ಕುಂದಾಪುರ ಮಿರರ್ ಸುದ್ದಿ…
ಕೋಟ: : ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಸಾಂಪ್ರದಾಯಿಕ ಹೂವಿನಕೋಲು ಅಭಿಯಾನದ ಉದ್ಘಾಟನೆಯು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆನೆಗುಡ್ಡೆಯಲ್ಲಿ ಹೂವಿನಕೋಲು ಪ್ರದರ್ಶನವನ್ನು ನೀಡುವುದರ ಮೂಲಕ ನಡೆಯಿತು. ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಯಕ್ಷಗುರುಗಳಾದ ಲಂಬೋದರ ಹೆಗಡೆ ಮತ್ತು ಹರೀಶ್ ಪೂಜಾರಿ ಕಾವಡಿಯವರ ಹಿಮ್ಮೇಳದಲ್ಲಿ ಪ್ರದರ್ಶನವನ್ನು ನೀಡಲಾಯಿತು.
ಹೂವಿನಕೋಲು ಒಂದು ಸಾಂಪ್ರದಾಯಿಕ ಕಲೆಯಾಗಿದ್ದು ಇದೀಗ ಮರೆಯಾಗುತ್ತಿದೆ. ಇಂತಹ ಸುಂದರ ಕಲೆಯನ್ನು ಮತ್ತೆ ಮುನ್ನೆಲೆಗೆ ತರಲು ಇಂತಹ ಸಂಸ್ಥೆಗಳು ಯತ್ನಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದು ಹರಸಿ ದೇವಳದ ಸಿಬ್ಬಂದಿಯಾದ ರಾಜಾರಾಮ ಉಪಾಧ್ಯಾಯ ಇವರು ಮಾತನಾಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಳದ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ನಟೇಶ್ ಕಾರಂತ್, ಯಕ್ಷದೇಗುಲದ ಸಂಚಾಲಕರಾದ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ಸಂಚಾಲಕರಾದ ವೆಂಕಟೇಶ ವೈದ್ಯ, ಉಪನ್ಯಾಸಕರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು.
ಪ್ರತಿದಿನಕ್ಕೆ ಹದಿನೈದು ಮನೆಗಳಿಗೆ ಭೇಟಿ ನೀಡುವ ಈ ತಂಡವು ಸುಮಾರು ಇಪ್ಪತ್ತು ಪ್ರಸಂಗಗಳನ್ನು ತನ್ನ ಪ್ರದರ್ಶನದಲ್ಲಿ ಅಳವಡಿಸಿಕೊಂಡಿದೆ ಎಂದು ಸಂಚಾಲಕರು ತಿಳಿಸಿದರು.











