ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು , ಇಲ್ಲಿ ಸೋಣೆ ತಿಂಗಳ ಶುಭ ಮಂಗಳವಾರ, ಭಾದ್ರಪದ ಮಾಸದ ಗೌರಿ ತದಿಗೆಯಂದು ಗೌರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಸಂಸ್ಥೆಯ ಎಲ್ಲಾ ಶಿಕ್ಷಕಿಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಮಹಿಳಾ ಸಿಬ್ಬಂದಿಗಳಿಗೆ ಬಳೆಗಾರರಿಂದ ಗಾಜಿನ ಬಳೆ ತೊಡಿಸಿ, ಗೌರಿ ಪೂಜೆ ಮಾಡಿ ವಿಶೇಷ ಸಿಹಿ ಊಟದೊಂದಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಳೆಗಾರರಿಗೆ ಸಂಪ್ರದಾಯದಂತೆ ಮರ್ಯಾದೆಯೊಂದಿಗೆ ಅಕ್ಕಿ,ಕಾಯಿ, ಎಲೆ, ಅಡಿಕೆ, ಬಾಳೆ ಹಣ್ಣು,ಬಳೆಯ ಹಣ ನೀಡಿ ಗೌರವಪೂರ್ವಕ ಧನ್ಯವಾದಗಳನ್ನು ತಿಳಿಸುವ ಪರಿಪಾಠ ಮಕ್ಕಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರು ಬಳೆ ತೊಡಿಸುವುದರ ಹಿಂದಿನ ವೈಜ್ಞಾನಿಕ ಮಹತ್ವ ತಿಳಿಸಿ, ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದರು.
ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಯವರು ಮತ್ತು ಎಲ್ಲಾ ನಿರ್ದೇಶಕರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬದ ಯತಾರ್ಥ ಆಚರಣೆಗೆ ಅಭಿನಂದನೆ ತಿಳಿಸಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದರು.











