Video:
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೃಷಿಯಲ್ಲಿ ಉತ್ತಮ ಫಸಲು ನೀಡಿದ ದೇವರಿಗೆ ಕೃತಜ್ಞತೆ ಸಲ್ಲಿಸುವ, ಮೇರಿಮಾತೆಯ ಜನ್ಮ ದಿನವಾದ ಪ್ರಸಿದ್ದ ತೆನೆ ಹಬ್ಬ (ಮೊಂತಿ ಫೆಸ್ತ್)ವನ್ನು ಬಸ್ರೂರಿನ ಸಂತ ಫಿಲೀಪ್ ನೇರಿ ಚರ್ಚ್ನಲ್ಲಿ ಭಾನುವಾರ ಬೆಳಿಗ್ಗೆ ಸಂಭ್ರಮದಿಂದ ಆಚರಿಸಲಾಯಿತು.
ಚರ್ಚ್ ನ ಧರ್ಮಗುರುಗಳಾದ ವಂದನೀಯ ರೋಯ್ ಲೋಬೋ ದಿವ್ಯ ಬಲಿಪೂಜೆ ನೆರವೇರಿಸಿ, ಈ ವರ್ಷ ಉತ್ತಮ ಫಸಲು ಒದಗಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಬ್ರದರ್ ವಿಲ್ಸನ್ ಸಲ್ಡಾನ ಪ್ರವಚನ ನೀಡಿ, ಮೇರಿ ಮಾತೆಯ ಸರಳ ಜೀವನ ನಮಗೆ ಆದರ್ಶ. ನಮ್ಮ ಜೀವನದಲ್ಲಿ ಮೇರಿ ಮಾತೆಯ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು, ಇದರಿಂದ ಸಮಾಜದಲ್ಲಿ ಒಂದು ಉತ್ತಮ ಕುಟುಂಬವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಪುಟ್ಟ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಅರ್ಪಿಸಿ ಭಕ್ತಿಯ ನಮನ ಸಲ್ಲಿಸಿದರು. ನೂರಾರು ಭಕ್ತಾಧಿಗಳು ಶ್ರದ್ಧೆ ಮತ್ತು ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ಸಂದರ್ಭ ಭತ್ತದ (ಕದಿರು) ತೆನೆಯನ್ನು ಮನೆಗೆ ತಂದು ಹೊಸ ಅಕ್ಕಿಯ ಅನ್ನ ಮಾಡಿ ಕುಟುಂಬಿಕರ ಜೊತೆಗೆ ಸಹಭೋಜನ ನಡೆಸಲಾಯಿತು.











