ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಮ್ಮ ಮಕ್ಕಳು ನಮ್ಮಷ್ಟ ಕಷ್ಟ ಪಡಬಾರದು ಎನ್ನುವ ನಿಜವಾದ ಮನಸ್ಸಿದ್ದರೆ ಪೋಷಕರು ಮಕ್ಕಳಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅವಕಾಶ ಕೊಡಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂದನಾ ರೈ ಕಾರ್ಕಳ ಹೇಳಿದರು. ಅವರು ಶನಿವಾರ ಕುಂದಾಪುರದ ಲಿಟ್ಲ್ ಸ್ಟಾರ್ ಕಿಂಡರ್ ಗಾರ್ಟನ್ ಯಡಾಡಿ ಮತ್ಯಾಡಿ ಇಲ್ಲಿನ ವಿದ್ಯಾರ್ಥಿಗಳ ಪದವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೋಷಕರು ಬಹಳ ಸಲ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಅವರ ತಟ್ಟೆ, ಲೋಟಗಳನ್ನು ತೊಳೆಯಲು ಬಿಡುವುದಿಲ್ಲ. ವೈಯುಕ್ತಿಕ ಸ್ವಚ್ಛತೆಗಳ ಬಗ್ಗೆಯೂ ಮಕ್ಕಳಿಗೆ ಅರಿವು ಮೂಡಿಸುವುದಿಲ್ಲ. ಇದರಿಂದಾಗಿ ಮಕ್ಕಳು ಬೆಳೆಯುತ್ತಾ ಹೋದಂತೆಲ್ಲಾ ಸೋಮಾರಿಗಳಾಗುತ್ತಾರೆ. ಆದ್ಧರಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ವೈಯುಕ್ತಿಕ ಕೆಲಸಗಳನ್ನು ಮಾಡಲು ಪ್ರೇರೇಪಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ, ಪೋಷಕಿಯರೊಂದಿಗೆ ಕುಣಿದು ಕುಪ್ಪಳಿಸಿದರು.
ಸುಜ್ಞಾನ್ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಭವಿಷ್ಯದ ಅರಿವು ಮೂಡಿಸಬೇಕು. ಸಾಮಾನ್ಯವಾಗಿ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಗ್ರಾಜ್ಯುವೇಷನ್ ಕಾರ್ಯಕ್ರಮ ಇರುತ್ತದೆ. ಆದರೆ ನಮ್ಮ ಮಕ್ಕಳಿಗೆ ಅದರ ಅರಿವು ಬಾಲ್ಯದಲ್ಲಿಯೇ ಬರಬೇಕು ಎನ್ನುವ ಕಾರಣಕ್ಕೆ ಕಿಂಡರ್ ಗಾರ್ಡನ್ ಮಕ್ಕಳಿಗೆ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡುವುದರ ಜೊತೆಗೆ ಪದವಿ ಪ್ರದಾನ ಮಾಡಲಾಯಿತು. ವಂದನಾ ರೈ ಅವರನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು. ಲಿಟ್ಲ್ ಸ್ಟಾರ್ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾದ್ಯಾಯ ಪ್ರದೀಪ್ ಕೆ. ಸ್ವಾಗತಿಸಿದರು. ಸಂಯೋಜಕಿ ಪ್ರೀತಿ ಉಪಸ್ಥಿತರಿದ್ದರು. ಶಿಕ್ಷಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











