ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಐ.ಎಂ.ಜೆ ಇನ್ಸ್ಟಿಟ್ಯೂಷನ್ಸ್, ಮೂಡ್ಲಕಟ್ಟೆ ವತಿಯಿಂದ ಜ.26ರಂದು 74ನೇ ಗಣರಾಜ್ಯೋತ್ಸವನ್ನು ವಿಶಿಷ್ಟವಾಗಿ ಆಚರಿಸಲಾಗುವುದು. ಗಣರಾಜ್ಯೋತ್ಸವದ ಅಂಗವಾಗಿ ದೇಶಭಕ್ತಿ ಓಟವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದು, ಕ್ರೀಡಾ ಸಾಧಕರು ಹಾಗೂ ದೇಶದ ಭದ್ರತಾ ಪಡೆಯ ಯೋಧರು ಪಾಲ್ಗೊಳ್ಳುದವರಿಂದ ವಿದ್ಯಾರ್ಥಿಗಳಿಗೆ ಒಂದು ಮಹತ್ತರ ಸಂದೇಶವನ್ನು ನೀಡುವ ಆಶಯ ಹೊಂದಲಾಗಿದೆ ಎಂದು ಎಂ.ಐ.ಟಿ ಉಪ ಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿ’ಸೋಜ ಹೇಳಿದರು.
ಅವರು ಸೋಮವಾರ ಕುಂದಾಪುರದ ಪ್ರೆಸ್ ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜ.26ರ ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ ನೆರವೇರಲಿದೆ. ಈ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಸತೀಶ್ ಖಾರ್ವಿಯವರನ್ನು ಸನ್ಮಾನಿಸಲಾಗುವುದು. 9.15ಕ್ಕೆ ದೇಶಭಕ್ತಿಯ ಓಟಕ್ಕೆ ನಮ್ಮ ದೇಶದ ಗಡಿ ಭದ್ರತಾ ಪಡೆಯ ನಿವೃತ್ತ ಯೋಧರಾದ ಗಣಪತಿ ಖಾರ್ವಿಯವರು ಚಾಲನೆ ನೀಡಲಿದ್ದಾರೆ. ಈ ಓಟವು ಮೂಡ್ಲಕಟ್ಟೆ ಕಾಲೇಜಿನ ಆವರಣದಿಂದ ಆರಂಭಗೊಂಡು ಐ.ಎಂ. ಜಯರಾಮ್ ಶೆಟ್ಟಿ, ಸರ್ಕಲನ್ನು ಸುತ್ತುವರಿದು, ಕಾಲೇಜಿನ ಆವರಣಕ್ಕೆ ಮರು ಆಗಮಿಸಲಿದೆ ಎಂದರು.
ಮೂಡ್ಲಕಟ್ಟೆ, ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್ 1995 ರಲ್ಲಿ ರಚನೆಯಾಯಿತು. ಈ ಟ್ರಸ್ಸಿನ ಸ್ಥಾಪಕರಾದ ಜಯರಾಮಶೆಟ್ಟಿ ಯವರು ಯಶಸ್ವಿ ಉದ್ಯಮಿ ಮತ್ತು ರಾಜಕಾರಣಿಯಾಗಿದ್ದರು. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವುದು ಟ್ರಸ್ಟ್ ರಚನೆಯ ಪ್ರಮುಖ ಉದ್ದೇಶವಾಗಿತ್ತು. ಎಂದರು.
ಸುದ್ಧಿಗೋಷ್ಠಿಯಲ್ಲಿ ಐಎಂಜೆಐಎಸ್ಸಿ ಪ್ರಾಂಶುಪಾಲರಾದ ಡಾ.ಪ್ರತಿಭಾ ಎಂ.ಪಟೇಲ್, ಎಂ.ಎನ್.ಸಿ ಪ್ರಾಂಶುಪಾಲರಾದ ಪ್ರೊ.ಜೆನಿಫರ್ ಮೆನೇಜಸ್, ಐಎಂಜೆಐಎಸ್ಸಿ ಉಪಪ್ರಾಂಶುಪಾಲರಾದ ಪ್ರೋ.ಜಯಶೀಲ ಕುಮಾರ್ ಉಪಸ್ಥಿತರಿದ್ದರು.











