ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಲ್ಲಂಗಡಿ ಲೋಡ್ ಮಾಡುವವರ ಬಳಿ ಮಾತನಾಡಿ ಬರುತ್ತೇನೆಂದು ತೆರಳಿದ್ದ ಯುವಕ ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರದ ನಾಗೂರಿನಲ್ಲಿ ಮಂಗಳವಾರ ಸಂಜೆ ನಡೆದಿದೆ. ಬಿಜೂರು ಗ್ರಾಮದ ದೀಟಿಮನೆ ನಿವಾಸಿ ಮುತ್ತಯ್ಯ ದೇವಾಡಿಗ ಎಂಬುವರ ಹಿರಿಯ ಪುತ್ರ ವಾಸುದೇವ ದೇವಾಡಿಗ ಯಾನೇ ಮಣಿಕಂಠ (25) ಸಾವನ್ನಪ್ಪಿದ ದುರ್ದೈವಿ.
ವೃತ್ತಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ವಾಸುದೇವ ದೇವಾಡಿಗ ಸುಮಾರು 5 ಎಕ್ರೆ ಜಾಗದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಇನ್ನು ಎರಡು ಮೂರು ದಿನದಲ್ಲಿ ಕಲ್ಲಂಗಡಿ ಕಟಾವಿಗೆ ಸಿದ್ಧತೆ ಮಾಡಿದ್ದರು. ನಾಗೂರಿನಲ್ಲಿ ಫೆ.4ರಂದು ಮಂಗಳವಾರ ಸಂಜೆ ಸೆಂಟ್ರಿಗ್ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಸಂದರ್ಭದಲ್ಲಿ ತನ್ನ ವಾಹನವನ್ನು ಕಲ್ಲಂಗಡಿ ಹಣ್ಣಿನ ಲೋಡ್ ಮಾಡಲು ಮತ್ತೊಬ್ಬರಿಗೆ ನೀಡಿದ್ದು, ಅವರು ವಾಹನವನ್ನು ಅವರು ರೈಲ್ವೆ ಹಳಿ ಪಶ್ಚಿಮ ದಿಕ್ಕಿನಲ್ಲಿ ನಿಲ್ಲಿಸಿ ಕಲ್ಲಂಗಡಿ ಹಣ್ಣಿನ ಲೋಡ್ ಮಾಡುತ್ತಿದ್ದವರ ಬಳಿ ಮಾತನಾಡಿ ಹಣ ಕೊಟ್ಟು ಬರುತ್ತೇನೆಂದು ರೈಲ್ವೇ ಹಳಿ ದಾಟಿ ಹೋಗಿ ವಾಪಾಸು ಬರುತ್ತಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಮಡಗಾಂವ್ ಕಡೆಗೆ ರೈಲು ಬರುತ್ತಿರುವುದನ್ನು ಕೊನೆಯ ಕ್ಷಣದಲ್ಲಿ ಗಮನಿಸಿದ ವಾಸುದೇವ ತಪ್ಪಿಸಿಕೊಳ್ಳಲು ಯತ್ನಿಸಿ ಹಳಿಯ ಪಕ್ಕಕ್ಕೆ ಸರಿದು ತಿರುಗಿದಾಗ ಮುಖಕ್ಕೆ ರೈಲು ಡಿಕ್ಕಿಯಾಗಿ ತಲೆ ಚಿದ್ರವಾಗಿದೆ.
ಮಧ್ಯಾಹ್ನ ಊಟಕ್ಕೆ ಬಂದಿದ್ದ ವಾಸುದೇವ ತನ್ನ ಮನೆಯಲ್ಲಿ ಸಂಜೆ ಕೆಲಸ ಮುಗಿಸಿಕೊಂಡು ಬಂದು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಬೇಕು ಎಂದು ಹೇಳಿ ಹೋಗಿದ್ದ. ಅದರಂತೆ ಕೆಲಸ ಮುಗಿಸಿಕೊಂಡು ಬರುವಾಗಲೂ ಕೆಲಸದವರ ಬಳಿ ನನ್ನನ್ನು ಬೇಗ ಮನೆಗೆ ಬಿಡಿ, ಮಾರಣಕಟ್ಟೆ ಹೋಗಲು ಇದೆ ಎಂದೆ ಹೇಳಿ ವಾಹನದ ಚಾಲಕನನ್ನು ಮಾತನಾಡಿಸಲು ಹೋಗಿ ವಾಪಾಸ್ಸು ಬರುವಾಗ ದುರ್ಘಟನೆ ನಡೆದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಾಸುದೇವ ಮುತ್ತಯ್ಯ ದೇವಾಡಿಗರ ಐದು ಜನ ಮಕ್ಕಳ ಪೈಕಿ ಹಿರಿಯವನಾಗಿದ್ದಾನೆ.