ಬೈಂದೂರು :ನನ್ನ ಪೇಜ್ ನನ್ನ ಜವಾಬ್ದಾರಿ : ಬೈಂದೂರು ಬಿಜೆಪಿ ಮಂಡಲ ವತಿಯಿಂದ ವಿನೂತ‌ ಕಾರ್ಯಕ್ರಮಕ್ಕೆ ಚಾಲನೆ

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಮಂಡಲದ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನನ್ನ ಪೇಜ್ ನನ್ನ ಜವಾಬ್ದಾರಿ ವಿಶೇಷ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ.

ಮಂಡಲದ ಎಲ್ಲ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬುಧವಾರ ಉಪ್ಪುಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೀಪಕ್ ಕುಮಾರ್ ಶೆಟ್ಟಿಯವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮವನ್ನು ನಿತ್ಯವೂ ಆಯಾ ಶಕ್ತಿ ಕೇಂದ್ರದಲ್ಲಿ ನಡೆಸಲಾಗುತ್ತದೆ. ಬೆಳಗ್ಗೆ ಅಥವಾ ಸಂಜೆ ಕಾರ್ಯಕ್ರಮ ನಡೆಸಿ ಅದರ ಅಪ್ಡೇಟ್ ಅಥವಾ ಫೋಟೊ ವನ್ನು ಮಂಡಲಕ್ಕೆ ಕಳುಹಿಕೊಡಬೇಕು ಎಂದು ಪ್ರಮುಖರಿಗೆ ತಿಳಿಸಿದರು. ಎಲ್ಲ ಬೂತ್ ಗಳಲ್ಲೂ ಪೇಜ್ ಪ್ರಮುಖರ ನೇಮಕ ಆಗಬೇಕು ಮತ್ತು ಅವರ ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ನಂತರ ಅವರು ತಮ್ಮ ಜವಾಬ್ದಾರಿಗಳ ಬಗ್ಗೆ ಅರಿತು ಚುನಾವಣಾ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ 1 ಲಕ್ಷಕ್ಕೂ ಅಧಿಕ ಲೀಡ್ ನೀಡಲು ಹಲವು ಕಾರ್ಯಕ್ರಮ ಹಮ್ಮಿಕೊಂಡು ಪ್ರಚಾರ ಪ್ರಕ್ರಿಯೆ ನಡೆಯುತ್ತಿದೆ. ಅದರ ಒಂದು ಭಾಗವಾಗಿ ನನ್ನ ಪೇಜ್ ನನ್ನ ಜವಾಬ್ದಾರಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

ಈ ಕಾರ್ಯಕ್ರಮದ ಸಂಚಾಲಕರಾದ ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಂಡಲ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಮಂಡಲ ಖಜಾಂಚಿ ಗಣೇಶ್ ಗಾಣಿಗ, ಮಂಡಲ ಉಪಾಧ್ಯಕ್ಷ ರಮೇಶ್ ಪೂಜಾರಿ, ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಗನ್ನಾಥ ಮೊಗವೀರ, ಪ್ರಮುಖರಾದ ನಾಗರಾಜ, ಕರುಣ ಪೂಜಾರಿ, ಉಪ್ಪುಂದ ಗ್ರಾಮ ಪಂಚಾಯತಿಯ 10 ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು, ಕಾರ್ಯಕರ್ತರು ಸಭೆಯಲ್ಲಿದ್ದರು.

Comments

Leave a Reply

Your email address will not be published. Required fields are marked *

More posts