ಸ್ವಚ್ಛತೆಯ ಬಗ್ಗೆ ಪ್ರತಿ ಮನೆಯಲ್ಲಿ ಜಾಗೃತಿ ಮೊಳಗಬೇಕು – ಜಿ.ತಿಮ್ಮ ಪೂಜಾರಿ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸ್ವಚ್ಛತಾ ಅಭಿಯಾನ ಸಂಘ ಸಂಸ್ಥೆಗಳಿಗೆ ಸೀಮಿತಗೊಳ್ಳದೆ ಪ್ರತಿ ಮನೆಯಲ್ಲೂ ಇದರ ಬಗ್ಗೆ ಜಾಗೃತಿ ಮೊಳಗಬೇಕು. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ನಿರ್ದೇಶಕ ಜಿ. ತಿಮ್ಮ ಪೂಜಾರಿ ಕರೆ ನೀಡಿದರು.
ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ಗೀತಾನಂದ ಟ್ರಸ್ಟ್ ಪಡುಕರೆ, ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಸಿನಿಯರ್ ಕೋಟ ಲಿಜನ್ ಸಹಯೋಗದೊಂದಿಗೆ ಕೋಟ ಗ್ರಾ.ಪಂ. ಸಂಯೋಜನೆಯೊಂದಿಗೆ 278ನೇ ಭಾನುವಾರದ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರು ಅರಿತು ಅದರ ಬಗ್ಗೆ ಜಾಗೃತರಾಗುವುದು ಒಳಿತು ಎಂದು, ಪಂಚವರ್ಣ ನಿರಂತರ ಸಾಮಾಜಿಕ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕೋಟದ ಮೂಡುಗಿಳಿಯಾರು ರಸ್ತೆ,ಗಿಳಿಯಾರು ಶಾಲಾ ವಠಾರ ಭಾಗದಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಸಾಕಷ್ಟು ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಿತು.
ಈ ಸಂದರ್ಭದಲ್ಲಿ ಪಂಚವರ್ಣ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್ , ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಹಂದಟ್ಟು ಮಹಿಳಾ ಬಳಗದ ಸ್ಥಾಪಕಾಧ್ಯಕ್ಷೆ ಪುಷ್ಭ ಹಂದಟ್ಟು, ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಜೆಸಿ ಕೇಶವ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.











