಅಭಿಷೇಕ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ನೇತ್ರತ್ವದಲ್ಲಿ ಆರಂಭಗೊಂಡ ಸೀಯಾಳ ಅಭಿಷೇಕ 11ಗ.ವೆರೆಗೆ ನಡೆಯಿತು.
    ಭಕ್ತ ಸಮುದಾಯ ಶ್ರೀದೇವರಿಗೆ ಅರ್ಪಿಸಿದ ಸೀಯಾಳ ಅರ್ಚಕರು ಒಂದೊಂದಾಗಿ ಶ್ರೀ ದೇವರಿಗೆ ಅಭಿಷೇಕದ ಮೂಲಕ ಸಮರ್ಪಿಸಿದರು. ದೇವಳದ ಅರ್ಚಕರಾದ ರವಿ ಐತಾಳ್ ತಮ್ಮ ತಂಡದವರೊಂದಿಗೆ ಈ ಕೈಂಕರ್ಯದಲ್ಲಿ ಭಾಗಿಯಾದರು.

    ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ, ಗ್ರಾಮದ ಭಕ್ತಾಧಿಗಳು ಉಪಸ್ಥಿತರಿದ್ದರು.

  • ಕೋಟತಟ್ಟು – ಕಲ್ಮಾಡಿ ಅಂಗನವಾಡಿಯಲ್ಲಿ ಪುಟಾಣಿಗಳ ಉತ್ಸವ

    ಕೋಟತಟ್ಟು – ಕಲ್ಮಾಡಿ ಅಂಗನವಾಡಿಯಲ್ಲಿ ಪುಟಾಣಿಗಳ ಉತ್ಸವ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಇಲ್ಲಿನ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ಆಚರಿಸಲಾಯಿತು.

    ಕೋಟದ ಅಮೃತೇಶ್ವರಿ ದೇವಸ್ಥಾನದ ಟ್ರಸ್ಟಿ ಸುಬ್ರಾಯ ಆಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕ ವಾತಾವರಣ ಸಿಗುತ್ತಿದೆ ಇಲ್ಲಿ ಕಾರ್ಯಕರ್ತೆಯ ಕ್ರೀಯಾಶೀಲತೆ ಅಷ್ಟೆ ಪ್ರಮುಖವಾಗಿದೆ ಈ ದಿಸೆಯಲ್ಲಿ ಇಲ್ಲಿನ ಕಾರ್ಯವೈಕರಿಯನ್ನು ಶ್ಲಾಘಿಸಿದ ಶ್ರೀಯುತರು, ಕಲ್ಮಾಡಿ ಅಂಗನವಾಡಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪುಟಾಣಿಗಳಿಗೆ ನೈಜತೆ ಅಂಗನವಾಡಿಯಿಂದ ಪ್ರಾರಂಭಗೊಳ್ಳುತ್ತದೆ. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಕರೆನೀಡಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಮೀನಾಕ್ಷಿ ಯೋಜನೆಗಳ ಬಗ್ಗೆ ಪರಿಚಯಿಸಿದರು. ಪ್ರಸ್ತುತ ಗ್ರಹಲಕ್ಷ್ಮೀ ಯೋಜನೆ ಬಗ್ಗೆ ಮಾಹಿತಿ ನೀಡಿದರು.

    ಪುಟಾಣಿಗಳಿಗೆ ಭವ್ಯ ಸ್ವಾಗತ
    ಕಾರಂತ ಥೀಂ ಪಾರ್ಕ್‍ನಲ್ಲಿರುವ ಕಲ್ಮಾಡಿ ಅಂಗನವಾಡಿ ವಿಶಿಷ್ಟ ರೀತಿಯ ಕಾರ್ಯಕ್ರಮಗಳಿಂದ ಪ್ರಸಿದ್ಧಿ ಪಡೆದಿದೆ ಅದರಂತೆ ಅಂಗನವಾಡಿ ಉತ್ಸವದ ಹಿನ್ನಲ್ಲೆಯಲ್ಲಿ ಪುಟಾಣಿಗಳನ್ನು ಪುಷ್ಭ ಸಿಂಚನದ ಮೂಲಕ ಸ್ವಾಗತಿಸಿ, ಸಿಹಿ ಹಂಚಿ ಬರಮಾಡಿಕೊಳ್ಳಲಾಯಿತು. ಅಲ್ಲದೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

    ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳಾದ ರಾಘವೇಂದ್ರ ಪ್ರಭು ಕೋಟ, ಎ.ಕೆ ಐತಾಳ್ ಸಾಲಿಗ್ರಾಮ, ಭಾಸ್ಕರ ದೇವಾಡಿಗ, ಅಂಗನವಾಡಿ ಹೊಸ ರೂಪಕ್ಕೆ ಹೊಸ ಬಾಷ್ಯ ಬರೆದ ಗಿರೀಶ್ ವಕ್ವಾಡಿ, ಮೊದಲಾದವರಿಗೆ ಸ್ಮರಿಸಿ ಶಾಲು ಹೊದಿಸಿ ಪುಟಾಣಿಗಳಿಂದ ಹೂಗುಚ್ಛ ಅಭಿನಂದಿಸಲಾಯಿತು. ಪಂಚಾಯತ್ ಸದಸ್ಯರಾದ ಸರಸ್ವತಿ, ಬಾಲ ವಿಕಾಸ ಸಮಿತಿ ಅಧ್ಯಕ್ಷ ವನಜ, ರಾಘವೇಂದ್ರ ಪ್ರಭು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಪೋಷಕರು, ಬಾಲವಿಕಸ ಸಮಿತಿ ಸದಸ್ಯರು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಅಂಗನವಾಡಿ ಟೀಚರ್ ಜಯಲಕ್ಷ್ಮೀ ನಿರೂಪಿಸಿದರು.