ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಆ.21:ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸಾಮಾಜಿಕ ಬದಲಾವಣೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ತ್ರೀಸಬಲೀಕರಣ, ಆರ್ಥಿಕ ಸಮಾನತೆಯಾಗಿದೆ. ಜ್ಞಾನದೀಪ ಕಾರ್ಯಕ್ರಮದಡಿ ಶಿಕ್ಷಣ ಕ್ಷೇತ್ರಕ್ಕೆ ಸಹಕಾರ, ಕೆರೆಗಳ ಪುನಶ್ಚೇತನ, ದೇವಸ್ಥಾನಗಳ ಜೀರ್ಣೋದ್ದಾರ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಧರ್ಮಸ್ಥಳ ಮಹತ್ತರವಾದ ಕೊಡುಗೆ ನೀಡಿದೆ. ಆದರೆ ಇತ್ತೀಚೆಗೆ ಶ್ರೀಕ್ಷೇತ್ರ ಮತ್ತು ಹೆಗ್ಗಡೆಯವರ ವರ್ಚಸ್ಸಿನ ಮೇಲೆ ಕಳಂಕ ತರುವ ಕೆಲಸ ಆಗುತ್ತಿದೆ. ಇದು ಖಂಡನೀಯ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕುಂದಾಪುರ ಶಾಸ್ತ್ರೀವೃತ್ತದ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಕುಂದಾಪುರ ತಾಲೂಕು ಇವರ ನೇತೃತ್ವದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಕುಂದಾಪುರದಲ್ಲಿ ಜನಾಗ್ರಹ ಸಭೆ ಮತ್ತು ಜಾಥವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ನಮ್ಮ ಬದುಕಿನ ಸ್ತರಸ್ತರಗಳಲ್ಲೂ ಹಾಸು ಹೊಕ್ಕಾಗಿದೆ. ಇಂಥಹ ಕ್ಷೇತ್ರದ ಮೇಲೆ ಕೆಸರೆರೆಚುವ ಕೆಲಸ ಆಗುತ್ತಿರುವುದು ಖಂಡನಾರ್ಹ, ನಾವೆಲ್ಲಾ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದರು.
ವಿಹಿಂಪ ಮುಖಂಡರಾದ ಪ್ರೇಮಾನಂದ ಶೆಟ್ಟಿ ಕಟ್ಕೆರೆ ಮಾತನಾಡಿ ಇದು ಹಿಂದೂ ಸಮಾಜದ ಶ್ರದ್ದಾಕೇಂದ್ರದ ಮೇಲಿನ ವ್ಯವಸ್ಥಿತವಾದ ದಾಳಿಯಾಗಿದೆ. ಇಂಥಹ ಅಪಪ್ರಚಾರ, ಅವಹೇಳನದ ಮೂಲಕ ಹಿಂದೂ ಸಮಾಜದ ಪ್ರಮುಖವಾದ ಶ್ರದ್ದಾಕೇಂದ್ರವನ್ನು ಹಿನ್ನೆಡೆಗೊಳಿಸುವ ಕೆಲಸವಾಗುತ್ತಿದೆ. ಇಂಥಹ ಘಟನೆಗಳು ಪುನರಾವರ್ತನೆಯಾಗಬಾರದು. ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ಮೇಲೆ ಕ್ರಮವಾಗಬೇಕು ಎಂದರು.
ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಧರ್ಮಸ್ಥಳ ದೇವಸ್ಥಾನ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕಳಂಕ ತರುತ್ತಿರುವ ವ್ಯಕ್ತಿಗಳ ಮೇಲೆ ಕ್ರಮವಾಗುತ್ತದೆ ಎನ್ನುವ ವಿಶ್ವಾಸವಿದೆ. ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಜನರ ಮುಂದಿದೆ. ಅವರು ಮಾಡಿರುವ ಪರಿವರ್ತನೆ, ಸಬಲೀಕರಣದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ ಎಂದರು.
ಸಭೆಯಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಕುಮಾರ ಕೊಡ್ಗಿ, ಧಾರ್ಮಿಕ ಮುಖಂಡರಾದ ಕುತ್ಯಾರು ನವೀನ ಶೆಟ್ಟಿ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ನವೀನಚಂದ್ರ ಶೆಟ್ಟಿ ರಟ್ಟಾಡಿ, ಬಿಲ್ಲವ ಸಮಾಜದ ಮುಖಂಡರಾದ ಅಶೋಕ ಪೂಜಾರಿ ಬೀಜಾಡಿ, ವಾಸ್ತು ತಜ್ಞ ಬಸವರಾಜ ಶೆಟ್ಟಿಗಾರ್ ಕೋಟೇಶ್ವರ, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಡಾ.ಅತುಲ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಉಮೇಶ ಶೆಟ್ಟಿ ಶಾನ್ಕಟ್ಟು, ಹಿಂದೂ ಸಂಘಟನೆಯ ಮುಖಂಡರಾದ ಶಂಕರ ಅಂಕದಕಟ್ಟೆ, ಸಭಾಂಗಣ ಮಾಲೀಕರ ಸಂಘದ ಪ್ರದೀಪಚಂದ್ರ ಶೆಟ್ಟಿ. ಪತ್ರಕರ್ತ ಯು.ಎಸ್ ಶೆಣೈ, ರಾಜೇಶ ಕಾವೇರಿ, ಮಂಜು ಬಿಲ್ಲವ, ರಾಜೇಂದ್ರ ಕುಮಾರ್ ಬಸರೂರು, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯ ಕುಂದಾಪುರ ತಾಲೂಕು ಇದರ ಸುಬ್ರಹ್ಮಣ್ಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಕುಂದಾಪುರ ಮುಖ್ಯರಸ್ತೆಯಲ್ಲಿ ಬೃಹತ್ ಜಾಥಾ ಸಾಗಿತು. ಸಹಾಯಕ ಆಯುಕ್ತರ ಕಛೇರಿಗೆ ಸಾಗಿ, ಸಹಾಯಕ ಆಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.











