ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಕೌಟ್ ಗೈಡ್ಸ್ ಪ್ರಾರಂಭ ಮಾಡಲೇ ಬೇಕು ಎಂದು ಡಾ.ವಿ.ಎಸ್.ಆಚಾರ್ಯ ಪ್ರಯತ್ನ ಮಾಡಿದ್ದರು. ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಣದ ಒಂದು ಅಂಗವಾಗಿದ್ದು, ಮಾನವನ ನಿರ್ಮಾಣ ಮಾಡುವ ಒಂದು ಪ್ರಕ್ರಿಯೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್, ಗೈಡ್ಸ್ ಪ್ರಾರಂಭಿಸಬೇಕೆಂದು ರಾಜ್ಯ ಸರಕಾರ ಆದೇಶಿಸಿದೆ. ರಾಜ್ಯದಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಸ್ಕೌಟ್, ಗೈಡ್ಸ್ನ ಸದಸ್ಯರಾಗಿದ್ದಾರೆ. ಕರಾವಳಿ ಭಾಗದಲ್ಲಿ ಸ್ಕೌಟ್ ಗೈಡ್ಸ್ಗೆ ಬಹಳ ದೊಡ್ಡ ಭವಿಷ್ಯವಿದೆ. ಗುಣಮಟ್ಟದ ನಾಯಕರುಗಳನ್ನು ದೇಶಕ್ಕೆ, ಸಮಾಜಕ್ಕೆ ಕೊಡತಕ್ಕ ಶಕ್ತಿ ಸ್ಕೌಟ್ ಗೈಡ್ಸ್ಗೆ ಇದೆ. ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಸೀಮಿತವಾಗಿ ಪಿಲಿಕುಳವನ್ನು ಕೇಂದ್ರವನ್ನಾಗಿಸಿಕೊಂಡು ಸೀ ಸ್ಕೌಟ್ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಚಿವ, ರಾಜ್ಯದ ಭಾರತ್ ಸ್ಕೌಟ್ ಎಂಡ್ ಗೈಡ್ಸ್ನ ಚೀಫ್ ಕಮೀಷನರ್ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಕೋಟೇಶ್ವರದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ನಲ್ಲಿ ಭಾರತ್ ಸ್ಕೌಟ್, ಗೈಡ್ಸ್, ಬುಲ್ಬುಲ್ ಮತ್ತು ಬನ್ನೀಸ್ ಘಟಕವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಕ್ತಿತ್ವ ನಿರ್ಮಾಣ ಮತ್ತು ಪರಿಸರದ ರಾಯಭಾರಿಗಳು ಎಂ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದೆ. ಜಾತಿ, ಧರ್ಮ, ಪ್ರಾಂತ, ಭಿನ್ನಾಭಿಪ್ರಾಯ ಮರೆತು, ಕಡಿಮೆ ಮಾಡಿ ನಾವೆಲ್ಲರೂ ಒಂದೇ ಎಂಬ ದೇಶ ಪ್ರೇಮದ ಭಾವನೆಯನ್ನು ಸ್ಕೌಟ್ ಗೈಡ್ಸ್ ಬೆಳೆಸುತ್ತಿದೆ. ಕೇರಳ ಮತ್ತು ಪಂಜಾಬ್ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ. ಜ್ಞಾನ, ವಿಜ್ಞಾನದ ಜೊತೆಗೆ ಕೌಶಲ್ಯ ಅಭಿವೃದ್ಧಿಯಾಗಬೇಕು. ರಾಷ್ಟ್ರದ ಅತ್ಯಂತ ಮೇಧಾವಿ, ಪರಿಸರ ಪ್ರೇಮಿ ಡಾ. ಶಿವರಾಮ ಕಾರಂತರ ಮೂಕಜ್ಜಿಯ ಕಥೆಗಳನ್ನು ಮಕ್ಕಳು ಮತ್ತು ಅವರ ವಿದೇಶಗಳ ಪ್ರವಾಸ ಕಥನಗಳನ್ನು ಶಿಕ್ಷಕರು ಓದಬೇಕು ಎಂದು ಅವರು ಹೇಳಿದರು.
ರಾಜಕೀಯ ರಂಗ ಮತ್ತು ಸಾರ್ವಜನಿಕ ಜೀವನ ಬಹಳ ಹದಗೆಟ್ಟಿದ್ದರೂ ಜನರು ಹದಗೆಟ್ಟಿಲ್ಲ. ಜನರನ್ನು ಸರಿಯಾಗಿ ದಾರಿಯಲ್ಲಿ ತೆಗೆದುಕೊಂಡು ಹೋಗತಕ್ಕ ನಾವುಗಳು ದಾರಿ ತಪ್ಪಿದ್ದೇವೆ. ದಾನಗಳಲ್ಲಿ ಶ್ರೇಷ್ಠವಾದ ಜ್ಞಾನದಾನವನ್ನು ಮಾಡುವ ಕೆಲಸಕ್ಕೆ ಗುರುಕುಲು ಸಂಸ್ಥೆ ಕೈಹಾಕಿರುವುದು ಅಭಿನಂದನೀಯ. ಭಾರತೀಯ ಸಂಸ್ಕøತಿ ಆಧಾರದ ಮೇಲೆ ಪ್ರಪಂಚದಲ್ಲಿ ಆಗುತ್ತಿರುವ ವಿಜ್ಞಾನ, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಆಗುತ್ತಿರುವ ಆವಿಷ್ಕಾರಗಳು ಹೊಸತನಗಳನ್ನು ಕೂಡಿಸಿಕೊಂಡು ನಮ್ಮ ಭಾರತೀಯ ತತ್ವದ ಆಧಾರದ ಮೇಲೆ ಶಿಕ್ಷಣ ಸಂಸ್ಥೆಯನ್ನು ಕಟ್ಟಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗುರುಕುಲ ಪಬ್ಲಿಕ್ ಸ್ಕೂಲ್ನ ಜಂಟಿ ವ್ಯವಸ್ಥಾಪಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಂಟಿ ವ್ಯವಸ್ಥಾಪಕ ಟ್ರಸ್ಟಿ ಅನುಪಮಾ ಎಸ್.ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಉಡುಪಿ ಜಿಲ್ಲೆಯ ಚೀಫ್ ಕಮೀಷನರ್ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸ್ಕೌಟ್ ಕಮೀಷನರ್ ಜನಾರ್ದನ ಕೊಡವೂರು, ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ಸುಮನ್ ಶೇಖರ್ ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲೆ ಡಾ.ರೂಪಾ ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿಯರಾದ ಸುಷ್ಮಾ ಅತಿಥಿಗಳನ್ನು ಪರಿಚಯಿಸಿದರು. ನಾಗರತ್ನ ಕಾರ್ಯಕ್ರಮ ನಿರ್ವಹಿಸಿದರು. ಶೈಲಜಾ ವಂದಿಸಿದರು.











