ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ: ಬೇಸಿಗೆ ಶಿಬಿರಕ್ಕೆಂದು ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಜಂಕ್ಷನ್ನಲ್ಲಿ ಮಂಗಳವಾರ ನಡೆದಿದೆ. ಬ್ರಹ್ಮಾವರದ ಎಸ್.ಎಮ್.ಎಸ್. ಶಾಲೆಯ 6ನೇ ತರಗತಿಯ ವಿದ್ಯಾರ್ಥಿ, ವಕ್ವಾಡಿ ಹೆಬ್ಬಾಗಿಲು ಮನೆ ಆಶಾ ಮತ್ತು ಸಂತೋಷ ಶೆಟ್ಟಿ ಅವರ ಪುತ್ರ ವಂಶಿ ಜಿ ಶೆಟ್ಟಿ(14) ಸಾವನ್ನಪ್ಪಿದ ಬಾಲಕ.
ವಿದ್ಯಾರ್ಥಿ ವಂಶಿ ಜಿ ಶೆಟ್ಟಿ ಬೇಸಿಗೆ ಶಿಬಿರಕ್ಕೆಂದು ಮನೆಯಿಂದ ತೆರಳುತ್ತಿದ್ದ. ಅದೇ ವೇಳೆ ವೇಗವಾಗಿ ಬಂದ ಕಾರೊಂದು ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಂದೆ ಸಂತೋಷ್ ಶೆಟ್ಟಿ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ವಿದ್ಯಾರ್ಥಿ ವಂಶಿ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಮುಂದಿದ್ದು, ಶಾಲೆಗೆ ರಜೆ ಇದ್ದ ಕಾರಣ ಬೇಸಿಗೆ ಶಿಬಿರಕ್ಕೆಂದು ತೆರಳುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ.
ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಯ ಬಳಿ ಬೃಹತ್ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಹೇಶ್ ಆಸ್ಪತ್ರೆ ಜಂಕ್ಷನ್ ಅಪಘಾತ ವಲಯವಾಗಿದ್ದು, ಇಲ್ಲಿ ಈ ಹಿಂದೆ ಹಲವು ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಜಂಕ್ಷನ್ನಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಶಾಶ್ವತ ಪರಿಹಾರವನ್ನು ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.