ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿಯ ಹಿರಿಯಡ್ಕದ ಶ್ರೀ ವೀರಭದ್ರ ಸಭಾಂಗಣ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಡಿಸೆಂಬರ್ 2 ಮತ್ತು 3 ರಂದು ನಡೆದ ಆರನೇ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ-2023 (6TH NATIONAL LEVEL OPEN INVITATIONAL KARATE CHAMPIONSHIP-2023) ದಲ್ಲಿ ಕುಂದಾಫುರ ನೇರಳಕಟ್ಟೆಯ ಮಾಸ್ಟರ್ ಶ್ರೀಶ ಗುಡ್ರಿಯವರು ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಕೊಬುಡೋ ಬುಡೋಕನ್ ಕರಾಟೆ-ಡೋ ಅಸೋಸಿಯೇಷನ್, ಕರ್ನಾಟಕ (ಆರ್.) (ಕರಾಟೆ ಬುಡೋಕನ್ ಇಂಟರ್ನ್ಯಾಶನಲ್ನ ಶಾಖೆ ಕೇಂದ್ರ, ಆಸ್ಟ್ರೇಲಿಯಾ) ಇವರ ಆಯೋಜನೆಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಮಾಸ್ಟರ್ ಶ್ರೀಶ ಗುಡ್ರಿ ಇವರು ಭಾಗವಹಿಸಿ ಕುಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನದ ಮೂಲಕ ಚಿನ್ನದ ಪದಕ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನದ ಮೂಲಕ ಬೆಳ್ಳಿಯ ಪದಕ ಗೆದ್ದುಕೊಂಡರು. ಶ್ರೀಶ ಗುಡ್ರಿ ಈ ಹಿಂದೆ ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಗೆದ್ದಿದ್ದರು. ಕುಂದಾಪುರದ ಸಂತೋಷ್ ಮೊಗವೀರ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ದಂಪತಿಯ ಪುತ್ರನಾದ ಶ್ರೀಶ ಗುಡ್ರಿ ಇವರು Phoenix Academy Indiaನ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಇವರ ಶಿಷ್ಯನಾಗಿದ್ದು, ಕೋಚ್ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.











