ಕುಂದಾಪುರ ಮಿರರ್ ಸುದ್ದಿ…
ಕೋಟ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಸಮರ್ಪಕ ಬಳಕೆ ಎಂಬುದು ಈ ದಿನದ ತುರ್ತು ಅವಶ್ಯಕತೆಗಳಲ್ಲಿ ಒಂದಾಗಿದೆ. ಪ್ರತಿಯೋರ್ವ ಶಿಕ್ಷಕರು ಇದನ್ನು ಮನಗಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಈ ತಂತ್ರಜ್ಞಾನಗಳ ಅಧ್ಯಯನ ನಡೆಸಿ ಬದಲಾವಣೆಯ ಪರ್ವದಲ್ಲಿ ವಿದ್ಯಾರ್ಥಿಗಳಿಗೊಸ್ಕರ ನಮ್ಮಿಂದಾದ ಕೊಡುಗೆಗಳನ್ನು ನೀಡಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್. ನಾಯಕ್ ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಸಂಸ್ಥೆಗೆ ಕಂಪ್ಯೂಸಾಪ್ಟ್ ಕೋಟೇಶ್ವರ ಇವರು ವಿದ್ಯಾರ್ಥಿಗಳ ಕಲಿಕೆಗಾಗಿ ದೇಣಿಗೆಯಾಗಿ ನೀಡಿದ ಎಲ್ಸಿಡಿ ಪ್ರೊಜೆಕ್ಟರನ್ನು ಸ್ವೀಕರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಂಪ್ಯೂಸಾಪ್ಟ್ ಕೋಟೇಶ್ವರ ಸಂಸ್ಥೆಯ ಶಿಕ್ಷಕಿಯರಾದ ಶೋಭಾ ಮತ್ತು ಆಶಾ ಇವರು ತಮ್ಮ ಸಂಸ್ಥೆಯ ಪರವಾಗಿ ಪ್ರೊಜೆಕ್ಟರನ್ನು ಕಾಲೇಜಿಗೆ ಹಸ್ತಾಂತರಿಸಿದರು.
ಪತ್ರಕರ್ತ ಸೋಮಶೇಖರ ಪಡುಕೆರೆ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಉಷಾದೇವಿ ಜೆ.ಎಸ್, ಐಕ್ಯೂಎಸಿ ಸಂಚಾಲಕ ನಾಗರಾಜ ಯು ಉಪಸ್ಥಿತರಿದ್ಧರು.
ಸಹಾಯಕ ಪ್ರಾಧ್ಯಾಪಕ ಸಂತೋಷ ನಾಯ್ಕ ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಗ್ರಂಥಪಾಲಕ ರವಿಚಂದ್ರ ಹೆಚ್.ಎಸ್ ವಂದಿಸಿದರು.











