ಜನತಾ ನವನೀತಾ ಇನ್ನಷ್ಟು ಸಂಭ್ರಮಿಸಲಿ – ಗಿಜ್ಜಿ ಗಿಲಿ ಗಿಲಿ ನಟಿ ದೀಕ್ಷಾ ಬ್ರಹ್ಮಾವರ ಅಭಿಮತ
ಕುಂದಾಪುರ ಮಿರರ್ ಸುದ್ದಿ…

ಹೆಮ್ಮಾಡಿ: ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕುಗ್ಗದೆ ಸಕರಾತ್ಮಕ ಯೋಚನೆಯನ್ನು ಮೈಗೂಡಿಸಿಕೊಂಡು ಆ ಮೂಲಕ ಉತ್ತಮ ವ್ಯಕ್ತಿಗಳಾಗಿ ಬದುಕಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ, ಜನತಾ ಸಂಸ್ಥೆ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಅವಕಾಶಗಳನ್ನು ನೀಡಿದೆ. ಆ ಎಲ್ಲಾ ಅವಕಾಶಗಳನ್ನು ಸಂಭ್ರಮಿಸಿಕೊಳ್ಳಿ ಎಂದು ಕಲರ್ಸ್ ಕನ್ನಡ ಗಿಜ್ಜಿ ಗಿಲಿ ಗಿಲಿ ಖ್ಯಾತಿಯ ನಟಿ ದೀಕ್ಷಾ ಬ್ರಹ್ಮಾವರ ಹೇಳಿದರು.
ಅವರು ಜನತಾ ಕಾಲೇಜು ಹೆಮ್ಮಾಡಿಯಲ್ಲಿ ಆಯೋಜಿಸಿದ ಜನತಾ ನವನೀತಾ 2.0 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜನತಾ ಸಮೂಹ ಸಂಸ್ಥೆಯ ಅಧ್ಯಕ್ಷರು ಜನತಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಮಾತನಾಡಿ ನಮ್ಮ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ಕರ್ತವ್ಯ ನಿಷ್ಠೆ ರೂಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮವಾದ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ, ನಾನು ಬಡತನ ಮತ್ತು ಕಷ್ಟದಿಂದ ಮೇಲೆ ಬಂದಿದ್ದೇನೆ ಆದರೆ ಇಂದಿನ ವಿದ್ಯಾರ್ಥಿಗಳಿಗಾಗಿ ಪೋಷಕರು ಎಲ್ಲವನ್ನು ತ್ಯಾಗ ಮಾಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಹೆತ್ತವರ ಕಷ್ಟ ಮತ್ತು ಶ್ರಮವನ್ನು ಅರ್ಥ ಮಾಡಿಕೊಂಡು ನಮ್ಮ ದೇಶದ ಉತ್ತಮ ಪ್ರಜೆಯಾಗಿ ಎಂದು ಶುಭ ಹಾರೈಸಿ, ಕಾಲೇಜಿನ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಸಿ ವಿಶೇಷವಾಗಿ ಸ್ವಾಗತಿಸಲಾಯಿತು.
ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿ ಇ ಟಿ,ನೀಟ್, ಜೆಇಇ, ನಾಟಾ, ಸಿ ಎ, ಸಿ ಎಸ್ ಪರೀಕ್ಷೆಗಳಲ್ಲಿ ರಾಂಕ್ ಪಡೆದು ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಇದರ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಜನತಾ ಪ್ರೌಢ ಶಾಲೆ ಹೆಮ್ಮಾಡಿಯ ಪ್ರಭಾರ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸುದರ್ಶನ್, ಪ್ರತಾಪ್, ಶ್ವೇತಾ, ಅಭಿಜಿತ್, ಅಕ್ಷಯ್ ಶೆಟ್ಟಿ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ ಸ್ವಾಗತಿಸಿ, ಉಪನ್ಯಾಸಕರಾದ ಅಲ್ತಾರು ನಾಗರಾಜ್ ವಂದಿಸಿ, ಉದಯ ನಾಯ್ಕ ನಿರೂಪಿಸಿದರು.
ನಂತರ ಕಾಲೇಜಿನ ಶ್ಲಾಘನಾ ಶನಯ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಕ್ಷಾ ಬ್ರಹ್ಮಾವರ ಹಾಗೂ ನೆಗಿ ನಾಗಣ್ಣ ತಂಡದವರಿಂದ ನೆಗಿ ಕೊಪ್ಪರಿಗೆ ಕಾರ್ಯಕ್ರಮ ಪ್ರದರ್ಶನಗೊಂಡಿತು.











