ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನಮ್ಮ ಪವಿತ್ರವಾದ ಸಂಸ್ಕಾರಯುಕ್ತ ಜೀವನ ಮೌಲ್ಯಗಳು ಉಳಿಯಬೇಕಾದರೆ ಮನೆ ಮನಗಳು ಧರ್ಮಕ್ಷೇತ್ರವಾಗಬೇಕು. ಸಮಾಜದಲ್ಲಿ ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ನಿರ್ಮಾಣ ಮಾಡಬೇಕು ಎಂದು ನಿಪ್ಪಾಣಿ ಮಹಾಕಾಳಿ ಮಹಾಸಂಸ್ಥಾನ ಸದ್ಧರ್ಮ ಓಂಶಕ್ತಿ ಪೀಠಾಧೀಪತಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಹೇಳಿದರು.
ಬಿಜೂರು ಸುಮನಾವತಿ ನದಿತೀರದಲ್ಲಿ ಸುಮಾರು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೋಟಿ-ಚೆನ್ನಯ್ಯ ಪಂಜುರ್ಲಿ ನೂತನ ಗರಡಿ ಕಾಮಗಾರಿಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ದೇವರು, ದೈವಸ್ಥಾನಗಳು ಜೀರ್ಣೋದ್ಧಾರವಾದ ನಂತರ ಅಲ್ಲಿನ ನಡಾವಳಿಗಳನ್ನು ಕ್ರಮಬದ್ಧವಾಗಿ ಪಾಲಿಸಿಕೊಂಡು ಬರಬೇಕು. ಅಲ್ಲದೇ ಸ್ಥಳ ನಂಬಿದ ಭಕ್ತಾದಿಗಳು, ಕುಟುಂಬಸ್ಥರು ಸಮರ್ಪಣಾ ಭಾವದಿಂದ ಸಂಪೂರ್ಣವಾಗಿ ಸಹಕಾರ ನೀಡಿದ್ಧಲ್ಲಿ ಮಾತ್ರ ಆ ಸ್ಥಳ ಅಭಿವೃದ್ಧಿ ಕಾಣಬಹುದು ಎಂದರು.
ಗೌರಿಗದ್ದೆ ಅವಧೂತ ವಿನಯ ಗುರೂಜಿ ಮಾತನಾಡಿ ಕೋಟಿ-ಚೆನ್ನಯ್ಯರು ಸೂರ್ಯ ಹಾಗೂ ನಾಗದೇವರ ಅಂಶವಾಗಿದ್ದು, ವಿಶ್ವದಲ್ಲಿ ಪ್ರಥಮವಾಗಿ ಸಮಾನತೆಯ ಯುದ್ಧ ಸಾರಿ ಯಶಸ್ವಿಯಾದವರು. ಸುಮಾರು 900 ವರ್ಷ ಇತಿಹಾಸವಿರುವ ಹಾಗೂ ಅವಿಭಜಿತ ದ.ಕ. ಜಿಲ್ಲೆಯ 66ನೇ ಹಾಗೂ ಉತ್ತರ ತುದಿಯ ಸುಮನಾ ನದಿತೀರದಲ್ಲಿರುವ ಕೊನೆಯ ಗರಡಿ ಎಂಬ ಹೆಗ್ಗಳಿಕೆಯಿದೆ. 66 ಗಣಗಳು ನೆಲೆನಿಂತ ಈ ಪವಿತ್ರ ಗರಡಿಯನ್ನು ಸಾವಿರಾರು ಕುಟುಂಬಗಳು ನಂಬಿಕೊಂಡು ಬಂದಿದ್ದಾರೆ. ಪ್ರಸ್ತುತ ನೂತನ ಗರಡಿಯ ಕಟ್ಟಡ ರಚನೆ ಮತ್ತು ಪರಿಸರ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶೀಘ್ರವಾಗಿ ಪೂರ್ಣಗೊಂಡು ದೈವಗಳು ನೆಲೆನಿಂತ ಊರಿಗೆ ಸುಭಿಕ್ಷೆಯಾಗಲಿ ಎಂದರು.
ಕೋಟಿ-ಚೆನ್ನಯ್ಯ ಪಂಜುರ್ಲಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ, ಮಾಲತಿ ಪೂಜಾರಿ ದಂಪತಿಗಳು ಗುರುಗಳ ಪಾದಪೂಜೆ ನೆರವೇರಿಸಿದರು. ಸಂಸದ ಬಿ. ವೈ. ರಾಘವೇಂದ್ರ ಇವರನ್ನು ಸನ್ಮಾನಿಸಲಾಯಿತು. ಶಾಸಕ ಗುರುರಾಜ ಗಂಟಿಹೊಳೆ, ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಪಾತ್ರಿ ರಾಮ ಎಂ. ಪೂಜಾರಿ, ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ಎಂ. ಪೂಜಾರಿ, ಗರಡಿ ಬಲ್ಲಾಳ ಸೀತಾರಾಮ ಶೆಟ್ಟಿ. ಗೋವಿಂದ ಶೇರಿಗಾರ್ (ಕರ್ತುಗಳು), ಉದ್ಯಮಿಗಳಾದ ಲಕ್ಷ್ಮೀಕಾಂತ್ ಬೆಸ್ಕೂರ್, ಶೇಖರ ಪೂಜಾರಿ, ವೆಂಕಟ್ರಮಣ ಶೇರುಗಾರ್, ನರಸಿಂಹ ಪೂಜಾರಿ, ಭಾಸ್ಕರ ಪೂಜಾರಿ, ಕೃಷ್ಣ ಪೂಜಾರಿ ಪೇರಂಜಾಲು, ಸೂರ್ಯ ಎಸ್. ಪೂಜಾರಿ ಕಟ್ಟೆಮನೆ, ಪಂಜು ಪೂಜಾರಿ ಅಸ್ರಣ್ಣರು, ಜಟ್ನಾಡಿಮಕ್ಕಿ ಶ್ರೀನಿವಾಸ ಪೂಜಾರಿ ಆಸ್ರಣ್ಣರು, ರಾಮ ಎ. ಪೂಜಾರಿ, ಚಮ್ಮಾನ್ಹಿತ್ಲು ಉಪಸ್ಥಿತರಿದ್ದರು.
ಬಿಜೂರು ಅರೆಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೇರ್ಕೋದ್ದಾರ ಸಮಿತಿ ಅಧ್ಯಕ್ಷ ರಾಜೇಂದ್ರ ಬಿಜೂರು ಸ್ವಾಗತಿಸಿ, ಉಪಾಧ್ಯಕ್ಷ ಸುರೇಶ ಬಿಜೂರು ವಂದಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು.











