ಪರೋಪಕಾರವೇ ಬದುಕಿನ ಯಶಸ್ಸು : ಡಿಸಿ ಪ್ರಭುಲಿಂಗ
ಕುಂದಾಪುರ ಮಿರರ್ ಸುದ್ದಿ…
ಶಿರೂರು: ನಮ್ಮಲ್ಲಿರುವ ಐಶ್ವರ್ಯ, ಅಂತಸ್ತು ಹಾಗೂ ಕೀರ್ತಿ ಇದಾವುದು ಕೂಡ ಕೊನೆಯಲ್ಲಿ ಬರುವುದಿಲ್ಲ, ನಮ್ಮ ಸಮಾಜ ಸೇವೆ, ಪರೋಪಕಾರ ಮಾತ್ರವೇ ನಮ್ಮ ಜೀವನದ ದಾರಿಯಾಗಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕಾವಲಿಕಟ್ಟಿ ಐ.ಎ.ಎಸ್ ಹೇಳಿದರು. ಅವರು ಗೋರ್ಟೆ ಎಮ್.ಎಮ್.ರೇಸಾರ್ಟ್ ನಲ್ಲಿ ನಡೆದ ಕೋಸ್ಟಲ್ ಕರ್ನಾಟಕ ಎನ್.ಆರ್.ಐ ಪೋರಮ್ ಮೊಬೈಲ್ ಕ್ಲಿನಿಕ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಆರೋಗ್ಯ ಮತ್ತು ಶಿಕ್ಷಣ ಸಮರ್ಪಕವಾಗಿ ಸುಸ್ಥಿತಿಯಲ್ಲಿದ್ದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ.ಕೋವಿಡ್ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳುವುದೇ ಹರಸಾಹಸವಾಗಿತ್ತು. ಕೋಸ್ಟಲ್ ಕರ್ನಾಟಕ ಎನ್.ಆರ್.ಐ ಪೋರಮ್ ಮೊಬೈಲ್ ಕ್ಲಿನಿಕ್ ಯೋಜನೆಗಳ ಮೂಲಕ ಬಡ ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ ಎಂದರು.
ಶಿರೂರು ಅಸೋಸಿಯೇಷನ್ ಪ್ರಧಾನ ಪೋಷಕ ಮಣೆಗಾರ್ ಮೀರಾನ್ ಸಾಹೇಬ್ ಪ್ರಾಸ್ತಾವಿಸಿ, ನಾವೆಷ್ಟು ಸಮಯ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ್ದಾಗ ಈ ಸಮಾಜಕ್ಕೆ ಎನು ಕೊಡುಗೆ ನೀಡಿದ್ದೇವೆ ಎನ್ನುವುದು ಮುಖ್ಯ. ಕಷ್ಟದಲ್ಲಿರುವವರಿಗೆ ನೆರವಾಗುವ ಔದಾರ್ಯ ಪ್ರತಿಯೊಬ್ಬರಿಗೂ ಬೇಕು. ಮಾನವೀಯ ಸಂಬಂಧ ಮತ್ತು ಸಹಭಾಳ್ವೆ ಊರಿಗೆ ಹೆಸರು ನೀಡುತ್ತಿದೆ.ಇಂತಹ ಉತ್ತಮ ಕಾರ್ಯದಿಂದ ಎಲ್ಲರಿಗೂ ಆರೋಗ್ಯ ಸೇವೆ ದೊರೆಯುವಂತಾಗಲಿ ಎಂದರು.
ಕೋಸ್ಟಲ್ ಕರ್ನಾಟಕ ಎನ್.ಆರ್.ಐ. ಪೋರಂ ಅಧ್ಯಕ್ಷ ಮಹ್ಮದ್ ಯೂನೂಸ್ ಖಾಜಿಯಾ ಅಧ್ಯಕ್ಷತೆ ವಹಿಸಿದ್ದರು. ಕೋಸ್ಟಲ್ ಕರ್ನಾಟಕ ಎನ್.ಆರ್.ಪಿ ಪೋರಮ್ ಜನರಲ್ ಸೆಕ್ರೆಟರಿ ಅಮೀನ್ ಸೈಪುಲ್ಲಾ, ಭಟ್ಕಳ ಸಹಾಯಕ ಕಮಿಷನರ್ ಮಮತಾದೇವಿ, ಗ್ರೀನ್ವ್ಯಾಲಿ ಸಂಸ್ಥೆಯ ಟ್ರಸ್ಟಿ ಡಾ.ಹಸನ್, ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಇನಾಯಿತುಲ್ಲಾ ಶಾಬದ್ರಿ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ನಿರ್ವಹಿಸಿದರು. ಮೌಸಿನ್ ವಂದಿಸಿದರು.











