ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರ್ಕಾರಿ ಪ್ರೌಢ ಶಾಲೆ ಕಾಳಾವರದಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕ ಚುನಾವಣೆ ನಡೆಯಿತು. ಸಮಾಜವಿಜ್ಞಾನ ಶಿಕ್ಷಕ ಶ್ರೀ ಮಹಾಬಲೇಶ್ವರ ಭಾಗವತ್ ಹಾಗೂ ಶ್ರೀಮತಿ ಶ್ರೀಲತಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ನಾಮಪತ್ರ ಪರಿಶೀಲನೆ ಕಾರ್ಯಗಳು ಕ್ರಮ ಪ್ರಕಾರ ನಡೆದವು. ನಾಯಕನ ಸ್ಥಾನಕ್ಕೆ ಈರ್ವರು ಹುಡುಗರು ಮತ್ತು ಓರ್ವ ಹುಡುಗಿ ಸ್ಪರ್ಧಿಸಿದರೆ ಉಪನಾಯಕನ ಸ್ಥಾನಕ್ಕೆ ಈರ್ವರು ಹುಡುಗರು ಮತ್ತು ಓರ್ವ ಹುಡುಗಿ ಸ್ಪರ್ಧಿಸಿದ್ದರು.
ಯೋಜನೆಯಂತೆ ಸ್ಪರ್ಧಿಗಳ ಚಿಹ್ನೆ, ಎಚ್ಚರಿಕೆ ಪೋಸ್ಟರ್ ಗೋಡೆಯ ಮೇಲೆ ಅಂಟಿಸಲಾಯಿತು. ಸ್ಕೌಟ್ಸ್ ಸಮವಸ್ತ್ರದಲ್ಲಿ ವಿದ್ಯಾರ್ಥಿಗಳು ಪೊಲೀಸ್ ಕಾರ್ಯ ನಿರ್ವಹಿಸಿದರು. ಹೊಸ ತಂತ್ರಜ್ಞಾನದಲ್ಲಿ ಎರಡೂ ವಿಭಾಗಗಳಲ್ಲಿ ಮತದಾನ ಮಾಡಲು ಕಂಟ್ರೋಲ್ ಯೂನಿಟ್, ಬೆಲೆಟ್ ಯೂನಿಟ್ ಗಳನ್ನು ಅಳವಡಿಸಲಾಗಿತ್ತು. ತಂತ್ರಜ್ಞಾನದ ಜೋಡನೆಗಳನ್ನು ಶಿಕ್ಷಕ ಗಣೇಶ್ ಶೆಟ್ಟಿಗಾರ್ ಮತ್ತು ಹೇಮಾ ನಿರ್ವಹಿಸಿದರು.
ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ ಅಧ್ಯಕ್ಷಾಧಿಕಾರಿಯಾಗಿ , ಉಳಿದವರು ಪೋಲಿಂಗ್ ಅಧಿಕಾರಿಗಳಾಗಿ ಸಹಕರಿಸಿದರು. ಚುನಾವಣೆ ಮುಗಿದ ತಕ್ಷಣವೇ ಸ್ಪರ್ಧಿಗಳ ಸಮಕ್ಷಮ ಫಲಿತಾಂಶ ಪ್ರಕಟಿಸಲಾಯಿತು.
ನಾಯಕಿಯಾಗಿ 10ನೆಯ ತರಗತಿಯ ಅನ್ವಿತಾ ಶೆಟ್ಟಿ ಹಾಗೂ ಉಪನಾಯಕನಾಗಿ 9ನೆಯ ತರಗತಿಯ ಮನೋಜ್ ಆಯ್ಕೆಯಾದರು. ಹೊಸ ತಂತ್ರಜ್ಞಾನದಲ್ಲಿ ಮತದಾನ ಮಾಡಿ ವಿದ್ಯಾರ್ಥಿಗಳು ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ಮುಖ್ಯೋಪಾಧ್ಯಾಯಿನಿಯವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಸಿಕೊಟ್ಟ ಶಿಕ್ಷಕ ವೃಂದದವರನ್ನು ಅಭಿನಂದಿಸಿದರು.











