ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :1947 ಆಗಸ್ಟ್ 15 ಎನ್ನುವುದು ಭಾರತೀಯರ ಪಾಲಿಗೆ ಮಹತ್ತರವಾದ ದಿನ. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ನಾವೆಲ್ಲರೂ ಬಿಡುಗಡೆ ಹೊಂದಿದ ದಿವಸ ಆ ಪ್ರಯುಕ್ತ ಅದರ ಸವಿನೆನಪಿಗಾಗಿ ಎಕ್ಸಲೆಂಟ್ ಕ್ಯಾಂಪಸ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಎಂ ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.) ಕುಂದಾಪುರ ಇದರ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣವನ್ನು ವಿದ್ಯಾರ್ಥಿಗಳ ವಂದೇ ಮಾತರಂ, ರಾಷ್ಟ್ರಗೀತೆ, ಧ್ವಜ ಗೀತೆಗಳೊಂದಿಗೆ ಈ ಭಾವೈಕ್ಯತೆಯ ರಾಷ್ಟ್ರೀಯ ಹಬ್ಬವನ್ನು ನೆರವೇರಿಸಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ನೆನಪಿಸಿಕೊಂಡು ಅವರ ತ್ಯಾಗ ಬಲಿದಾನವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಅವರು ಸ್ವಾತಂತ್ರ್ಯದ ಮಹತ್ವದ ಜೊತೆಗೆ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರ್ಥ ಮಾಡಿಕೊಂಡು ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕಾಗಿದೆ ಎಂಬ ಕರೆಯನ್ನು ನೀಡಿದರು.
ನಂತರ ಮಾತನಾಡಿದ ಎಕ್ಸಲೆಂಟ್ ಪ್ರೌಢ ಶಾಲೆಯ ಮುಖ್ಯಶಿಕ್ಷಕಿಯಾದ ಸರೋಜಿನಿ ಆಚಾರ್ಯ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ತಿಲಕ್ ಹೀಗೆ ಅನೇಕರ ಹೋರಾಟವನ್ನು ಸ್ಮರಿಸಿ ಅವರು ದೇಶದ ಜನರ ಸಂತೋಷಕ್ಕಾಗಿ ತಮ್ಮ ಪ್ರಾಣವನ್ನೇ ಮೀಸಲಿಟ್ಟರು ಎಂದು ಅವರೆಲ್ಲರ ತ್ಯಾಗವನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಬೋಧಕ & ಬೋಧಕೇತರ ವರ್ಗದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀನಿವಾಸ ವೈದ್ಯರು ನಿರೂಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಸಿಹಿಯನ್ನು ಹಂಚಿ ಕಾರ್ಯಕ್ರಮವನ್ನು ಚಂದಗಾಣಿಸಿದರು.











