ಯಕ್ಷಾಂತರಂಗ ಕೋಟ ‘ಯಕ್ಷ ವಿಭೂಷಣ’ ನೂತನ ಯಕ್ಷಾಭರಣ ಅನಾವರಣ
ಕುಂದಾಪುರ ಮಿರರ್ ಸುದ್ದಿ…
ಕೋಟ: ತೆಂಕು, ಬಡಗು, ಬಡಾಬಡಗು ತಿಟ್ಟಿನ ಯಕ್ಷ ನೆಲದಲ್ಲಿ ಸಚಿವನಾಗಿ ಒಂದಿಷ್ಟು ಕೆಲಸ ಮಾಡಿದ ಸಾರ್ಥಕತೆ, ಧನ್ಯತೆ ನನಗಿದೆ. ಈ ಮೂರು ನೆಲದಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನದ ಸದ್ದು ಮಾಡುತ್ತಿರುವುದನ್ನು ಕಂಡಿದ್ದೇನೆ. ಹಾಗಾಗಿ ಯಕ್ಷಗಾನ ಮನುಷ್ಯರಲ್ಲಿ ಶಕ್ತಿಯನ್ನು, ಶೃದ್ದೆಯನ್ನು, ಆಸಕ್ತಿಯನ್ನು, ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸುತ್ತದೆ. ಉತ್ತಮ ವಾಕ್ಚಾತುರ್ಯವು ಯಕ್ಷಗಾನದಿಂದ ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಯಕ್ಷಗಾನ ತನ್ನ ಪರಿದಿಯನ್ನು ಮೀರಿ ಬೆಳೆಯುತ್ತಿದೆ. ಯಕ್ಷಗಾನದಲ್ಲಿ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ. ಅಂತವರ ಗರಡಿಯಲ್ಲಿ ಬೆಳೆದ ಕಲಾವಿದರನೇಕರನ್ನು ಒಡಗೂಡಿ ಕೃಷ್ಣಮೂರ್ತಿ ಉರಾಳರು ತಂಡವೊಂದನ್ನು ಕಟ್ಟಿ ಕಾರಂತ ಥೀಂ ಪಾರ್ಕ್ನಲ್ಲಿ ನೆಲೆಸಿ, ಅವರ ಹೆಸರಿನ ಪ್ರಶಸ್ತಿಯನ್ನು ನೀಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯಕ್ಷಗಾನ ವಿಭೂಷಣ ಉದ್ಘಾಟಿಸಿ ಮಾತನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಯಕ್ಷಾಂತರಂಗ ವ್ಯವಸಾಯಿ ಯಕ್ಷತಂಡ ಕೋಟ ಇವರ ಸಪ್ತಮ ವಾರ್ಷಿಕೋತ್ಸವವು ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಹಕಾರದೊಂದಿಗೆ ಜು.1ರಂದು ‘ಯಕ್ಷ ವಿಭೂಷಣ-2023’ ನೂತನ ಯಕ್ಷಾಭರಣವನ್ನು ಉದ್ಘಾಟಿಸಿ ಕೋಟ ಶ್ರೀನಿವಾಸ ಪೂಜಾರಿ ಮಾತನ್ನಾಡಿದರು.
ಯಕ್ಷಗಾನದ ಮಹಾನ್ ಕಲಾವಿದರಿಂದ ಕೂಡಿದ ತಂಡ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಯಕ್ಷ ತರಗತಿಯನ್ನು ಮಾಡಿ ಅನೇಕ ಕಲಾವಿದರನ್ನು ಯಕ್ಷ ರಂಗಭೂಮಿಗೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘ್ಯಯೋಗ್ಯ ವಿಚಾರ. ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಈ ತಂಡಕ್ಕೆ ವೇಷಭೂಷಣದ ಕೊರತೆ ಈವರೆಗೆ ತೊಡಕಾಗಿದ್ದು ಶ್ರೀನಿವಾಸ ಪೂಜಾರರಿಂದ ಸಾಧ್ಯವಾದದ್ದು ಸಂತಸ ತಂದಿದೆ ಎಂದು ದೀಪ ಪ್ರಜ್ವಲನೆ ಮಾಡಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಭಿನಂದಿಸಿದರು. ಇದೇ ಸಂಭ್ರಮದಲ್ಲಿ ಹಿರಿಯ ಹಾಸ್ಯಗಾರರಾದ ಕಮಲಶಿಲೆ ಮಹಾಬಲ ದೇವಾಡಿಗರಿಗೆ ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.
ಸಭೆಯಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಡಾ. ಜಗದೀಶ್ ಶೆಟ್ಟಿ ಬ್ರಹ್ಮಾವರ, ಕೆ.ಪಿ. ಶೇಖರ್, ಸುಬ್ರಾಯ ಆಚಾರ್ ಮಣೂರು, ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಅಧ್ಯಕ್ಷ ಹೆರಿಯ ಮಾಸ್ಟರ್ ಇದ್ದರು. ಯಕ್ಷಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿನಂದನಾ ನುಡಿಗಳನ್ನಾಡಿದರು. ಕಲಾವಿದ ಕೃಷ್ಣಮೂರ್ತಿ ಉರಾಳ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಾಂತರಂಗ ಕೋಟ ಸದಸ್ಯರಿಂದ ಕವಿ ನಿತ್ಯಾನಂದ ಅವಧೂತ ವಿರಚಿತ ಯಕ್ಷಗಾನ “ಕನಕಾಂಗಿ ಕಲ್ಯಾಣ” ರಂಗದಲ್ಲಿ ಪ್ರಸ್ತುತಿಗೊಂಡಿತು.












