ಕುಂದಾಪುರ ಮಿರರ್ ಸುದ್ದಿ…
ಕೋಟ: ಭಯೋತ್ಪಾದನೆ ಎಷ್ಟು ಭೀಕರತೆ ಇದೆಯೋ ಅದೇ ರೀತಿ ಕಸ ಎಸೆಯುವ ಮನಸ್ಥಿತಿ ಅಷ್ಟೆ ಭಯವನ್ನು ಸೃಷ್ಠಿಸುತ್ತಿದೆ ಎಂದು ಬ್ರಹ್ಮಾವರ ತಾಲೂಕು ದಂಡಾಧಿಕಾರಿ ರಾಜಶೇಖರಮೂರ್ತಿ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್ ಮಣೂರು, ಯಕ್ಷಸೌರಭ ಕಲಾರಂಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ಸಹಯೋಗದೊಂದಿಗೆ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್ ಸಂಯೋಜನೆಯೊಂದಿಗೆ 150ನೇ ವಾರದ ಪರಿಸರಸ್ನೇಹಿ ಅಭಿಯಾನದ ಭಾಗವಾಗಿ ಪಾರಂಪಳ್ಳಿ ಸೀತಾ ನದಿ ಸ್ವಚ್ಛತಾ ಜಾಗೃತಿಯ ಅಭಿಯಾನದಲ್ಲಿ ಮಾತನಾಡಿ ದೇಶ ಸೇವೆಯಲ್ಲಿ ತೊಡಗಿಕೊಂಡ ಸೈನಿಕರಷ್ಟೆ ಶ್ರೇಷ್ಠತೆ ಸ್ವಚ್ಛಾಗ್ರಹಿ ಸೇವಕರಿಗೆ ಸಲ್ಲುತ್ತದೆ ಆದರೆ ಪೌರ ಕಾರ್ಮಿಕರು ಸೇರಿದಂತೆ ಸ್ವಚ್ಛತಾ ರಾಯಬಾರಿಗಳನ್ನು ಹೀನವಾಗಿ ಕಾಣುವಂತ ಮನಸ್ಥಿತಿ ಅತಿ ದುಃಖಕರವಾಗಿದೆ. ಸ್ವಚ್ಛಾಗ್ರಹಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಬೇಕಾದ ಅಗತ್ಯತೆಯನ್ನು ಮನಗಾಣಿಸಿದರಲ್ಲದೆ,
ಇಂದು ಪ್ಲಾಸ್ಟಿಕ್ ಎಲ್ಲಾ ಭಾಗಗಳನ್ನು ವ್ಯಾಪಿಸಿಕೊಂಡಿದೆ ಅದರ ಅನಿವಾರ್ಯತೆ ಎಂಬುವುದು ಮನುಷ್ಯನನ್ನು ಆವರಿಸಿಕೊಂಡಿದೆ. ಇಂತಹ ಕಸದ ತ್ಯಾಜ್ಯಗಳಿಂದ ಹೊಸ ಹೊಸ ರೋಗಗಳನ್ನು ಸೃಷ್ಠಿಸುತ್ತಿದೆ. ಇಷ್ಟಲ್ಲದೆ ಇಡೀ ವ್ಯವಸ್ಥೆಗೆ ಕಂಠಕವಾಗಿ ಪರಿಣಮಿಸುತ್ತಿದೆ. ಇದೇ ರೀತಿ ಮುಂದುವರಿದರೆ ಬಾರಿ ಸಂಕಷ್ಟ ಎದುರಿಸಬೇಕಾದಿತು ಎಚ್ಚರಿಸಿದರಲ್ಲದೆ, ಸ್ವಚ್ಛಾಗೃಹಿ ಸಂಘಸಂಸ್ಥೆಗಳಿಗೆ ಸರಕಾರ ಆರ್ಥಿಕ ನೆರವು ಘೋಷಿಸಬೇಕು ಆ ಮೂಲಕ ಎಲ್ಲಾ ಭಾಗದಲ್ಲಿ ಒಂದಿಷ್ಟು ಸಂಘಸಂಸ್ಥೆಗಳನ್ನು ಈ ಕೈಂಕರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ಆಶಿಸಿದರು
ಕಯಾಕಿಂಗ್ ಮೂಲಕ ಅಭಿಯಾನ
ತಾಲೂಕು ದಂಡಾಧಿಕಾರಿ ರಾಜಶೇಖರಮೂರ್ತಿ ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ವಿಹಾರ ನಡೆಸಿ ನದಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್ ಸಾಥ್ ನೀಡಿದರು.
ಜಾಗೃತಿ ಅಭಿಯಾನದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟ ಜನತಾ ಫಿಶ್ ಮಿಲ್ ಮ್ಯಾನೇಜರ್ ಶ್ರೀನಿವಾಸ್ ಕುಂದರ್, ಹಂದಟ್ಟು ಮಹಿಳಾ ಬಳಗದ ಶಕೀಲ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಯಕ್ಷಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ,ಸಾಲಿಗ್ರಾಮ ಕಯಾಕಿಂಗ್ ಮುಖ್ಯಸ್ಥರಾದ ಮಿಥುನ್ ಮೆಂಡನ್, ಲೋಕೇಶ್ ಮೆಂಡನ್, ಕೆ.ಎಂ.ಸಿ ಮಣಿಪಾಲದ ಮಕ್ಕಳ ತಜ್ಞ ಕೌಶಿಕ್ ಉರಾಳ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣದ ಕಾರ್ಯದರ್ಶಿ ಸುಧೀಂದ್ರ ಜೋಗಿ ವಂದಿಸಿದರು.











